ಎಸ್ಡಿಪಿಐಯಿಂದ ಮುಸ್ಲಿಂರನ್ನು ಧರ್ಮದ ಹೆಸರಲ್ಲಿ ಎತ್ತಿಕಟ್ಟುವ ಕೆಲಸ: ನೂರುದ್ಧೀನ್ ಸಾಲ್ಮರ
ಪುತ್ತೂರು: ಅಕ್ರಮ ಗೋ ಸಾಗಾಟ ಆರೋಪಿಯ ವಿರುದ್ದ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದು, ಈ ಬಗ್ಗೆ ಹೇಳಿಕೆ ನೀಡಿರುವ ಪುತ್ತೂರು ಶಾಸಕರ ವಿರುದ್ದ ಮುಸ್ಲಿಮರನ್ನು ಧರ್ಮಾಧಾರಿತವಾಗಿ ಎತ್ತಿಕಟ್ಟುವ ಪ್ರಯತ್ನವನ್ನು ಎಸ್ಡಿಪಿಐ ಮಾಡುತ್ತಿದ್ದು, ಈ ಪ್ರಯತ್ನಕ್ಕೆ ಮುಸ್ಲಿಂ ಸಮುದಾಯ ಕಿವಿ ಕೊಡುವುದಿಲ್ಲ. ಇದೊಂದು ವಿಫಲ ಯತ್ನವಾಗಿದೆ ಎಂದು ಕೆಪಿಸಿಸಿ ಸಂಯೋಜಕ ನೂರುದ್ಧೀನ್ ಸಾಲ್ಮರ ಹೇಳಿದ್ದಾರೆ.
ಅವರು ಶನಿವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಶಾಸಕರು ಅಲ್ಪಸಂಖ್ಯಾತರ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ ಎಂದು ಎಸ್ಡಿಪಿಐ ಸುಳ್ಳು ಪ್ರಚಾರ ಮಾಡುತ್ತಿದೆ. ಅಕ್ರಮ ಗೋ ಸಾಗಾಟದ ಆರೋಪಿಯ ಕಾಲಿಗೆ ಈಗ ಗುಂಡು ಹಾರಿಸಿದ್ದಾರೆ. ಮುಂದೆ ಬೇರೆ ಭಾಗಕ್ಕೂ ಹಾರಿಸುತ್ತಾರೆ ಎಂದು ಶಾಸಕರು ಹೇಳಿರುವುದರಲ್ಲಿ ತಪ್ಪಿಲ್ಲ. ಹಲವು ಕೇಸ್ ಹಾಕಿಸಿಕೊಂಡವರು ಆ ಸ್ಥಳಕ್ಕೆ ಹೋಗಿ ಗೋರಕ್ಷಕರಂತೆ ಫೋಸ್ ಕೊಟ್ಟಿರುವುದು ಖಂಡನೀಯ. ಅವರದೇ ಸರಕಾರ ಇರುವಾಗ ಇಂಥ ಕಠಿಣ ಕ್ರಮ ಕೈಗೊಂಡಿಲ್ಲ ಎಂದೂ ಶಾಸಕರು ಹೇಳಿದ್ದಾರೆ. ಅಕ್ರಮ ಚಟುವಟಿಕೆ ಮಾಡುವವರ ಬಗ್ಗೆ ಅವರು ಹೀಗೆ ಹೇಳಿದ್ದಾರೆಯೇ ಹೊರತು ಅಲ್ಪ ಸಂಖ್ಯಾತರ ಬಗ್ಗೆ ಅಲ್ಲ. ಜಾನುವಾರುಗಳನ್ನು ಕದ್ದು ಸಾಗಾಟ ಮಾಡುವುದನ್ನು ಇಸ್ಲಾಂ ಒಪ್ಪುವುದಿಲ್ಲ. ಅಕ್ರಮ ದನ ಸಾಗಾಟ ಸೇರಿದಂತೆ ಯಾವುದೇ ಅಕ್ರಮಗಳನ್ನು ಯಾರೇ ಮಾಡಿದರೂ ಪೊಲೀಸರು ಬ್ರೇಕ್ ಹಾಕಲಿದ್ದಾರೆ. ಅಪರಾಧಿಯನ್ನು ಆತನ ಧರ್ಮದ ಆಧಾರದಲ್ಲಿ ನೋಡಬಾರದು. ವ್ಯಕ್ತಿ ಮಾಡಿದ ತಪ್ಪಿನಿಂದ ಧರ್ಮಕ್ಕೆ ಕೆಟ್ಟ ಹೆಸರು ಬರಬಾರದು ಎಂದು ಶಾಸಕರು ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ಸರಕಾರ ಈ ಅಕ್ರಮಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಿದೆ ಎಂದೂ ಹೇಳಿದ್ದಾರೆ.
ಶಾಸಕರು ಕಾಂಗ್ರೆಸ್ನ ಜಾತ್ಯಾತೀತ ಮನೋಭಾವನ್ನು ಎತ್ತಿ ಹಿಡಿಯುತ್ತಿದ್ದವರಾಗಿದ್ದು ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಾವಿರಾರು ಮುಸ್ಲಿಮರು ಭಾಗವಹಿಸಿ ದೀಪಾವಳಿ ಉಡುಗೊರೆ ಸ್ವೀಕರಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಅಶೋಕ್ ರೈ ಎಲ್ಲ ಧರ್ಮದವರನ್ನು ಪ್ರೀತಿಸುತ್ತಾರೆ ಮತ್ತು ನೆರವು ನೀಡುತ್ತಿದ್ದಾರೆ. ಅಶೋಕ್ ರೈ ಹಿಂದೆ ಬಿಜೆಪಿಯಲ್ಲಿದ್ದಾಗಲೂ ಸರ್ವಧರ್ಮಗಳನ್ನು ಗೌರವಿಸುತ್ತಿದ್ದರು. ಆಗಲೂ ಅವರು ಮುಸ್ಲಿಂ ವಿರೋಧಿ ಹೇಳಿಕೆ ನೀಡಿರಲಿಲ್ಲ. ಎಲ್ಲಾ ಧರ್ಮಗಳ ಆರಾಧನಾಲಯಗಳಿಗೆ ನೆರವು ನೀಡುತ್ತಿರುವ ಶಾಸಕರು ಯಾವ ಧರ್ಮದವರು ಕರೆದರೂ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇದೀಗ ಅಶೋಕ ಜನಮನವನ್ನು ಟೀಕಿಸುತ್ತಿರುವವರು ಬಿಜೆಪಿ ನಾಯಕರು. ಹೀಗಿರುವಾಗ ಶಾಸಕರು ಬಿಜೆಪಿ ಮನಸ್ಥಿತಿಯಲ್ಲಿದ್ದಾರೆ ಎನ್ನುವುದಕ್ಕೆ ಅರ್ಥವಿಲ್ಲ. ಎಸ್ಡಿಪಿಐ ಕೇವಲ ರಾಜಕೀಯ ಲಾಭಕ್ಕೆ ಇಂಥ ಹೇಳಿಕೆ ನೀಡುತ್ತಿದೆ. ಮುಸ್ಲಿ ಸಮುದಾಯ ಎಸ್ಡಿಪಿಐ ಹೇಳಿಕೆಯನ್ನು ಒಪ್ಪಿಕೊಳ್ಳಲು ಸಾದ್ಯವಿಲ್ಲ ಎಂದು ಹೇಳಿದರು.
ಗೋಷ್ಟಿಯಲ್ಲಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಕಾಂಗ್ರೆಸ್ ಮುಖಂಡರಾದ ನಝೀರ್ ಮಠ, ಶಬೀರ್ ಕೆಂಪಿ ಉಪಸ್ಥಿತರಿದ್ದರು.