ವರದಕ್ಷಿಣೆ ಕಿರುಕುಳ: ಪತಿ, ಅತ್ತೆಗೆ ಶಿಕ್ಷೆ
ಮಂಗಳೂರು: ಹೆಚ್ಚುವರಿ ವರದಕ್ಷಿಣೆ ತರುವಂತೆ ಒತ್ತಾಯಿಸಿ ವಿವಾಹಿತೆಗೆ ಕಿರುಕುಳ ನೀಡಿದ್ದಲ್ಲದೆ, ದೈಹಿಕವಾಗಿ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ ಆರೋಪಿಗಳಾದ ಪ್ರವೀಣ್ ಕುಮಾರ್ ಮತ್ತು ಲಲಿತಾ ಎಂಬವರಿಗೆ 6 ತಿಂಗಳ ಸಜೆ ಹಾಗೂ 6 ಸಾವಿರ ರೂ. ದಂಡ ವಿಧಿಸಿ 3ನೇ ಜೆಎಂಎಫ್ಸಿ ನ್ಯಾಯಾಲಯ ತೀರ್ಪು ನೀಡಿದೆ.
2016ರ ಎ.11ರಂದು ಪ್ರವೀಣ್ ಕುಮಾರ್ರೊಂದಿಗೆ ತನ್ನ ಮದುವೆಯಾಗಿತ್ತು. ಕೆಲದಿನದ ಬಳಿಕ ಗಂಡ ಪ್ರವೀಣ್ ಕುಮಾರ್ ಮತ್ತು ಅತ್ತೆ ಲಲಿತಾ 9 ಲಕ್ಷ ರೂ. ನಗದು, 10 ಲಕ್ಷದ ರೂ. ಮೌಲ್ಯದ ಚಿನ್ನಾಭರಣಗಳನ್ನು ತರಬೇಕು ಎಂದು ಒತ್ತಾಯಿಸಿ ಹಲ್ಲೆಗೈದಿದ್ದರು. 2017ರ ಸೆ.11ರಂದು ರಾತ್ರಿ 10:30ಕ್ಕೆ ಗಂಡ ಮತ್ತು ಅತ್ತೆ ಮನೆಯಲ್ಲಿ ಮಲಗದಂತೆ ಮಾನಸಿಕ ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಮಹಿಳೆ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
3ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಎಸ್. ವಿಚಾರಣೆ ನಡೆಸಿ ನ.14ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯ ಅಂದಿನ ಠಾಣಾಧಿಕಾರಿ ಸಿದ್ದನಗೌಡ ಭಜಂತ್ರಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಶನ್ ಪರವಾಗಿ ಸರಕಾರಿ ಸಹಾಯಕ ಅಭಿಯೋಜಕಿ ಗೀತಾ ರೈ ವಾದಿಸಿದ್ದರು.