ಕೇರಳದಿಂದ ಅಕ್ರಮ ಕಲ್ಲು ಸಾಗಾಟ: ನಾಲ್ವರ ಬಂಧನ
ಉಳ್ಳಾಲ: ಕೇರಳದಿಂದ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಹಾಗೂ ಕೊಣಾಜೆ ಠಾಣಾ ವ್ಯಾಪ್ತಿಯ ಪೊಲೀಸರ ತಂಡ ಮೂರು ಲಾರಿಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ ಘಟನೆ ಗುರುವಾರ ನಡೆದಿದೆ.
ಬಂಧಿತರನ್ನು ಲಾರಿ ಚಾಲಕ ಇಕ್ಬಾಲ್ ಮೋಂಟೆಪದವು, ಮಾಲಕ ಶಫೀಕ್, ಚಾಲಕರಾದ ಅಮ್ಮೆಂಬಳ ನಿವಾಸಿ ಝೈನುದ್ದೀನ್, (42), ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ.
ಪೊಲೀಸರು ಕೆಂಪು ಕಲ್ಲು ಸಾಗಾಟದ ಒಂದು ಲಾರಿಯನ್ನು ಉಳ್ಳಾಲ ಪೊಲೀಸರು ತಲಪಾಡಿ ಯಲ್ಲಿ ಹಾಗೂ ಎರಡು ಲಾರಿಗಳನ್ನು ತೌಡುಗೋಳಿ ಬಳಿ ಕೊಣಾಜೆ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ .ಮಂಜನಾಡಿ ಜಂಕ್ಷನ್ ನಲ್ಲಿ ಕರ್ತವ್ಯದಲ್ಲಿದ್ದ ಪಿಸಿ ಮೊಹಮ್ಮದ್ ಗೌಸ್ ರವರ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿದಾಗ ಒಂದು ಲಾರಿಯಲ್ಲಿ 250 ಕೆಂಪುಕಲ್ಲುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಕೇರಳ ಕಡೆಯಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.ಪೊಲೀಸರು ಲಾರಿ ಹಾಗೂ ಕೆಂಪುಕಲ್ಲುಗಳನ್ನು ಸ್ವಾಧೀನಪಡಿಸಿಕೊಂಡು, ಚಾಲಕ ಅಮ್ಮೆಂಬಳ ನಿವಾಸಿ ಝೈನುದ್ದೀನ್ (42) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ ಗುರುವಾರ ತೌಡುಗೋಳಿ ಬಳಿ ಟಿಪ್ಪರ್ ಲಾರಿಯಲ್ಲಿ 250 ಕೆಂಪುಕಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಚಾಲಕ ಮನೋಜ್ ಕುಮಾರ್ ಪರವಾನಿಗೆ ಹಾಗೂ ರಾಜಧಾನ ಪಾವತಿ ರಸೀದಿ ಇಲ್ಲದೆ ಕೇರಳದ ಬಾವಲಿಗುರಿಯಿಂದ ಕಲ್ಮಿಂಜ ಕಡೆಗೆ ಕಲ್ಲುಗಳನ್ನು ಅಕ್ರಮ ವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ.
ಈ ಲಾರಿ ಹಾಗೂ ಕೆಂಪುಕಲ್ಲುಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಝೈನುದ್ದೀನ್ ಮತ್ತು ಮನೋಜ್ ಕುಮಾರ್ ಅವರನ್ನು ಬಂಧಿಸಿದ ಕೊಣಾಜೆ ಪೊಲೀಸರು ಇಬ್ಬರಿಗೂ ನೋಟೀಸ್ ನೀಡಿದ್ದಾರೆ
ಈ ಬಗ್ಗೆ ಉಳ್ಳಾಲ, ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.