ನಕಲಿ ಜಾತಿಪ್ರಮಾಣ ಪತ್ರಕ್ಕೆ ಕಡಿವಾಣ ಬೀಳಲಿ: ಪ್ರೊ. ಎಂ.ಪಿ. ಉಮೇಶ್ ಚಂದ್ರ ಒತ್ತಾಯ
ಮಂಗಳೂರು: ಮೀಸಲಾತಿಯಡಿ ಸರ್ಕಾರದ ಸೌಲಭ್ಯವನ್ನು ಪಡೆಯುವುದಕ್ಕಾಗಿ ನಕಲಿ ಜಾತಿಪತ್ರವನ್ನು ಸೃಷ್ಟಿಸುತ್ತಿರುವುದು ಆತಂಕದ ವಿಚಾರ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಪಿ. ಉಮೇಶ್ ಚಂದ್ರ ಒತ್ತಾಯಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ ಎಸ್ಟಿಯವರಲ್ಲದ ಮಂದಿ ವಿವಿಧ ಯೋಜನೆಗಳ ಲಾಭ ಪಡೆಯಲು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವುದು ಕಂಡುಬರುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರಿಸುವ ಹುನ್ನಾರದೊಂದಿಗೆ ಮುಖ್ಯಮಂತ್ರಿಗಳು ಸೆ.16 ರಂದು ಸಭೆ ಏರ್ಪಡಿಸಿದ್ದಾರೆ. ಈಗಾಗಲೇ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೂ ಈಗ ಮತ್ತೆ ಸಭೆ ಏಕೆ ಎಂದು ಅರ್ಥವಾಗುತ್ತಿಲ್ಲ ಎಂದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಹಿಳಾ ಲೇಖಕಿಯರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ತನಿಖೆಯಲ್ಲಿ ಮಧ್ಯಪ್ರವೇಶ ಮಾಡಲು ಕೇಳಿದ್ದಾರೆ. ರಾಜ್ಯ ಸರ್ಕಾರದ ಎಸ್.ಐ.ಟಿ. ತನಿಖೆಯ ಬಗ್ಗೆ ಅವರಿಗೆ ನಂಬಿಕೆ ಇಲ್ಲವೇ? ಲೇಖಕಿಯರು ಸೋನಿಯಾ ಗಾಂಧಿ ಅವರ ಮೇಲೆ ಅಷ್ಟೊಂದು ನಂಬಿಕೆ ಇಡುವುದೇಕೆ ಎಂದು ಎಂದು ಪ್ರಶ್ನಿಸಿದರು.
ಎಸ್.ಸಿ. ಎಸ್.ಟಿ. ಮತ್ತು ಸಮುದಾಯಗಳ ಸಾಂವಿಧಾನಿಕ ಮೀಸಲಾತಿ ಹಕ್ಕುಗಳನ್ನು ಕಬಳಿಸುವ ಮತ್ತು ಇನ್ನಿಲ್ಲವಾಗಿಸುವ ಕುತಂತ್ರಗಳನ್ನು ನಡೆಯುತ್ತಿದೆ. ಈ ಮೂಲಕ ಎಸ್.ಸಿ. ಎಸ್.ಟಿ ಮತ್ತು ಒಬಿಸಿ ಸಮುದಾಯಗಳ ಕಣ್ಣಿಗೆ ಮಣ್ಣೆರಚಲಾಗುತ್ತಿದೆ ಎಂದು ಆರೋಪಿಸಿದರು.