ನಿತ್ಯಾನಂದ ಮುಂಡೋಡಿಯವರಿಗೆ ‘ಕೆಂಪೇಗೌಡ ಪ್ರಶಸ್ತಿ’ ಪ್ರದಾನ

ನಿತ್ಯಾನಂದ ಮುಂಡೋಡಿಯವರಿಗೆ ‘ಕೆಂಪೇಗೌಡ ಪ್ರಶಸ್ತಿ’ ಪ್ರದಾನ


ಸುಳ್ಯ: ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು, ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ, ಮಹಿಳಾ ಘಟಕ, ತರುಣ ಘಟಕ ಮತ್ತು ಗ್ರಾಮ ಸಮಿತಿಗಳ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆ ಹಾಗೂ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಬೋಜಪ್ಪ ಗೌಡ ಸಭಾಂಗಣದಲ್ಲಿ ನಡೆಯಿತು.

ರಾಜಕೀಯ, ಸಾಮಾಜಿಕ, ಸಹಕಾರಿ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಸಹಕಾರಿ, ನಿತ್ಯಾನಂದ ಮುಂಡೋಡಿಯವರಿಗೆ ಕೆಂಪೇಗೌಡ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಮಾರಂಭವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ. ಅವರು, ನಾಡಪ್ರಭು ಕೆಂಪೇ ಗೌಡರು ಬೆಂಗಳೂರಿನ ನಿರ್ಮಾತೃ, ಕೆಂಪೇಗೌಡರು ಬೆಂಗಳೂರಿನ ಅಭಿವೃದ್ಧಿಯ ಹರಿಕಾರರಾದರೆ, ನಿತ್ಯಾನಂದ ಮುಂಡೋಡಿ ಅವರು ಸುಬ್ರಹ್ಮಣ್ಯದ ಅಭಿವೃದ್ಧಿಯ ಹರಿಕಾರರು ಎಂದು ಬಣ್ಣಿಸಿದರು.

ಕೆಂಪೇಗೌಡರ ಬಗ್ಗೆ ಉಪನ್ಯಾಸ ಹಾಗೂ ನಿತ್ಯಾನಂದ ಮುಂಡೋಡಿಯವರ ಬಗ್ಗೆ ಅಭಿನಂದನಾ ಭಾಷಣ ಮಾಡಿದ ಹಿರಿಯ ಸಹಕಾರಿ ಪಿ.ಸಿ. ಜಯರಾಮ ಮಾತನಾಡಿ, ಬೆಂಗಳೂರು ಎಂಬುದು ವಿಶ್ವಕ್ಕೆ ಭಾರತದ ಬ್ರಾಂಡ್ ಹೆಸರು, ಅಂತಹಾ ಬೆಂಗಳೂರು ನಗರವನ್ನು ನಿರ್ಮಿಸಿದ್ದು ಕೆಂಪೇಗೌಡರು ಎಂಬುದು ನಮ್ಮ ಹೆಮ್ಮೆ, ಅವರ ದೂರದೃಷ್ಠಿಯ ಪರಿಣಾಮದಿಂದ ಬೆಂಗಳೂರು ನಗರ ರೂಪುಗೊಂಡಿದೆ ಎಂದು ಹೇಳಿದರು. 

ಸುಳ್ಯದಲ್ಲಿ ನಿತ್ಯಾನಂದ ಮುಂಡೋಡಿಯವರು ಕಾರ್ಯನಿರ್ವಹಿಸದ ಕ್ಷೇತ್ರಗಳೇ ಇಲ್ಲ. ಅವರ ಸಾಮಾಜಿಕ, ಧಾರ್ಮಿಕ ಸೇವೆಗೆ ಕೆಂಪೇಗೌಡ ಪ್ರಶಸ್ತಿ ಇನ್ನಷ್ಟು ಮೆರುಗು ತಂದಿದೆ ಎಂದು ಹೇಳಿದರು. 

ತಾಲೂಕು ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಹಕಾರಿ ಜಾಕೆ ಮಾಧವ ಗೌಡ ಗೌರವ ಅತಿಥಿಗಳಾಗಿದ್ದರು.

ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಸಿ. ಸದಾನಂದ ಮಹಾತ್ಮಾ ಗಾಂಧಿ ಮಲ್ನಾಡು ವಿದ್ಯಾ ಸಂಸ್ಥೆಗಳ ಸಂಚಾಲಕ ದೊಡ್ಡಣ್ಣ ಬರೆಮೇಲು, ಗೌಡರ ಯುವ ಸೇವಾ ಸಂಘಧ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು, ತರುಣ ಘಟಕದ ಅಧ್ಯಕ್ಷ ಪ್ರೀತಮ್ ಡಿ.ಕೆ., ಗೌಡರ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ಕೋಶಾಧಿಕಾರಿ ದಿನೇಶ್ ಮಡ್ತಿಲ, ಮಹಿಳಾ ಘಟಕದ ಕಾರ್ಯದರ್ಶಿ ಸವಿತಾ ಸಂದೇಶ್, ಕೋಶಾಧಿಕಾರಿ ಜಯಶ್ರೀ ಪಲ್ಲತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಮಡಪ್ಪಾಡಿ ಸ್ವಾಗತಿಸಿ, ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article