ಸೆ.14 ರಿಂದ 21: ಧರ್ಮಸ್ಥಳದಲ್ಲಿ ಭಜನಾ ಕಮ್ಮಟ
ಉಜಿರೆ: ಧರ್ಮಸ್ಥಳದಲ್ಲಿ ಇಪ್ಪತ್ತೇಳನೆ ವರ್ಷದ ಭಜನಾ ಕಮ್ಮಟ ಸೆ.14 ರಿಂದ 21 ರ ವರೆಗೆ ನಡೆಯಲಿದೆ ಎಂದು ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಮತ್ತು ಕಾರ್ಯದರ್ಶಿ ಎ.ವಿ. ಶೆಟ್ಟಿ ತಿಳಿಸಿದ್ದಾರೆ.
ಖ್ಯಾತ ಗಾಯಕರಾದ ಶಂಕರ್ಶಾನ್ಭಾಗ್, ಅರ್ಚನಾ ಉಡುಪ, ರಾಮಕೃಷ್ಣ ಕಾಟುಕುಕ್ಕೆ, ಉಷಾ ಹೆಬ್ಬಾರ್, ಮಣಿಪಾಲ, ಸೌಮ್ಯ ಸುಭಾಷ್, ಧರ್ಮಸ್ಥಳ, ಮಂಗಲದಾಸ ಗುಲ್ವಾಡಿ, ವಿದುಷಿ ಚೈತ್ರಾ, ಉಜಿರೆ, ಸುನಿಲ್ ಶೆಟ್ಟಿ, ಧರ್ಮಸ್ಥಳ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಕಮ್ಮಟದಲ್ಲಿ ಮಾಹಿತಿ, ಮಾರ್ಗದರ್ಶನ ನೀಡುವರು.
ಪ್ರತಿ ದಿನ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಧಾರ್ಮಿಕ ಉಪಾನ್ಯಾಸ, ಸಂಜೆ ಗಂಟೆ 5.30 ರಿಂದ ನಗರಭಜನೆ ಇದೆ.
ಸೆ.21 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಪೂರ್ವಾಹ್ನ 10 ಗಂಟೆಯಿಂದ 400 ಭಜನಾ ತಂಡಗಳ ಆರು ಸಾವಿರ ಭಜನಾಪಟುಗಳಿಂದ ಶೋಭಾಯಾತ್ರೆ ಹಾಗೂ ಅಮೃತವರ್ಷಿಣಿ ಸಭಾಭವನದಲ್ಲಿ ಸಾಮೂಹಿಕ ನೃತ್ಯಭಜನೆ ನಡೆಯಲಿದೆ.
ಉದ್ಘಾಟನಾ ಸಮಾರಂಭ:
ಸೆ.14 ರಂದು ಬೆಳಗ್ಗೆ 11 ಗಂಟೆಗೆ ಮಹೋತ್ಸವ ಸಭಾ ಭವನದಲ್ಲಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಭಜನಾ ಕಮ್ಮಟವನ್ನು ಉದ್ಘಾಟಿಸುವರು.
ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಧಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.