ಅಮೃತ್ ಯೋಜನೆಯಲ್ಲಿ ಅಸಮಪ೯ಕ ಕಾಮಗಾರಿ: 15 ದಿನಗಳೊಳಗೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಕೋಟ್ಯಾನ್

ಅಮೃತ್ ಯೋಜನೆಯಲ್ಲಿ ಅಸಮಪ೯ಕ ಕಾಮಗಾರಿ: 15 ದಿನಗಳೊಳಗೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಕೋಟ್ಯಾನ್


ಮೂಡುಬಿದಿರೆ: ಪುರಸಭಾ ವ್ಯಾಪ್ತಿಗೆ ತಾನು ವಿಶೇಷ ಆದ್ಯತೆಯಲ್ಲಿ ತಂದಿರುವ ಬಹುಕೋಟಿ ಕುಡಿಯುವ ನೀರಿನ ಅಮೃತ್ ಯೋಜನೆಯ ಕಾಮಗಾರಿಯು ಅಸಮಪ೯ಕವಾಗಿದೆ ಹಾಗೂ ಕಾಮಗಾರಿಗಳ ಬಗ್ಗೆ ಸಮಪ೯ಕ ಮಾಹಿತಿ ತನ್ನ ಹಾಗೂ ಪುರಸಭಾ ಸದಸ್ಯರ ಗಮನಕ್ಕೆ ಬಾರದಿರುವ ಬಗ್ಗೆ ಶಾಸಕ ಉಮಾನಾಥ ಎ. ಕೋಟ್ಯಾನ್ ಅಸಮಾಧಾನ ವ್ಯಕ್ತಪಡಿಸಿ, ಯೋಜನೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ  ಮೂಡುಬಿದಿರೆ ಪುರಸಭೆಯಲ್ಲಿ ನಡೆದಿದೆ.


ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಅಧ್ಯಕ್ಷತೆಯಲ್ಲಿ ಮೂಡುಬಿದಿರೆ ಪುರಸಭೆ ಕಾರ್ಯಾಲಯದಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಅಮೃತ್ ಯೋಜನೆಯ ಅಸಮಪ೯ಕ ಕಾಮಗಾರಿ, ಸಮಸ್ಯೆ, ಘನ ವಾಹನಗಳ ಸಂಚಾರ, ಪೇಟೆಯಲ್ಲಿ ಆಗುತ್ತಿರುವ ಪಾರ್ಕಿಂಗ್ ಸಮಸ್ಯೆ, ರಸ್ತೆಯಲ್ಲಿ ಸೃಷ್ಟಿಯಾಗಿರುವ ಹೊಂಡಗಳ  ಕುರಿತು ಅಯಾಯ ಇಲಾಖೆಗಳ ಅಧಿಕಾರಿಗಳೊಂದಿಗೆ ಶಾಸಕ ಕೋಟ್ಯಾನ್ ಮತ್ತು ಪುರಸಭಾ ಸದಸ್ಯರು ಚಚೆ೯ ನಡೆಸಿದರು.


ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಸುಮಾರು 77 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಅಮೃತ್ ಯೋಜನೆಯ ಕಾಮಗಾರಿಯಲ್ಲಿ ಲೋಪವಾಗಿರುವುದಕ್ಕೆ ಮಾತನಾಡಿದ ಅವರು   ಪುರಸಭೆ ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ ನಡೆಸಿದ್ದೀರಿ. ಇದರಲ್ಲಿ ಸಾಕಷ್ಟು ಲೋಪದೋಷಗಳಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದಿನ 15 ದಿನಗಳಲ್ಲಿ ಲೋಪವಿರುವ ಕಾಮಗಾರಿಯನ್ನು ಸರಿಪಡಿಸಬೇಕು. ಅದರ ಬಳಿಕವಷ್ಟೇ ಹೊಸ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಎಚ್ಚರಿಸಿದರು. 


ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಿ ಯೋಜನೆಯನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕೆಂದು ಅಧಿಕಾರಿಗಳಲ್ಲಿ ಹಲವು ಬಾರಿ ವಿನಂತಿಸಿದ್ದರೂ, ಯಾವುದೇ ಸ್ಪಂದನೆ ಇಲ್ಲ. ಯಾವುದೇ ಯೋಜನೆ ಜನೋಪಯೋಗಿಯಾಗಿರಬೇಕೇ ಹೊರತು, ಜನರಿಗೆ ತೊಂದರೆ ಮಾಡುವಂತಿರಬಾರದು. ಅಧಿಕಾರಿಗಳು ನಾಟಕ ಮಾಡುವುದನ್ನು ಬಿಟ್ಟು, ಸರಿಯಾಗಿ ಕೆಲಸ ಮಾಡಬೇಕೆಂದು ಹಿರಿಯ ಸದಸ್ಯ ಪಿ.ಕೆ ಥೋಮಸ್ ಹೇಳಿದರು. 


ಟ್ರಾಫಿಕ್ ಸಮಸ್ಯೆ ನಿವಾರಿಸಲು ಸಿಬಂದಿಗಳ ಕೊರತೆಯಿದೆ ಆದರೂ ಪರಿಹಾರಕ್ಕೆ ಆಧ್ಯತೆ ನೀಡುವೆ: ಸಂದೇಶ್ ಪಿ.ಜಿ.

ಪೇಟೆಯ ಮುಖ್ಯ ರಸ್ತೆ ಹಾಗೂ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಸಮಸ್ಯೆಗಳಾಗುತ್ತಿದೆ. ಇಂದಿರಾಗಾಂಧಿ ವಾಣಿಜ್ಯ ಸಂಕೀಣ೯ದ ಬಳಿ ಸಹಿತ ನೋ ಪಾಕಿ೯ಂಗ್ ನಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿ ಹೋಗುವುದರಿಂದ ಸಾವ೯ಜನಿಕರು ತೊಂದರೆಯನ್ನು ಅನುಭವಿಸುತ್ತಿರುವ ಬಗ್ಗೆ ಸದಸ್ಯರು ಸಭೆಯ ಗಮನಕ್ಕೆ ತಂದರು. 

ಇದಕ್ಕೆ ಉತ್ತರಿಸಿದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಅವರು ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಮೇಲ್ದರ್ಜೆಗೇರಿದ ಬಳಿಕ 70 ಸಿಬ್ಬಂದಿಗಳ ಪೈಕಿ 40 ಹುದ್ದೆಗಳು ಇದ್ದು, ಕೇವಲ 28 ಮಂದಿ ಮಾತ್ರ ಈಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ 7 ಮಂದಿ ಪೊಲೀಸ್ ಸಿಬ್ಬಂದಿಗಳು ಸೇರ್ಪಡೆಯಾಗಲಿದ್ದರೆ ಸಧ್ಯ ಇರುವ ವ್ಯವಸ್ಥೆಯಲ್ಲಿ ಪೇಟೆಯ ಟ್ರಾಫಿಕ್ ಕಂಟ್ರೋಲ್‌ಗೆ ಹೆಚ್ಚಿನ ಆಧ್ಯತೆ ನೀಡುತ್ತೇವೆ ಎಂದರು. 


ನವೆಂಬರ್‌ನೊಳಗೆ ರಸ್ತೆ ಗುಂಡಿಗಳಿಗೆ ಮುಕ್ತಿ: 

ಪುರಸಭೆ ವ್ಯಾಪ್ತಿಯಲ್ಲಿ ಪಿಡಬ್ಲ್ಯೂಡಿ ರಸ್ತೆಗಳು ಹೊಂಡಮಯವಾಗಿದ್ದು  ಇದಕ್ಕೆ ಸಾವ೯ಜನಿಕರು ತಮ್ಮ ಬಗ್ಗೆ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆಂದು ಪುರಸಭೆ ಸದಸ್ಯರು ಅಕ್ರೋಶ ವ್ಯಕ್ತಪಡಿಸಿದರು. 

ಮಳೆ ಬರುತ್ತಿರುವ ಕಾರಣ ರಸ್ತೆ ಗುಂಡಿಗಳನ್ನು ಮುಚ್ಚಲು ಆಗುತ್ತಿಲ್ಲ. ಆದರೂ ತಾತ್ಕಲಿಕವಾಗಿ ರೆಡಿಮಿಕ್ಸ್ ಬಳಸಿ ಕೆಲವು ಕಡೆ ಗುಂಡಿ ಮುಚ್ಚಿದ್ದೇವೆ. ನವೆಂಬರ್ ತಿಂಗಳೊಳಗೆ ಸೂಕ್ತ ರೀತಿಯಲ್ಲಿ ಗುಂಡಿ ಮುಚ್ಚುತ್ತೇವೆ ಎಂದು ಪಿಡಬ್ಲ್ಯೂಡಿ ಇಂಜಿನಿಯರ್ ಶ್ರೀಧರ್ ಭರವಸೆ ನೀಡಿದರು.

ನಂತರ ಸದಸ್ಯ ಕೊರಗಪ್ಪ ಅವರು ಕಸ ವಿಲೇವಾರಿಯ ಬಗ್ಗೆ ಚಚೆ೯ ನಡೆಸಿದರು. 

ಉಪಾಧ್ಯಕ್ಷ ನಾಗರಾಜ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಭು, ಸದಸ್ಯರಾದ ಪುರಂದರ ದೇವಾಡಿಗ,  ಸುರೇಶ್ ಕೋಟ್ಯಾನ್, ಪ್ರಸಾದ್ ಕುಮಾರ್, ರಾಜೇಶ್ ನಾಯ್ಕ್, ನವೀನ್ ಶೆಟ್ಟಿ, ಇಕ್ಬಾಲ್ ಕರೀಂ, ಶ್ವೇತಾ ಪ್ರವೀಣ್, ಸುಜಾತ ಶಶಿಕಿರಣ್, ದಿವ್ಯಾ ಜಗದೀಶ್, ಸೌಮ್ಯ ಶೆಟ್ಟಿ ಮುಖ್ಯಾಧಿಕಾರಿ ಇಂದು ಎಂ., ಪರಿಸರ ಅಭಿಯಂತರೆ ಶಿಲ್ಪಾ, ಎಂಜಿನಿಯರ್ ನಳಿನ್, ಅಮೃತ್ ಯೋಜನೆಯ ಅಧಿಕಾರಿಗಳಾದ ರಕ್ಷಿತ್, ಶುಭಾ ಲಕ್ಷ್ಮೀ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article