ಸ್ಪೂರ್ತಿ ವಿಶೇಷ ಶಾಲೆಯಲ್ಲಿ ಅಂಚೆ ಆಧಾರ್, ವಿಮಾ ಶಿಬಿರ, ಪೋಷಕರ ಸಭೆ
ಮೂಡುಬಿದಿರೆ: ಬೆಳುವಾಯಿ ವಿದ್ಯಾವರ್ಧಕ ಸಂಘ, ರಿಜುವಿನೇಟ್ ಚೈಲ್ಡ್ ಫೌಂಡೇಶನ್ ಪ್ರಾಯೋಜಕತ್ವದ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಜಂಟಿ ಸಹಯೋಗದಲ್ಲಿ ಆಧಾರ್ ಈ ನೋಂದಣಿ, ತಿದ್ದುಪಡಿ, ಸೇವಾ ಸೌಲಭ್ಯ, ಆರೋಗ್ಯ, ಅಪಘಾತ ವಿಮಾ ಶಿಬಿರ ಹಾಗೂ ಪೋಷಕರ ಸಭೆಯು ಶನಿವಾರ ನಡೆಯಿತು.
ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ನ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜನಸಾಮಾನ್ಯರ ಸಹಕಾರದೊಂದಿಗೆ ಭಿನ್ನ ಸಾಮಥ್ಯ೯ದ ಮಕ್ಕಳಿಗಾಗಿ ಸಾಮರ್ಥ್ಯದ ಮಕ್ಕಳ ಶಾಲೆಯನ್ನು ಪ್ರಕಾಶ್ ಶೆಟ್ಟಿಗಾರ್ ಅವರು ನಡೆಸುತ್ತಾ ಬಂದಿರುವುದು ಶ್ಲಾಘನೀಯ. ಇಂತಹ ಶಾಲೆಯ ಬಗ್ಗೆ ಸರಕಾರ ಮುಂದೆ ಬಂದು ಸಹಕಾರ ನೀಡುವ ಅವಶ್ಯಕತೆಯಿದೆ ಎಂದರು.
ಪುತ್ತೂರು ಅಂಚೆ ಇಲಾಖೆಯ ಮಾರುಕಟ್ಟೆ ವ್ಯವಸ್ಥಾಪಕ ಗುರುಪ್ರಸಾದ್ ಕೆ.ಎಸ್. ಮಾತನಾಡಿ ವಾರ್ಷಿಕ 559ರೂ. ಕಟ್ಟಿದರೆ 10 ಲಕ್ಷ, 749ರೂಗೆ 15 ಲಕ್ಷ ವಿಮೆ ಹಾಗೂ ಇನ್ನಿತರ ಹಲವಾರು ಸೌಲಭ್ಯಗಳ ಪ್ರಯೋಜನ ಪಡೆಯಬಹುದಾಗಿದೆ ಎಂದು ಇಲಾಖೆಯ ಸಂಪೂರ್ಣ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬೆಳುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಪೂಜಾರಿ, ವಿದ್ಯಾವರ್ಧಕ ಸಂಘದ ಸಂಚಾಲಕ ರಾಜೇಶ್ ಸುವರ್ಣ, ಪ್ರವೀಣ್ ಮಸ್ಕರೇನಸ್, ಪೋಷಕರ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್, ಹೊಸಂಗಡಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ, ಬೆಳುವಾಯಿ ಪ್ರವೀಣ್ ಜೈನ್ ಉಪಸ್ಥಿತರಿದ್ದರು.
ಶಾಲಾ ಸಂಸ್ಥಾಪಕ ಪ್ರಕಾಶ್ ಜೆ ಶೆಟ್ಟಿಗಾರ್ ಸ್ವಾಗತಿಸಿ, ಶಿಕ್ಷಕಿ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಸುಚಿತ್ರಾ ವಂದಿಸಿದರು.