ಭಜನೆಯಿಂದ ಸಾಮಾಜಿಕ ಸಾಮರಸ್ಯ: ಪ್ರೊ. ಶುಭಾ ಮರವಂತೆ
Thursday, September 18, 2025
ಉಜಿರೆ: ಭಜನೆಯಿಂದ ಸಮಾಜದ ಸಂಘಟನೆಯೊಂದಿಗೆ ಸಾಮಾಜಿಕ ಸಾಮರಸ್ಯ ಮೂಡಿ ಬರುತ್ತದೆ ಎಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ಶುಭಾ ಮರವಂತೆ ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ಭಜನಾ ಕಮ್ಮಟದಲ್ಲಿ ‘ದೈನಂದಿನ ಜೀವನದಲ್ಲಿ ಭಜನೆಯ ಮಹತ್ವ’ದ ಬಗ್ಯೆ ಉಪನ್ಯಾಸ ನೀಡಿದರು.
‘ಭಜನೆ’ ಪದದಲ್ಲಿ ‘ಭ’ ಅಂದರೆ ಭಗವಂತ, ‘ಜ’ ಎಂದರೆ ಜನ್ಮಾಂತರಗಳ ಪಾಪನಾಶ ಹಾಗೂ ‘ನೆ’ ಅಂದರೆ ಭಗವಂತನಲ್ಲಿ ನೆಲೆಯಾಗುವುದು ಎಂದು ಅರ್ಥ. ಶ್ರದ್ಧಾ-ಭಕ್ತಿಯಿಂದ ಭಗವಂತನಿಗೆ ಸಂಪೂರ್ಣ ಶರಣಾದರೆ ಮನಸ್ಸು ಮತ್ತು ದೇಹ ಹಗುರವಾಗುತ್ತದೆ. ಭಜನಾ ಕಮ್ಮಟದ ಮೂಲಕ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಮಾಡುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದು ಅವರು ಹೇಳಿ ಅಭಿನಂದಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಣಿಲದ ಮೋಹನದಾಸ ಸ್ವಾಮೀಜಿ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಪದ್ಮರಾಜ್ ಎನ್. ಕಾರ್ಯಕ್ರಮ ನಿರ್ವಹಿಸಿದರು.