
ಕುಕ್ಕೆ ದೇವಳದ ಸುತ್ತು ಪೌಳಿ ಮರು ನಿರ್ಮಾಣ ಹಾಗೂ ನೂತನ ಗಣಪತಿ ಗುಡಿ ಯೋಜನೆ ಸಿದ್ದ: ಹರೀಶ್ ಇಂಜಾಡಿ
ದೇವಸ್ಥಾನಕ್ಕೆ ಸಂಬಂಧಿಸಿ ಸುತ್ತು ಪೌಳಿ ಕೆಲಸ ಅತಿ ಮಹತ್ವದ್ದು, ಲೋಕೋಪಯೋಗಿ ಇಲಾಖೆ ಯೋಜನೆ ರೂಪಿಸುತಿದ್ದು ಪೊಳಲಿ, ಕಾಪು ಮಾರಿಗುಡಿ ಮತ್ತಿತರ ದೇವಸ್ಥಾನದ ಮಾದರಿ ಅದ್ಯಯನ ಮಾಡಲಾಗಿದೆ. ತೆರವು ಸಂದರ್ಭ ನಿಯಮಗಳ ಬಗ್ಗೆಯೂ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದಕ್ಕೆ ಸಂಬಂಧಿಸಿದ ತಾಂಬೂಲ ಪ್ರಶ್ನೆಯಲ್ಲಿ ಅನುಗ್ರಹವೂ ಇರುವುದಾಗಿ ಕಂಡು ಬಂದಿದೆ ಎಂದು ವ್ಯವಸ್ಥಾಪನಾ ಸಮಿತಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಮಾಹಿತಿ ನೀಡಿದರು.
ಅವರು ಸೆ.19 ರಂದು ದೇವಸ್ಥಾನದ ಆಡಳಿತ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಇತ್ತೀಚೆಗೆ ನಡೆದ ತಾಂಬೂಲ ಪ್ರಶ್ನೆಯಲ್ಲಿ ಕಂಡಂತೆ ಗರ್ಭ ಗುಡಿಯ ನೈರುತ್ಯ ಭಾಗದಲ್ಲಿ ಸುತ್ತು ಪೌಳಿಯ ಒಳಗಡೆ ಗಣಪತಿ ಗುಡಿಯೂ ಆಗಬೇಕಿದ್ದು ಅದು ಕೂಡ ಸುತ್ತು ಪೌಳಿ ಪುನರ್ ರಚನೆ ಸಂದರ್ಭ ಆಗಲಿದೆ ಎಂದರು. ಈ ಭಾರಿಯ ಜಾತ್ರೆ ಮುಗಿದ ತಕ್ಷಣ ಕೆಲಸ ಆರಂಭಿಸಲಾಗುವುದು ಎಂದರು.
ಪಾರಂಪರಿಕ ರಥ ಬೀದಿ, 5 ಸಾವಿರ ಜನಕ್ಕೆ ಭೋಜನ ಶಾಲೆ:
ರಥಬೀದಿ ಪಕ್ಕ ಹಿಂದಿನ ಕುಮಾರ ಕೃಪಾ ಹೊಟೇಲ್ ಇದ್ದ ಜಾಗದಲ್ಲಿ ಸುಮಾರು 5000 ಜನರು ಏಕ ಕಾಲದಲ್ಲಿ ಕುಳಿತುಕೊಳ್ಳ ಬಹುದಾದ ಭೋಜನ ಶಾಲೆ, ಪಾಕ ಶಾಲೆ ಮಾಡಲಾಗುವುದು ಇದಕ್ಕೆ ಯೋಜನೆ ರೂಪಿಸಿಲಾಗಿದೆ. ಅಂದಾಜು ನೂರು ಕೋಟಿ ಇದಕ್ಕೆ ಬೇಕಾಗಬಹುದು ಎಂದರು.
ಇದಲ್ಲದೆ ಪಾರಂಪರಿಕ ರಥ ಬೀದಿ ಮಾಡಲಾಗುವುದು, ದೇವಸ್ಥಾನದ ಮುಂಭಾಗವೂ ಪ್ರವೇಶ ದ್ವಾರ ಮಾಡಲಾಗುವುದು ಎಂದರು.
ಎಂಟು ಎಕರೆ ಅರಣ್ಯ ಭೂಮಿ ವಿನಮಯ ಮಾಡುಕೊತ್ತೇವೆ:
ಕುಮಾರ ಪರ್ವತದಲ್ಲಿ ಅರಣ್ಯ ಭಾಗದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ೮ ಎಕ್ರೆ ಜಾಗವಿದೆ. ಅದಕ್ಕಾಗಿ ಅರಣ್ಯ ಇಲಾಖೆಯೊಂದಿಗೆ ಕೊಡುಕೊಳ್ಳುವಿಕೆ ಕ್ರಮ ಮುಂದುವರೆಸಲು ದೇವಸ್ಥಾನಕ್ಕೆ ಹೊಂದಿಕೊಳ್ಳುವ ಅರಣ್ಯ ಭೂಮಿಯನ್ನು ಕೇಳಿ ಅವರಿಗೆ ಎಂಟು ಎಕರೆ ಜಾಗ ಕೊಟ್ಟು ನಮಗೆ ಅಗತ್ಯ ಇರುವಲ್ಲಿ ಅದನ್ನು ಪಡೆದು ಅಭಿವೃದ್ಧಿ ಮಾಡುತ್ತೇವೆ ಇದಕ್ಕೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪಾರ್ಕಿಂಗ್ ಶುಲ್ಕವೂ ಆದಾಯದ ಮೂಲ:
ಸುಬ್ರಹ್ಮಣ್ಯ ಪಾರ್ಕಿಂಗ್ ಶುಲ್ಕ ಆರಂಭವಾಗಿದ್ದು ಆರು ತಿಂಗಳ ಹಿಂದೆ ಇದರ ಪ್ರಕ್ರೀಯೆ ಆರಂಭವಾಗಿತ್ತು. ಆಗ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇರಲಿಲ್ಲ. ಬೇರೆಬೇರೆ ಕಡೆ ಹೋಲಿಸಿದಲ್ಲಿ ಇಲ್ಲಿ ಅತಿ ಕಡಿಮೆ ಶುಲ್ಕ ವಿಧಿಸಲಾಗಿದೆ. ಒಂದಷ್ಟು ಖರ್ಚು ಹೆಚ್ಚಾದಾಗ ಆದಾಯದ ಮೂಲಗಳ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಎಲ್ಲೆಲ್ಲಾ ಪಾರ್ಕಿಂಗ್ ವಿಧಿಸಲಾಗುವುದೋ ಅಲ್ಲಿ ಇಂಟರ್ ಲಾಕ್ ಆಳವಡಿಸಿ ಅಲ್ಲಿ ಕೆಲ ಉತ್ತಮ ಸೌಲಭ್ಯ ಗಳನ್ನು ಮಾಡಲಾಗುವುದು ಚಾಲಕರಿಗೆ ಕುಳಿತು ಕೊಳ್ಳುವ ವ್ಯವಸ್ಥೆ ಇತ್ಯಾದಿ ಮಾಡಲಾಗುವುದು ಎಂದರು.
ರಸ್ತೆ ಕೆಲಸ ಪೂರ್ಣ ಗೊಳಿಸುತ್ತೇವೆ:
ಪಿ.ಯು ಕಾಲೇಜು ಬಳಿ ಇರುವ ನಕ್ಷತ್ರ ವನವನ್ನು ಗೋ ಶಾಲೆಯಾಗಿ ಮಾಡಲಾಗುವುದು. ಅಪೂರ್ಣಗೊಂಡ ರಸ್ತೆಗಳು ಭೂ ಸ್ವಾದೀನದ ಬಗ್ಗೆ ನ್ಯಾಯಾಲಯದಲ್ಲಿರುವ ಕಾರಣ ವಿಳಂಬವಾಗಿದೆ ಉಳಿದಿರುವುದನ್ನು ಕೆಲಸ ಪೂರ್ಣ ಗೊಳಿಸುತ್ತೇವೆ ಎಂದರು. ಸಾವಾರಿ ಮಂಟಪ ದೇವರಗದ್ದೆ ರಸ್ತೆ ಲಭ್ಯ ಇರುವಲ್ಲಿ ಅಭಿವೃದ್ಧಿ ಪಡಿಸುತ್ತೇವೆ. ಕುಮಾರಧಾರ ನದಿ ಸ್ನಾನ ಘಟ್ಟ ಬಳಿ ತಡೆಬೇಲಿ ಹಾಕಲಾಗುವುದು. ಇದರಿಂದ ಭಕ್ತರಿಗೆ ಪ್ರಯೋಜನ ಆಗಲಿದೆ ಎಂದರು. ಸರ್ಪ ಸಂಸ್ಕಾರರದ ಭೋಜನ ಶಾಲೆಯಲ್ಲಿ ಎತ್ತರದಲ್ಲಿ ಕುಳಿತು ಊಟ ಮಾಡುವ ವ್ಯವಸ್ಥೆ ಆಗಬೇಕಾಗಿದೆ, ದೇವಸ್ಥಾನಕ್ಕೆ ಪತ್ಯೇಕ ಘನ ತ್ಯಾಜ್ಯ ಘಟಕ ವೂ ಪ್ರಸ್ತಾಪದಲ್ಲಿದೆ ಇದಕ್ಕೂ ಕ್ರಮ ಕೈಗೊಳ್ಳುತ್ತೇವೆ ಎಂದವರು ತಿಳಿಸಿದರು.
ಬೀದಿ ಬದಿ ವ್ಯಾಪಾರಕ್ಕೆ ಅವಕಾಶ:
ಬೀದಿ ಬದಿ ವ್ಯಾಪಾರಸ್ಥರಿಗೆ ರಸ್ತೆ ಬದಿ ಅಂಗಡಿ ಒದಗಿಸುತ್ತೇವೆ. ಧಾರ್ಮಿಕ ದತ್ತಿ ಇಲಾಖೆ, ದೇವಸ್ಥಾನದ ಅಧಿಕಾರಿಗಳಿದ್ದು ಇದಕ್ಕೆ ಸೂಕ್ತ ಕಾನೂನಿನಂತೆ ಕ್ರಮದಂತೆ ಶಾಶ್ವತ ವ್ಯವಸ್ಥೆ ಆಗುವಂತೆ ಯೋಜನೆ ರೂಪಿಸುತ್ತೇವೆ ಎಂದರು.
ಇದಲ್ಲದೆ ಅಟೊ ಮೇಟಿಕ್ ಸೇವಾ ರಸೀದಿ, ಸಿಬ್ಬಂದಿಗಳಿಗೆ ಕೊಠಡಿ, ನಾಲ್ಕು ಕಡೆ ವಸತಿ ಗೃಹ, ವಿವಿಐಪಿ ಕೊಠಡಿ, ತುಂಬಾ ಜನ ಒಂದೇ ಕಡೆ ಉಳಿದುಕೊಳ್ಳುವ ಡಾಮೆಟ್ರಿಗಳು ವ್ಯಾಪಾರ ಸಂಕೀರ್ಣ ಇತ್ಯಾದಿಗಳನ್ನು ನಿರ್ಮಿಸುವ ಯೋಜನೆಯೂ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಜಿತ್ ಕುಮಾರ್, ಡಾ. ರಘು, ಶ್ರೀಮತಿ ಲೀಲಾಮನಮೋಹನ್, ಪವೀಣ ರೈ, ಸೌಮ್ಯ ಭರತ್, ಮಾಸ್ಟರ್ ಪ್ಲಾನ್ ಸಮಿತಿ ಸತೀಶ್ ಕೂಜುಗೋಡು, ಪವನ್ ಎಂ.ಡಿ. ಉಪಸ್ಥಿತರಿದ್ದರು.