
‘ಪ್ರತೀ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಬೇಕು: ಕ್ಯಾ.ಬ್ರಿಜೇಶ್ ಚೌಟ
ದ.ಕ. ಬಿಜೆಪಿ ಮಹಿಳಾ ಮೋರ್ಚಾ ಹಾಗೂ ದಕ್ಷಿಣ ಮಂಡಲದ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬುಧವಾರ ನಗರದ ಬಾವುಟಗುಡ್ಡೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಸ್ವಚ್ಛತೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕರ್ತರು ತಮ್ಮ ವಾರ್ಡ್ಗಳಲ್ಲಿರುವ ಪ್ರತಿ ಮನೆಯನ್ನು ಗಮನಿಸಿ, ಯಾರ ಮನೆಯಲ್ಲಿ ಧ್ವಜ ಇಲ್ಲವೋ ಅವರಿಗೆ ತಿಳಿಸಿ, ಧ್ವಜ ಹಾರಿಸಲು ಸಹಕರಿಸಬೇಕು. ಆಗಸ್ಟ್ 15ರ ವರೆಗೆ ಈ ಧ್ವಜ ಪ್ರತಿ ಮನೆಯ ಎದುರು ರಾರಾಜಿಸಬೇಕು. ವಿಕಸಿತ್ ಭಾರತ್ ಸಂಕಲ್ಪಕ್ಕೆ ಶಕ್ತಿ ತುಂಬುವ ಕಾರ್ಯ ಈ ಮೂಲಕ ನಡೆಯಬೇಕು. ಆ.15ರಂದು ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಮಾಡುವ ಭಾಷಣವನ್ನು ಎಲ್ಲರೂ ಒಟ್ಟಾಗಿ ವೀಕ್ಷಿಸಬೇಕು ಎಂದು ಅವರು ಹೇಳಿದರು.
ಕರಾವಳಿ ಕರ್ನಾಟಕದವರು ಪರಕೀಯರ ವಿರುದ್ಧ ಹೋರಾಟ ನಡೆಸಿದ ಹಲವಾರು ಉದಾಹರಣೆ ಇದೆ. ಕೆದಂಬಾಡಿ ರಾಮಯ್ಯ ಗೌಡರನ್ನು ಸ್ವಾತಂತ್ರ್ಯೋತ್ಸವದ ವೇಳೆ ಮತ್ತೊಮ್ಮೆ ನೆನಪಿಸುವ ಕಾರ್ಯ ನಡೆದಿದೆ. ಈ ಬಾರಿ ರಾಣಿ ಅಬ್ಬಕ್ಕಳ 500ನೇ ಜನ್ಮ ವರ್ಷಾಚರಣೆ ನಡೆಯುತ್ತಿದೆ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸುಳ್ಯದ ರೈತರನ್ನು ಒಗ್ಗೂಡಿಸಿ ಅಮರ ಸುಳ್ಯ ದಂಗೆಯನ್ನು ಮುನ್ನಡೆಸಿದವರು ರಾಮಯ್ಯ ಗೌಡರು. ಬ್ರಿಟಿಷರಿಂದ ತೊಂದರೆಯಾದಾಗ ರೈತರ ಪರವಾಗಿ ಹೋರಾಟ ಮಾಡಿದರು. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ಎಲ್ಲ ಕಡೆಗಳಲ್ಲಿ ಮಹಿಳಾ ಮೋರ್ಚಾ ವತಿಯಿಂದ ಸ್ವಾತಂತ್ರ್ಯ ಯೋಧರ ಪುತ್ಥಳಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ರಾಣಿ ಅಬ್ಬಕ್ಕರ ೫೦೦ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಮುಂದಿನ ಎರಡು ತಿಂಗಳು ನಿರಂತರ ಕಾರ್ಯಕ್ರಮ ನಡೆಸುವ ಯೋಜನೆ ರೂಪಿಸಲಾಗಿದೆ ಎಂದರು.
ಪಕ್ಷದ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ, ಮುಖಂಡರಾದ ನಿತಿನ್ ಕುಮಾರ್, ವಸಂತ ಪೂಜಾರಿ, ರಮೇಶ್ ಕಂಡೆಟ್ಟು, ಪೂರ್ಣಿಮಾ ಮತ್ತಿತರರಿದ್ದರು.