ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಎಂಎನ್ಆರ್ ಸ್ಪಂದನೆ
Friday, August 29, 2025
ಮಂಗಳೂರು: ಬಿಡುವಿಲ್ಲದೆ ನಿರಂತರ ಸುರಿದ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ತೋಟಗಳಿಗೆ ಕೊಳೆ ರೋಗ ಹರಡಿದೆ. ಇದರಿಂದ ಶೇಕಡಾ 50 ಕ್ಕಿಂತ ಹೆಚ್ಚು ಬೆಳೆ ನಾಶವಾಗಿದ್ದು, ಕೃಷಿಕರ ಆದಾಯಕ್ಕೆ ಬರೆ ಬಿದ್ದಂತಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆಯು ಕೃಷಿ ಆಧಾರಿತವಾಗಿದ್ದು ಇಲ್ಲಿನ ಕೃಷಿಕರು ಹೆಚ್ಚಾಗಿ ಅಡಿಕೆ ಬೆಳೆಯನ್ನು ತಮ್ಮ ಜೀವನಾಧಾರವಾಗಿಸಿಕೊಂಡಿದ್ದಾರೆ
ಅಡಿಕೆ ಬೆಳೆಯ ಬೆಲೆ ಏರಿಳಿತ ಹಾಗೂ ಅಡಿಕೆ ಉತ್ಪನ್ನದ ಪ್ರಮಾಣದಲ್ಲಿ ಏರಿಳಿತವು ಇಲ್ಲಿನ ಜನ ಜೀವನವನ್ನು ತೀವ್ರವಾಗಿ ಸಂಕಷ್ಟಕ್ಕೀಡು ಮಾಡುತ್ತದೆ.
ಅಡಿಕೆಗೆ ಕೊಳೆ ರೋಗದ ಜೊತೆಗೆ ಹಳದಿ ರೋಗದ ಬಾದೆಯು ಹೆಚ್ಚು ಕಂಡು ಬರುತ್ತಿರುವ ಕಾರಣ ಅಡಿಕೆ ಬೆಳೆಗಾರರನ್ನು ಕಂಗೆಡಿಸಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಬ್ಯಾಂಕ್ ಯಾವಾಗಲೂ ರೈತರ ಪರವಾಗಿದ್ದು, ಅಡಿಕೆ ಕೊಳೆ ರೋಗದ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದೆಂದು ಅವರು ತಿಳಿಸಿದ್ದಾರೆ.