ಮ್ಯಾಂಗ್ರೋವ್ ಪುನರುಜ್ಜೀವನ ಯೋಜನೆಗೆ ಚಾಲನೆ
Thursday, August 14, 2025
ಮಂಗಳೂರು: ನೇತ್ರಾವತಿ ನದಿ ದಂಡೆಯಲ್ಲಿ ಮ್ಯಾಂಗ್ರೋವ್ ಪುನರುಜ್ಜೀವನ ಉಪಕ್ರಮವನ್ನು ಸಿಂಜಿನ್, ಅರಣ್ಯ ಇಲಾಖೆ, ಫಿಶರೀಶ್ ಕಾಲೇಜ್, ಸೆಂಟರ್ ಫಾರ್ ಅಡ್ವಾನ್ಸ್ ಲರ್ನಿಂಗ್ (ಸಿಎಫ್ಎಎಲ್) ಮತ್ತು ವನ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಗುರುವಾರ ನಡೆದ ಯೋಜನೆಯ ಚಾಲನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಡಿಎಫ್ಓ ಅಂಥೋನಿ ಮರಿಯಪ್ಪನ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಡಿಯುಡಿಸಿ ಯೋಜನಾ ನಿರ್ದೇಶಕ ಡಾ. ಜಿ. ಸಂತೋಷ್ ಕುಮಾರ್, ಫಿಶರೀಸ್ ಕಾಲೇಜಿನ ಡೀನ್ ಡಾ. ಎನ್.ಎಚ್. ಆಂಜನೇಯಪ್ಪ ಮತ್ತಿತರರು ಉಪಸ್ಥಿತರಿದ್ದರು.
ಶಿಥಿಲವಾಗಿರುವ ಮ್ಯಾಂಗ್ರೋವ್ ಪರಿಸರವನ್ನು ಪುನರ್ ನಿರ್ಮಾಣ ಮಾಡುವುದು, ಜೀವವೈವಿಧ್ಯವನ್ನು ವಿಸ್ತರಿಸುವುದು, ಇಂಗಾಲ ಹೀರಿಕೊಳ್ಳುವಿಕೆಯನ್ನು ಸುಧಾರಿಸುವುದು ಮತ್ತು ಕರಾವಳಿ ಸಂರಕ್ಷಣೆ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳು ಮತ್ತು ಮೀನುಗಾರರು ಸೇರಿದಂತೆ ಸಮುದಾಯ ಪಾಲ್ಗೊಳ್ಳುವಿಕೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ 54 ಎಕರೆ ಮ್ಯಾಂಗ್ರೋವ್ ಅಭಿವೃದ್ಧಿಪಡಿಸಲಾಗುವುದು. ಅತ್ಯಾಧುನಿಕ ಜಿಐಎಸ್ ಮ್ಯಾಪಿಂಗ್, ಡ್ರೋಣ್ ಕಣ್ಗಾವಲು ಮತ್ತು ಜೀವವೈವಿಧ್ಯ ಟ್ರ್ಯಾಕಿಂಗ್ನಂಥ ವ್ಯವಸ್ಥೆಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.
