ಪಾಳು ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬಂಟ್ವಾಳ: ತಾಲೂಕಿನ ಚೆನ್ನೈತ್ತೋಡಿ ಗ್ರಾಮದ ವಾಮದಪದವು ಎಂಬಲ್ಲಿ ಖಾಲಿ ಜಮೀನು ಸ್ವಚ್ಛಗೊಳಿಸುತ್ತಿದ್ದಾಗ ಅಲ್ಲಿದ್ದ ಪಾಳು ಬಿದ್ದಿರುವ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ.
ಉಳ್ಳಾಲ ತಾಲೂಕು, ಕಾಪಿಕಾಡು ನಿವಾಸಿ ಮನ್ವಿತ್ (26) ಅವರು ತನ್ನ ತಂದೆಯ ಬಾಬ್ತು ಬಂಟ್ವಾಳ ತಾಲೂಕು ಚೆನ್ನೈತ್ತೋಡಿ ಗ್ರಾಮದ ವಾಮದಪದವಿನಲ್ಲಿ ಸುಮಾರು 62 ಸೆಂಟ್ಸ್ ಜಾಗಹೊಂದಿದ್ದು, ಅದರಲ್ಲಿ ಯಾವುದೇ ಮನೆ ಇರುವುದಿಲ್ಲ.
ಜಾಗದ ಮಧ್ಯದಲ್ಲಿ ಒಂದು ಹಳೆಯ ಪಾಳು ಬಿದ್ದ ಬಾವಿ ಇದ್ದು, ಈ ಜಾಗವನ್ನು ಅಳತೆ ಮಾಡುವ ಉದ್ದೇಶದಿಂದ ಇಲ್ಲಿ ಬೆಳೆದಿದ್ದ ಪೊದೆ, ಹುಲ್ಲನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಕೂಲಿ ಕಾರ್ಮಿಕರು ಯಂತ್ರದ ಮೂಲಕ ಕಳೆ ಗಿಡಗಳನ್ನು ಸ್ವಚ್ಚಗೊಳಿಸುತ್ತಿದ್ದಾಗ ಪಾಳು ಬಾವಿಯ ಒಳಗೆ ಸುಮಾರು 50 ರಿಂದ 60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹವು ಕವಚಿ ಬಿದ್ದುಕೊಂಡಿರುವುದು ಕಂಡು ಬಂದಿದೆ. ಈ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಕಾಲು ಜಾರಿ ಬಿದ್ದಿದ್ದಾನೆಯೋ ಸ್ಪಷ್ಟವಾಗಿಲ್ಲ, ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.