ಅಂಗಡಿದಾರರು ಬಾಡಿಗೆ ಪಾವತಿಗೆ ಬಾಕಿ, ಶೀಘ್ರ ಮೂರನೇ ನೋಟಿಸ್ ಜಾರಿ: ಇಒ

ಅಂಗಡಿದಾರರು ಬಾಡಿಗೆ ಪಾವತಿಗೆ ಬಾಕಿ, ಶೀಘ್ರ ಮೂರನೇ ನೋಟಿಸ್ ಜಾರಿ: ಇಒ


ಬಂಟ್ವಾಳ: ಇಲ್ಲಿನ ತಾ.ಪಂ. ಅಧೀನದಲ್ಲಿ ಒಟ್ಟು ಹದಿನಾಲ್ಕು ಬಾಡಿಗೆ ಕಟ್ಟಡ ಇದ್ದು, ಇದರಲ್ಲಿ ಎರಡು ಖಾಲಿ ಇದೆ. ಹನ್ನೆರಡರಲ್ಲಿ ಬಾಡಿಗೆದಾರರು ಇದ್ದಾರೆ. ಎಂಟು ಅಂಗಡಿದಾರರು ಬಾಡಿಗೆ ಪಾವತಿ ಮಾಡಿದ್ದರೆ. ನಾಲ್ಕು ಅಂಗಡಿಯವರು ಪಾವತಿ ಮಾಡಿಲ್ಲ, ಬಾಡಿಗೆ ಬಾಕಿ ಇದ್ದವರಿಗೆ ಎರಡು ಬಾರಿ ನೋಟಿಸ್ ಜಾರಿಗೊಳಿಸಿದೆ ಎಂದು ಗುರುವಾರ ಬಂಟ್ವಾಳ ಎಸ್‌ಜಿಎಸ್‌ಅರ್‌ವೈ ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾ.ಪಂ.ನ ಅಧಿಕಾರಿಗಳ ಸಾಮಾನ್ಯ ಸಭೆಯಲ್ಲಿ ತಾ.ಪಂ. ಇಒ ಸಚಿನ್ ಕುಮಾರ್ ತಿಳಿಸಿದರು.

ಈ ಸಂದರ್ಭ ಸಭಾಧ್ಯಕ್ಷತೆ ವಹಿಸಿದ್ದ ತಾ.ಪಂ. ಆಡಳಿತಾಧಿಕಾರಿ ಎಚ್. ಶಶಿಧರ್ ಬಾಡಿಗೆ ಬಾಕಿರುವ ಅಂಗಡಿದಾರರು ಮೂರನೇ ನೋಟಿಸ್‌ಗೂ ಸ್ಪಂದಿಸದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಹುದ್ದೆ ಖಾಲಿ:

ಬಂಟ್ವಾಳದಲ್ಲಿ 20 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಖಾಲಿ ಇದೆ ಎಂದು ಸಿಡಿಪಿಒ ಮಮ್ತಾಜ್ ಸಭೆಗೆ ಮಾಹಿತಿ ನೀಡಿದರಲ್ಲದೆ, ಆರು ಅಂಗನವಾಡಿಗಳಿಗೆ ಕಟ್ಟಡವಿಲ್ಲ. ತಹಶೀಲ್ದಾರ್ ಅವರೇ ನಿವೇಶನ ಇಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ದಾನಿಗಳ ನೆರವನ್ನು ಕೇಳಿದ್ದೇವೆ ಎಂದು ಸಭೆಯ ಗಮನಸೆಳೆದರು. ಶಾಲೆಗಳಲ್ಲಿ ಅಂಗನವಾಡಿಗೆ ಅವಕಾಶ ನೀಡಲು ಕಳೆದ ಸಭೆಯಲ್ಲಿ ಸೂಚನೆ ನೀಡಿದ್ದರು. ಅದರಂತೆ ನಡೆಸಲು ಇಒ ಸಚಿನ್ ಕುಮಾರ್ ತಿಳಿಸಿದರು.

ಪಶುವೈದ್ಯಕೀಯ ಇಲಾಖಾ ತಾಲೂಕು ವೈದಾಧಿಕಾರಿ ಡಾ. ಉಮೇಶ್ ಕಿರಣ್ ಮಾಹಿತಿ ನೀಡಿ ಬೀದಿನಾಯಿಗಳ ಸಂರಕ್ಷಣೆ ಕುರಿತು ಮಾರ್ಗಸೂಚಿಗಳನ್ನು ಅನುಸರಿಸಬೇಕಾದ ವಿಧಾನ ಹಾಗೂ ಸರಕಾರದ ನಿರ್ದೇಶನಗಳ ಕುರಿತು ವಿವರಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೆಲಸ ಸಂದರ್ಭ ದೂರುಗಳು ಬರುತ್ತಿರುವ ಬಗ್ಗೆ ಸಚಿನ್ ಕುಮಾರ್ ಪ್ರಶ್ನಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನ ಹರಿಸಲು ಸೂಚಿಸಿದರು.

ಸಲಕರಣೆ ಖರೀದಿ ಸಹಿತ ಯಾವುದೇ ಪ್ರಸ್ತಾನವೆಗಳಿದ್ದರೆ ಜನವರಿ ಮೊದಲ ವಾರದೊಳಗೆ ಅನುಮೋದನೆ ಪಡೆದುಕೊಳ್ಳಬೇಕು. ಖರೀದಿಗಳನ್ನು ಸಾಮಾನ್ಯ ಸಭೆಯಲ್ಲಿ ಕಡ್ಡಾಯ ಅನುಮೋದನೆ ಆದ ಮೇಲೆ ಮಾಡಬೇಕು ಎಂದು ಇಒ ಸೂಚಿಸಿದರು.

ಅದೇ ರೀತಿ ವಿವಿಧ ಕಾಮಗಾರಿಗಳಿಗೆ ಕಾದಿರಿಸಲಾದ ಅನುದಾನ ಲ್ಯಾಪ್ಸ್ ಅಗದಂತೆ ನೋಡಿಕೊಳ್ಳಬೇಕು ಎಂದು ಆಡಳಿತಾಧಿಕಾರಿ ಶಶಿಧರ್ ಅವರು ಸೂಚಿಸಿದರು.

ಬಿ.ಸಿ.ರೋಡಿನ ಶಿಥಿಲಾವಸ್ಥೆಯಲ್ಲಿರುವ ಆಶ್ರಮ ಶಾಲಾ ಕಟ್ಟಡದ ತೆರವು ವಿಚಾರ ಡಿ.ಜೆ. ಅವರ ಹಂತದಲ್ಲಿದೆ ಎಂದು ಸಮಾಜಕಲ್ಯಾಣಾಧಿಕಾರಿ ಮಾಹಿತಿ ನೀಡಿದರು. ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದು, ತಮ್ಮ ಇಲಾಖಾವಾರು ಮಾಹಿತಿ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article