ಬಾವಿಗೆ ಹಾರಿ ಹಾಲು, ಪತ್ರಿಕಾ ವಿತರಕ ಆತ್ಮಹತ್ಯೆ
ಬಂಟ್ವಾಳ: ಹಾಲು, ಪತ್ರಿಕಾ ವಿತರಕರೋರ್ವರು ಬಂಟ್ವಾಳ ಬೈಪಾಸ್ನಲ್ಲಿರುವ ಶಾಂತಾರಾಮ ಭವನದ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಬಂಟ್ವಾಳ ಬಡ್ಡಕಟ್ಟೆ ದೈವಗುಡ್ಡೆ ನಿವಾಸಿ ಪ್ರಶಾಂತ್ ಬಾಳಿಗಾ (52) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಬಂಟ್ವಾಳದಲ್ಲಿ ಚಿರಪರಿಚಿತರಾಗಿರುವ ಇವರು ಅತ್ಯಂತ ಶ್ರಮಜೀವಿಯಾಗಿದ್ದಾರೆ. ಹಲವು ವರ್ಷಗಳಿಂದ ಬಂಟ್ವಾಳ ಪರಿಸರದಾದ್ಯಂತ ಬೆಳಗ್ಗಿನ ಜಾವದಿಂದ ಹಾಲಿನ ಜೊತೆಗೆ ಪತ್ರಿಕೆಯನ್ನು ಮನೆ, ಮನೆಗೆ ವಿತರಿಸುತ್ತಿದ್ದಲ್ಲದೆ ಮಧ್ಯಾಹ್ನದ ಬಳಿಕ ಪಿಗ್ಮಿ ಸಂಗ್ರಹಣೆಯ ಕಾರ್ಯ ನಿರ್ವಹಿಸುತ್ತಿದ್ದರು.
ಶನಿವಾರ ಕೂಡ ಎಂದಿನಂತೆ ನಿತ್ಯದ ಕೆಲ ಮನೆಗಳಿಗೆ ಹಾಲಿನ ಪ್ಯಾಕೇಟ್ ಜೊತೆ ಪತ್ರಿಕೆಯನ್ನು ವಿತರಿಸಿದ್ದಾರೆ. ಸುಮಾರು 8 ಗಂಟೆಯ ಹೊತ್ತಿಗೆ ಬಂಟ್ವಾಳ ಬೈಪಾಸ್ ಭಾಗದಲ್ಲು ಮನೆಗಳಿಗೆ ಹಾಲು ಮತ್ತು ಪತ್ರಿಕೆ ವಿತರಿಸಿ ಶಾಂತಾರಾಮ ಭವನವಿರುವ ಹೆದ್ದಾರಿಯಲ್ಲಿತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ನೇರವಾಗಿ ಭವನದ ಪಕ್ಕದಲ್ಲಿರುವ ಬಾವಿಗೆ ಧುಮುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಾಲಿನ ಪ್ಯಾಕೇಟ್ ತುಂಬಿರುವ ಬೈಕ್ ರಸ್ತೆಯಲ್ಲಿ ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಬಾವಿಯಲ್ಲಿ ನೋಡಿದಾಗ ಮೃತದೇಹ ತೇಲಾಡುವ ಸ್ಥಿತಿಯಲ್ಲಿ ಕಂಡು ಬಂದಿದೆ. ತಕ್ಷಣ ಸ್ಥಳೀಯರು ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಹಾಗೂ ಆಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಆಗ್ನಿಶಾಮಕದಳದ ಸಿಬ್ಬಂದಿಗಳು ಬಾವಿಯಿಂದ ಮೃತದೇಹವನ್ನು ಮೇಲಕೆತ್ತಿದ್ದಾರೆ. ಬಂಟ್ವಾಳ ನಗರ ಪೊಲೀಸರು ಪರಿಶೀಲಿಸಿ ಮುಂದಿನ ಕ್ರಮ ಕೈಹೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಪ್ರಶಾಂತ್ ಪತ್ನಿ ಹಾಗೂ ಮೂವರು ಪುತ್ರಿಯರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಸರಳ ಮತ್ತು ಸಜ್ಜನಿಕೆ ವ್ಯಕ್ತಿತ್ವದ ಬಡಕುಟುಂಬದ ಪ್ರಶಾಂತ್ ಬೆಳಗ್ಗೆ ಹಾಲು, ಪತ್ರಿಕೆ ವಿತರಿಸಿ, ಮಧ್ಯಾಹ್ನದ ಪಿಗ್ಮಿ ಸಂಗ್ರಹದ ಮೂಲಕ ತನ್ನ ಜೀವನ ನಿರ್ವಹಿಸುತ್ತಿದ್ದರು. ಯಾರೊಂದಿಗೂ ಒರಟಿನಿಂದ ವರ್ತಿಸಿದ ಉದಾಹರಣೆಯು ಇಲ್ಲ, ಇವರ ಆತ್ಮಹತ್ಯೆ ಸುದ್ದಿ ಪ್ರತಿನಿತ್ಯ ಇವರನ್ನು ಮಾತನಾಡಿಸುವ ಬಂಟ್ವಾಳ ಪರಿಸರದ ನಾಗರಿಕರಲ್ಲಿ ದಿಗ್ಬ್ರಮೆಯನ್ನುಂಟು ಮಾಡಿತ್ತು.
ಇವರ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲವಾದರೂ, ಹಣಕಾಸಿನ ಆಡಚಣೆಯಿಂದಾಗಿ ಈ ಕೃತ್ಯವೆಸಗಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.