ಮರೀಚಿಕೆಯಾದ ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಂಗಣ
ಆಗಿನ ಬಂಟ್ವಾಳ ಶಾಸಕರು ಹಾಗೂ ಸಚಿವರೂ ಆಗಿದ್ದ ಬಿ. ರಮಾನಾಥ ರೈ ಅವರು, 2018ರ ಮಾರ್ಚ್ 13ರಂದು ಬೆಂಜನಪದವಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಅದಾದ ಬಳಿಕ ರಾಜಕೀಯ ಸ್ಥಿತ್ಯಂತರದಿಂದ ಸರಕಾರವೂ ಬದಲಾಯಿತು, ಶಾಸಕರೂ ಬದಲಾದರು. ರಾಜೇಶ್ ನಾಯ್ಕ್ ಶಾಸಕರಾಗಿ ಆಗಮಿಸಿದ ಬಳಿಕ ಸುಸಜ್ಜಿತವಾದ ಕ್ರೀಡಾಸಂಕೀರ್ಣ ನಿರ್ಮಾಣದ ಕುರಿತು ಪ್ರಸ್ತಾಪಿಸಿ ಕೇಂದ್ರದ ಖೇಲ್ ಇಂಡಿಯಾ ಮೂಲಕ ಬೃಹತ್ ಮೊತ್ತದ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದಾಗಿ ಹೇಳಿದರು.
2025ರ ನವೆಂಬರ್ 3ರವರೆಗೂ ತಾಲೂಕಿನಲ್ಲಿ ವಲಯಮಟ್ಟದ ಕ್ರೀಡಾಕೂಟಗಳು ಬಂಟ್ವಾಳ ಅಸುಪಾಸಿರುವ ಖಾಸಗಿ ಶಾಲಾ ಆಟದ ಮೈದಾನದಲ್ಲಿ ನಡೆದಿವೆ. ಪಿಯು ಕಾಲೇಜಿನ ಮಕ್ಕಳ ಕ್ರೀಡಾಕೂಟ ತಾಲೂಕಿನ ಹೊರಗೆ ನಡೆದಿವೆ.ತಾಲೂಕುಮಟ್ಟದ ಕ್ರೀಡಾಕೂಟ ಇತ್ರೀಚೆಗಷ್ಠೆ ಮೂಡಬಿದ್ರೆಯಲ್ಲಿ ನಡೆದಿದ್ದು ಸದ್ಯಕ್ಕೆ ಬಂಟ್ವಾಳ ತಾಲುಕು ಕ್ರೀಡಾಂಗಣದ ಕನಸು ನನಸಾಗದೆ ಮರೀಚಿಕೆಯಾಗಿಯೇ ಉಳಿದಿದೆ.
ಕ್ರೀಡಾಕೂಟಗಳ ವೇದಿಕೆಯ ಭಾಷಣ ಪೂರ್ತಿ ಅಭ್ಯಾಸ ಮಾಡಿ, ನೀವೊಬ್ಬ ಉತ್ತಮ ಕ್ರೀಡಾಪಟುವಾಗಬಹುದು ಎಂಬ ಸಾಕಷ್ಟು ಸಲಹೆಗಳು ಇರುತ್ತವೆ. ಆದರೇನು ಮಾಡೋಣ ಇಡೀ ಬಂಟ್ವಾಳ ತಾಲೂಕಿನಲ್ಲಿ ಯುವಜನ ಕ್ರೀಡಾ ಇಲಾಖೆಯ ಅಧಿಕಾರಿಯೇ ಇಲ್ಲದೆ ವರ್ಷಗಳು ಸಂದಿದೆ. ಶಾಲೆಗಳಲ್ಲಿಯು ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಸಹಿತ ಸಮಸ್ಯೆಗಳು ಬೆಟ್ಟದಷ್ಟಿವೆ.
ಕ್ರೀಡಾಪಟುಗಳಿಗೆ ಪ್ರಯಾಣದ್ದೇ ಕಷ್ಟ:
ಮಂಗಳೂರು, ಮೂಡುಬಿದಿರೆಯಂಥ ಪ್ರದೇಶಗಳಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ನಡೆಸಿದರೆ, ಪ್ರಯಾಣದ್ದೇ ದೊಡ್ಡ ಸಮಸ್ಯೆ. ಬಹಳಷ್ಟು ವಿದ್ಯಾರ್ಥಿಗಳು ತಾಲೂಕಿನ ಗಡಿಭಾಗಗಳಿಂದ ಆಗಮಿಸುತ್ತಾರೆ. ವಿಟ್ಲ, ವಾಮದಪದವು, ಅಡ್ಯನಡ್ಕದಂಥ ಪ್ರದೇಶಗಳ ಕಾಲೇಜು, ಹೈಸ್ಕೂಲು ವಿದ್ಯಾರ್ಥಿಗಳು ಮಂಗಳಾ ಸ್ಟೇಡಿಯಂ, ಸ್ವರಾಜ್ ಮೈದಾನದಲ್ಲಿ ಭಾಗವಹಿಸಬೇಕಾದರೆ, ಸಾಕಷ್ಟು ಸಮಯ ವ್ಯಯಿಸಬೇಕು.
ಪ್ರತಿ ಬಾರಿ ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ಏರ್ಪಡಿಸುವಾಗಲೂ ಖಾಸಗಿ ಸಂಸ್ಥೆಗಳನ್ನು ಆಶ್ರಯಿಸಬೇಕಾಗುತ್ತದೆ. ಅವು ಸುಸಜ್ಜಿತವಾಗಿರುತ್ತವೆಯಾದರೂ ಅವುಗಳೇ ಶಾಶ್ವತವೇನಲ್ಲ. ಸರಕಾರಿ ಕ್ರೀಡಾಂಗಣಕ್ಕೆ ಶುಲ್ಕದ ಸಮಸ್ಯೆ ಕಡಿಮೆ.
ಜನಪ್ರತಿನಿಧಿಗಳು ಏನಂತಾರೆ?
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಈಗಾಗಲೇ ಖೇಲ್ ಇಂಡಿಯಾ ಮೂಲಕ ಬಂಟ್ವಾಳ ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣಕ್ಕೆ ಪ್ರಸ್ತಾಪನೆ ಸಿದ್ಧವಾಗಿದ್ದು, ಬೆಂಜನಪದವಿನಲ್ಲಿ ಅನುಷ್ಠಾನ ಮಾಡುವ ಕುರಿತು ಚಿಂತನೆಗಳು ಸಾಗಿವೆ ಎಂದು ಹೇಳುತ್ತಾರೆ.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಈ ಕುರಿತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಗೆ ಪತ್ರವೊಂದನ್ನು ಬರೆದಿದ್ದು, ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಬೆಂಜನಪದವು ಸರಕಾರಿ ಪ್ರೌಢಶಾಲೆಯ ಹತ್ತಿರ ತಾಲೂಕು ಕ್ರೀಡಾಂಗಣ ನಿರ್ಮಿಸಲು ಮಂಜೂರಾದ 10 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನೇತ್ರಾವತಿಯಲ್ಲಿ ಸಾಕಷ್ಟು ನೀರು ಹರಿದುಹೋದರೂ, ಸರಕಾರಿ ಮಟ್ಟದಲ್ಲಿ ಅತ್ಯಂತ ಪ್ರಭಾವ ಹೊಂದಿರುವ ಜನಪ್ರತಿನಿಧಿಗಳು ತಾಲೂಕಿನಲ್ಲಿದ್ದರೂ ಸುಸಜ್ಜಿತ ಕ್ರೀಡಾಂಗಣದ ಭಾಗ್ಯ ಮಾತ್ರ ಇಲ್ಲಿನ ಕ್ರೀಡಾಪಟುಗಳಿಗೆ ಸಿಗದಿರುವುದು ವಿಪರ್ಯಾಸವಾಗಿದೆ.