ಜೀವದಯಾಷ್ಟಮಿಯ ನಿಮಿತ್ತ ಸಾವಿರಾರು ಶ್ರಾವಕರು 18 ಬಸದಿಗಳ ದರ್ಶನ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ, ಕರ್ನಾಟಕದ ನಾನಾ ಭಾಗಗಳಿಂದ, ಮಹಾರಾಷ್ಟ್ರ, ರಾಜಸ್ಥಾನ್, ತಮಿಳುನಾಡು, ಮಧ್ಯಪ್ರದೇಶ ಮತ್ತು ಕೋಲ್ಕತ್ತಾದಿಂದಲೂ ಸಾವಿರಾರು ಯಾತ್ರಿಕರು ಆಗಮಿಸಿ ಬಸದಿ ದರ್ಶನ ಮಾಡಿದರು.
ಪರಮಪೂಜ್ಯ 108 ಗುಲಾಬ್ ಭೂಷಣ ಮುನಿ ಮಹಾ ರಾಜರ ಉಪಸ್ಥಿತಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಪ್ರಕಾಶನಗೊಂಡ ಎಂ. ವಿ. ಶೆಟ್ಟಿ ಅವರು ಭಾವಾನುವಾದ ಮಾಡಿದ 'ಜೈನ ನ್ಯಾಯ' ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಅನಡ್ಕ ದಿನೇಶ್ ಬೆಟ್ಕೇರಿ ಮನೆತನದಿಂದ ದಾನ ಮಾಡಿದ ಆಚಾರ್ಯರ 'ಇಷ್ಟೋಪದೇಶ' ಗ್ರಂಥ ಮತ್ತು ಸೆಪ್ಟೆಂಬರ್ ತಿಂಗಳ 'ವಿವೇಕ ಜ್ಯೋತಿ' ಮಾಸಿಕವನ್ನು ಬಿಡುಗಡೆ ಮಾಡಲಾಯಿತು. ಆಚಾರ್ಯ ಶ್ರೀಗಳವರು ಶಾಸ್ತ್ರ ಓಂಕಾರ ಬರೆದು ಗ್ರಂಥಗಳನ್ನು ಲೋಕಾರ್ಪಣೆ ಮಾಡಿದರು.
ಧರ್ಮೋಪದೇಶ ನೀಡಿದ ಭಟ್ಟಾರಕ ಸ್ವಾಮೀಜಿ "ಯಾವುದೇ ಜೀವಕ್ಕಾಗಲಿ ಕಷ್ಟ ಕೊಡದೆ ಇರುವುದು ನಿಜವಾದ ಜೀವ ದಯೆ. ಸಕಲ ಜೀವರಾಶಿಗಳ ಬಗ್ಗೆ ದಯೆ ತೋರುವುದು ನಿಜವಾದ ಅಹಿಂಸೆಯಾಗಿದೆ" ಎಂದು ನುಡಿದರು.
ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್, ಎ. ಸುದೇಶ್ ಬೆಟ್ಕೇರಿ, ಬಾಹುಬಲಿ ಪ್ರಸಾದ್, ವಕೀಲರಾದ ಶ್ವೇತಾ ಜೈನ್, ಎಂ. ವಿ. ಶೆಟ್ಟಿ, ಸುದರ್ಶನ್ ಇಂದ್ರ, ಸುವಿಧಿ ಇಂದ್ರ, ವ್ಯವಸ್ಥಾಪಕರಾದ ಸಂಜಯಂತ ಕುಮಾರ್ ಶೆಟ್ಟಿ, ಅಮೆರಿಕಾದ ಕ್ಯಾಲಿಫೋರ್ನಿಯಾದ ಗೂಗಲ್ ಉದ್ಯೋಗಿ ದಂಪತಿ ಚೇತನ್-ಅರ್ಚನಾ, ಸುರೇಶ್ ಬಲ್ಲಾಳ್ ಕಾರ್ಕಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
