ಶ್ರೀ ವೈಕುಂಠ ಪ್ರಶಸ್ತಿ ಪ್ರದಾನ-ಕರ್ಮಯೋಗಿ ಐರೋಡಿ ವೈಕುಂಠ ಹೆಬ್ಬಾರ್: ಪ್ರಭಾಕರ ಜೋಷಿ

ಶ್ರೀ ವೈಕುಂಠ ಪ್ರಶಸ್ತಿ ಪ್ರದಾನ-ಕರ್ಮಯೋಗಿ ಐರೋಡಿ ವೈಕುಂಠ ಹೆಬ್ಬಾರ್: ಪ್ರಭಾಕರ ಜೋಷಿ


ಕುಂದಾಪುರ: ವೈಕುಂಠ ಹೆಬ್ಬಾರರು ಒಬ್ಬ ಸಮರ್ಥ ನಾಟಕ ನಿರ್ದೇಶಕರಾಗಿ, ಕಲಾವಿದರಾಗಿ ಮತ್ತು ಉದ್ಯಮಿಯಾಗಿ ಪ್ರಸಿದ್ದಿ ಪಡೆದವರು. ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿ ತನ್ನ ವೃತ್ತಿ ಜೀವನ ಪ್ರಾರಂಭಿಸಿದ ಹೆಬ್ಬಾರರು ಶ್ರಮದಿಂದ ಉನ್ನತಿ ಸಾಧಿಸಿದವರು. ಔಷಧ ಅಂಗಡಿ, ಆಸ್ಪತ್ರೆ, ಮೂರು ಮಕ್ಕಳಿಗೆ ವೈದ್ಯಕೀಯ ವಿದ್ಯಾಭ್ಯಾಸ ನೀಡಿದ್ದಲ್ಲದೇ ಹಲವಾರು ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ರೂಪರಂಗ, ಗೆಳೆಯರ ಬಳಗ ಹಂಗಳೂರು ಇವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ನಾಟಕಗಳಿಗೆ ನಿರ್ದೇಶನ ನೀಡಿದವರು. ಹಂಗಾರಕಟ್ಟೆ- ಯಕ್ಷಗಾನ ಕಲಾಕೇಂದ್ರದ ಸದಸ್ಯರಾಗಿದ್ದು, ಅಧ್ಯಕ್ಷರಾಗಿ ಅದರ ಸರ್ವಾಂಗೀಣ ಪ್ರಗತಿಗೆ ಕಾರಣ ಪುರುಷರು. ಸಾರ್ವಜನಿಕವಾಗಿ ಗುರುತಿಸಿಕೊಂಡವರು. ಹಲವರ ಆರೋಗ್ಯ, ವಿದ್ಯಾಭ್ಯಾಸಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಆಧಾರ ಸ್ತಂಭವಾಗಿ ನಿಂತವರು. ಬಡತನದಿಂದ ತನ್ನ ಬೌಧ್ಧಿಕ, ದೈಹಿಕ ಶ್ರಮದಿಂದ ಮೇಲೆಬಂದ ಹೆಬ್ಬಾರರನ್ನು ಕರ್ಮಯೋಗಿ ಎನ್ನಬಹುದು. ಅವರ ಹೆಸರಿನಲ್ಲಿ ಪ್ರತಿವರ್ಷ ಅವರ ಕುಟುಂಬದವರು ಕಲಾವಿದರನ್ನು ಗೌರವಿಸುವ ಕಾರ್ಯ ಶ್ಲಾಘನೀಯ ಎಂದು ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಷಿ ಹೇಳಿದರು. 

ಐರೋಡಿ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ನಡೆದ ರಂಗ ನಿರ್ದೇಶಕ ಐರೋಡಿ ವೈಕುಂಠ ಹೆಬ್ಬಾರ್ ಸಂಸ್ಮರಣೆ - ಶ್ರೀ ವೈಕುಂಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಕಲಾಕೇಂದ್ರದ ಅಧ್ಯಕ್ಷ ಆನಂದ್.ಸಿ.ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಕಾಶವಾಣಿಯ ನಿವೃತ್ತ ಉದ್ಘೋಷಕಿ ನಾರಾಯಣೀ ದಾಮೋದರ್‌ ವೈಕುಂಠ ಹೆಬ್ಬಾರರ ಜೀವನ ವೃತ್ತಾಂತವನ್ನು ತಿಳಿಸುತ್ತಾ ಅವರ ಸಂಸ್ಮರಣಾ ಮಾತುಗಳನ್ನಾಡಿದರು. 

ಅಂತರಾಷ್ಟ್ರೀಯ ತಬಲಾ ವಾದಕ ಕಲ್ಬಾಗ್ ಗೋಪಾಲಕೃಷ್ಣ ಹೆಗಡೆಯವರಿಗೆ 2025 ರ “ಶ್ರೀ ವೈಕುಂಠ” ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು. 

ಜಿ.ಕೆ. ಹೆಗಡೆ ಹರಿಕೇರಿಯವರು ಅಭಿನಂದನಾ ಭಾಷಣ ಮಾಡಿದರು. 

ವೇದಿಕೆಯಲ್ಲಿ ಹೆಬ್ಬಾರ್ ಕುಟುಂಬದವರ ಪರವಾಗಿ ಐರೋಡಿ ನರಸಿಂಹ ಹೆಬ್ಬಾರ್ ಮತ್ತು ಡಾ. ಆದರ್ಶ ಹೆಬ್ಬಾರ್ ಉಪಸ್ಥಿತರಿದ್ದರು. 

ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಗುಂಡ್ಮಿ ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿ, ಸೀತಾರಾಮ ಸೋಮಯಾಜಿ ವಂದಿಸಿದರು

ಸಭಾ ಕಾರ್ಯಕ್ರಮದ ಪೂರ್ವದಲ್ಲಿ 'ಶಲ್ಯ ಭೇದನ' ಮತ್ತು ಕಾರ್ಯಕ್ರಮದ ನಂತರ 'ಶಲ್ಯ ಪರ್ವ' ಯಕ್ಷಗಾನ ತಾಳಮದ್ದಲೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article