ಪ್ರಾದೇಶಿಕ ಮಾಧ್ಯಮ-ಸಂಸ್ಕೃತಿ ಸೇವೆಗೆ ಡಾ. ಮಂದಾರ ರಾಜೇಶ್ ಭಟ್ ಗೆ ರಾಷ್ಟ್ರೀಯ ಗೌರವ
ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಮತ್ತು ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ಇವರು ಜಂಟಿಯಾಗಿ ಘೋಷಿಸಿರುವ “ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ರೀಜನಲ್ ಮೀಡಿಯಾ” ಪ್ರಶಸ್ತಿಗೆ ಡಾ. ಮಂದಾರ ರಾಜೇಶ್ ಭಟ್ಟರನ್ನು ಆಯ್ಕೆ ಮಾಡಲಾಗಿದೆ. ಪ್ರಾದೇಶಿಕ ಭಾಷೆ, ಸಂಸ್ಕೃತಿ ಮತ್ತು ಮಾಧ್ಯಮಗಳ ಸಮನ್ವಯಿತ ಸೇವೆಗಾಗಿ ದೇಶದ ಮಟ್ಟದಲ್ಲಿ ಈ ಪ್ರಶಸ್ತಿಯು ಲಭಿಸಿದೆ.
ಸಾಂಸ್ಕೃತಿಕ-ಸಾಮಾಜಿಕ ವಲಯಕ್ಕೆ ಕೊಡುಗೆ:
ಡಾ. ಮಂದಾರ ರಾಜೇಶ್ ಭಟ್ಟರು ಪ್ರಾದೇಶಿಕ ದಿನಪತ್ರಿಕೆಗಳು ಮತ್ತು ದ್ವಿಭಾಷಾ ವಾರಪತ್ರಿಕೆಗಳಲ್ಲಿ ನಿರಂತರವಾಗಿ ಬರೆಯುತ್ತಾ ಬಂದಿದ್ದಾರೆ. ಜೊತೆಗೆ, ಸ್ಥಳೀಯ ದೃಶ್ಯ ಮಾಧ್ಯಮದಲ್ಲಿ ನಿರೂಪಣೆ ಮತ್ತು ವರದಿಗಾರಿಕೆಯ ಮೂಲಕ ಜನಸಾಮಾನ್ಯರನ್ನು ತಲುಪಿದ್ದಾರೆ. ಅನೇಕ ಪುಸ್ತಕಗಳ ಪ್ರಕಟಣೆ ಹಾಗೂ ಉಚಿತ ವಿತರಣೆ ಮೂಲಕ ಅವರು ದಕ್ಷಿಣ ಕನ್ನಡದ ಸಾಂಸ್ಕೃತಿಕ–ಸಾಮಾಜಿಕ ವಲಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ.
ಮಂದಾರ ಪ್ರತಿಷ್ಠಾನದ ಅಧ್ಯಕ್ಷರಾಗಿ, ಅವರು ತುಳು ಮತ್ತು ಕನ್ನಡ ಭಾಷೆಯ ಪಾರಂಪರಿಕ ಶೈಲಿಯ “ಮಂದಾರ ರಾಮಾಯಣ” ಮಹಾಕಾವ್ಯದ ಸುಗಿಪು–ದುನೀಪು, ವಾಚನ–ವ್ಯಾಖ್ಯಾನ ಪ್ರಸಾರ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ಸ್ಥಳೀಯ ಸಾಹಿತ್ಯ ಪರಂಪರೆಯ ಸಂರಕ್ಷಣೆಯಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಅದರೊಂದಿಗೆ, ತುಳು ಭಾಷೆಯಲ್ಲಿ ಶ್ರೀಕೃಷ್ಣನ ಬಾಲ್ಯ ಲೀಲೆಗಳನ್ನು ಒಳಗೊಂಡಿರುವ “ಬೀರದ ಬೊಲ್ಪು” ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಮಕ್ಕಳಿಗೂ ಹಿರಿಯರಿಗೂ ತುಳು ಸಂಸ್ಕೃತಿ ತಲುಪುವಲ್ಲಿ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜನಪದ ಕಲೆ ಮತ್ತು ಭಾಷಾ ಅಭಿವೃದ್ಧಿ:
ಡಾ. ಮಂದಾರರು ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು — ಇದರ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಜನಪದ ಕಲೆಯ ಪ್ರಸಾರ, ಕಲಾವಿದರ ಪ್ರೋತ್ಸಾಹ ಮತ್ತು ಗ್ರಾಮೀಣ ಕಲಾ ಪರಂಪರೆಯ ಉತ್ತೇಜನದಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ.
ಇದೇ ವೇಳೆ, ತುಳು ಭಾಷೆ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ತುಳು ವರ್ಲ್ಡ್ ಸಂಸ್ಥೆಯ ಸಂಚಾಲಕರಾಗಿಯೂ ತುಳು ಭಾಷೆ–ಸಂಸ್ಕೃತಿಯ ಅಭಿಮಾನ, ಅಧ್ಯಯನ ಮತ್ತು ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ. 'ತುಳುವ ಮಹಾಸಭೆ' ಯ ಸದಸ್ಯ ಮತ್ತು ಮಾಧ್ಯಮ ಸಲಹೆಗಾರರಾಗಿ, ಈ ಶತಮಾನೋತ್ಸವದತ್ತ ಸಾಗುತ್ತಿರುವ ಸಂಸ್ಥೆಯ ವಿವಿಧ ಚಟುವಟಿಕೆಗಳಲ್ಲಿ ಅವರ ಯೋಜನಾತ್ಮಕ ಹಾಗೂ ಮಾಧ್ಯಮಿಕ ಸೇವೆಗೆ ವಿಶೇಷ ಪ್ರಾಮುಖ್ಯತೆ ದೊರೆತಿದೆ.
ಈ ಹಿಂದೆ, ಅವರ ಮಾಧ್ಯಮ ಸೇವೆ ಮತ್ತು ಪರಿಸರ ಸಂರಕ್ಷಣೆಯ ಕಾಯಕವನ್ನು ಗುರುತಿಸಿ ಇಂಡಿಯನ್ ಅಂಪಯರ್ ಯುನಿವರ್ಸಿಟಿ ಹಾಗೂ ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ವತಿಯಿಂದ ಅವರಿಗೆ “ಗೌರವ ಡಾಕ್ಟರೇಟ್” ನೀಡಿ ಸನ್ಮಾನಿಸಲಾಗಿತ್ತು. ಈ ರಾಷ್ಟ್ರೀಯ ಪ್ರಶಸ್ತಿಯು ಡಾ. ಮಂದಾರ ರಾಜೇಶ್ ಭಟ್ಟರ ಬಹುಮುಖಿ ಕೊಡುಗೆಗೆ ಮತ್ತೊಂದು ಗರಿ ತಂದಿದೆ.