ಸೆ.22 ರಿಂದ ಜಾತಿಗಣತಿ: ಸ್ಪೀಕರ್ ಯು.ಟಿ. ಖಾದರ್
Tuesday, September 16, 2025
ಮಂಗಳೂರು: ಸೆ.22ರಿಂದ ಜಾತಿಗಣತಿ ನಡೆಯಲಿದ್ದು, ಎಲ್ಲಾ ಮನೆಯವರು ಇದಕ್ಕೆ ಸೂಕ್ತ ಸ್ಪಂದನೆ ನೀಡಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಅವರು ಮಾತನಾಡಿ, ಸ್ವಯಂಪ್ರೇರಿತರಾಗಿ ಮನೆಯವರು, ಸಂಘ ಸಂಸ್ಥೆ, ಸಮಾಜ ಸಂಘಟನೆಯವರು ಸಹಕಾರ ಅಗತ್ಯವಾಗಿ ನೀಡಬೇಕು. ಇದು ಪ್ರತೀ ಮನೆಯವರಿಗೆ ಅಗತ್ಯವಾಗಿ ಬೇಕಾಗಿದೆ. ಗಣತಿದಾರರು ಮನೆಗೆ ಬರುವಾಗ ಎಲ್ಲಾ ಮಾಹಿತಿಯನ್ನು ಅವರಿಗೆ ನೀಡಿ ಸಹಕರಿಸಬೇಕು ಎಂದರು.
ಗಣತಿ ವೇಳೆ ಕೇಳಲಾಗುವ ಪ್ರಶ್ನೆಗಳಿಗೆ ಏನು ಉತ್ತರ ನೀಡಬೇಕು ಎಂಬ ಮಾಹಿತಿಗಾಗಿ ಆಶಾ ಕಾರ್ಯಕರ್ತರಿಂದ ಫಾರಂ ಅನ್ನು ಮುಂಚಿತವಾಗಿ ಪಡೆದು ಸಿದ್ಧರಿರಬೇಕು. ಆಧಾರ್ ಮೊಬೈಲ್ ಲಿಂಕ್ ಆಗಿರುವ ಬಗ್ಗೆಯೂ ಗಮನಿಸಬೇಕು. ಈ ಬಗ್ಗೆ ಜನಪ್ರತಿನಿಧಿಗಳು, ಸಮಾಜ ಸಂಘಟನೆಯವರಿಗೆ ಅರಿವು ನೀಡಲು ಸೆ.೧೭ರಂದು ಮಂಗಳೂರಿನಲ್ಲಿ ವಿಶೇಷ ಸಭೆ ಆಯೋಜಿಸಲಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದರು.