ಸುರಂಗದ ಬಾವಿಯಲ್ಲಿದ್ದೇನೆ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ
Monday, September 29, 2025
ಕೊಣಾಜೆ: ಸುರಂಗದ ಬಾವಿಯಲ್ಲಿದ್ದೇನೆ ಎಂದು ಪತ್ರ ಬರೆದಿಟ್ಟು ವೃದ್ಧರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೈದ ಘಟನೆ ಪಜೀರು ಗ್ರಾಮದ ಬೊಳ್ಳೂರು ಎಂಬಲ್ಲಿ ಕಳೆದ ರಾತ್ರಿ ನಡೆದಿದೆ.
ಲಕ್ಷ್ಮಣ ಸಾಲಿಯಾನ್(75) ಆತ್ಮಹತ್ಯೆಗೈದ ವೃದ್ಧ. ರವಿವಾರ ರಾತ್ರಿ ಟಿವಿ ವೀಕ್ಷಣೆ ಮಾಡುತ್ತಿದ್ದ ಇವರು ಮನೆ ಮಂದಿ ಮಲಗಿದ ಬಳಿಕ ಪತ್ರ ಬರೆದಿಟ್ಟು ಸಮೀಪದ ತೋಟದ ಬಾವಿಗೆ ಹಾರಿ ಆತ್ಮಹತ್ಯೆಗೈದಿದ್ದಾರೆ. ಮೊಬೈಲ್ ನಡಿಯಲ್ಲಿ ಪತ್ರ ಬರೆದಿಟ್ಟಿದ್ದ ಇವರು "ನಾನು ಸಮೀಪದ ಸುರಂಗದ ಬಾವಿಯಲ್ಲಿದ್ದೇನೆ. ನನ್ನ ಮೃತದೇಹವನ್ನು ಮಂದಿರದ ಆಂಬ್ಯುಲೆನ್ಸ್ ನಲ್ಲಿ ಸಾಗಿಸಿ. ಯಾರೂ ಬೇಸರಿಸಬೇಡಿ’ ಎಂದು ಪತ್ರದಲ್ಲಿ ಬರೆದಿದ್ದರು ಎಂದು ತಿಳಿದುಬಂದಿದೆ.
ವೃತ್ತಿಯಲ್ಲಿ ಟೈಲರ್ ಆಗಿದ್ದ ಇವರು ಅನೇಕ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ವಿಪರೀತವಾಗಿ ಕಾಲಿನ ಗಂಟು ನೋವು ಸಮಸ್ಯೆಯಿಂದ ನೊಂದುಕೊಂಡಿದ್ದರು ಎನ್ನಲಾಗಿದೆ.
ಕೊಣಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.