10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Monday, September 22, 2025
ಮಂಗಳೂರು: ವಿಟ್ಲ: ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಶ್ರಫ್ ಯಾನೆ ಚಿಲ್ಲಿ ಅಶ್ರಫ್(32) ಎಂದು ಗುರುತಿಸಲಾಗಿದೆ.
ವಿಟ್ಲ ಪೇಟೆಯಲ್ಲಿ ದಿನಾಂಕ 07-08-2015ರಂದು ಜಗದೀಶ್ ಕಾಮತ್ ಎಂಬವರಿಗೆ ಮೆಣಸಿನ ಪುಡಿ ಎರಚಿ, ದರೋಡೆ ಮಾಡಿದ ಆರೋಪಿ ಅಶ್ರಫ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅದೇ ರೀತಿ ದಿನಾಂಕ 23-01-2016ರಂದು ಕೊಳ್ನಾಡು ಗ್ರಾಮದ ವೈನ್ ಶಾಪ್ ಬಾಗಿಲು ಮುರಿದು ನಗದು ಕಳ್ಳತನ ಮಾಡಿದ್ದ ಈತನ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿತ್ತು.
ಎರಡೂ ಪ್ರಕರಣಗಳಲ್ಲಿ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದ ಈತನ ಬಗ್ಗೆ ನ್ಯಾಯಾಲಯದಿಂದ 82 ಮತ್ತು 83 ವಾರಂಟ್ ಜಾರಿಯಾಗಿತ್ತು.
ಮಂಜೇಶ್ವರ ತಾಲೂಕು ಕೂಳೂರು ಗ್ರಾಮ ಅಶ್ರಫ್ ನನ್ನು ದಿನಾಂಕ 21-09-2025ರಂದು ಕೂಳೂರು ಮಂಜೇಶ್ವರ ಎಂಬಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.