ಜ.3 ರಂದು ಐ.ಎಂ.ಎ. ಎ.ಎಂ.ಸಿ. ಕ್ರಿಕೆಟ್ ಪಂದ್ಯಾಟ: ಜಾವಗಲ್ ಶ್ರೀನಾಥ್‌ರಿಂದ ಉದ್ಘಾಟನೆ

ಜ.3 ರಂದು ಐ.ಎಂ.ಎ. ಎ.ಎಂ.ಸಿ. ಕ್ರಿಕೆಟ್ ಪಂದ್ಯಾಟ: ಜಾವಗಲ್ ಶ್ರೀನಾಥ್‌ರಿಂದ ಉದ್ಘಾಟನೆ


ಮಂಗಳೂರು: ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆ ಹಾಗೂ ವೈದ್ಯಕೀಯ ತಜ್ಞರ ಸಂಘ ಮಂಗಳೂರು ಶಾಖೆಯ ಆಶ್ರಯದಲ್ಲಿ ‘ಐ.ಎಂ.ಎ. ಎ.ಎಂ.ಸಿ. ಪ್ರೀಮಿಯರ್ ಲೀಗ್-2026’ ವಾರ್ಷಿಕ ಕ್ರಿಕೆಟ್ ಪಂದ್ಯಾಟವನ್ನು ಜನವರಿ ೩ರಂದು ನಗರದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಆಯೋಜಿಸುವ ಪಂದ್ಯಾಟಗಳ ತೀರ್ಪುಗಾರರಾದ ಜಾವಗಲ್ ಶ್ರೀನಾಥ್ ಅವರು ಈ ಪಂದ್ಯಾವಳಿಯನ್ನು ಅಂದು ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ.

ಗೌರವ ಅತಿಥಿಗಳಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸಲರ್ ಹಾಗೂ ತೇಜಸ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಎಂ. ಶಾಂತಾರಾಮ ಶೆಟ್ಟಿ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ರಾಜ್ಯಾಧ್ಯಕ್ಷ ಡಾ. ಟಿ.ಎ. ವೀರಭದ್ರಯ್ಯ, ವಿಧಾನ ಪರಿಷತ್ ಸದಸ್ಯರು ಮತ್ತು ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ನಿರ್ದೇಶಕ ಡಾ. ಮಂಜುನಾಥ್ ಭಂಡಾರಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಅಧ್ಯಕ್ಷರಾಗಿ ಡಾ. ಸದಾನಂದ ಪೂಜಾರಿ, ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ, ಕೋಶಾಧಿಕಾರಿ ಡಾ. ಜ್ಯೂಲಿಯನ್ ಸಲ್ಡಾನ ಹಾಗೂ ವೈದ್ಯಕೀಯ ತಜ್ಞರ ಸಂಘದ ಮಂಗಳೂರು ಶಾಖೆ ಅಧ್ಯಕ್ಷ ಡಾ. ಆನಂದ ಬಂಗೇರ, ಕಾರ್ಯದರ್ಶಿ ಡಾ. ಉಲ್ಲಾಸ ಶೆಟ್ಟಿ, ಕೋಶಾಧಿಕಾರಿ ಡಾ. ಗೋವಿಂದರಾಜ್ ಭಟ್ ಉಪಸ್ಥಿತರಿರುವರು.

ದಿ. ಡಾ. ಎಂ.ವಿ. ಶೆಟ್ಟಿ ಅವರು ಕೆ.ಎಂ.ಸಿ. ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರ ಚಿಕಿತ್ಸಾ ಪ್ರಾಧ್ಯಾಪಕರಾಗಿ, ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ತಜ್ಞರಾಗಿ ಹಾಗೂ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷರಾಗಿ ಮೂರು ವಿವಿಧ ಅವಧಿಯ ಮತ್ತು 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ದಿ. ಡಾ. ಚೌಡಯ್ಯ ಅವರು ವೆನ್ಲಾಕ್ ಆಸ್ಪತ್ರೆಯಲ್ಲಿ ವಿಕಿರಣ ಶಾಸ್ತ್ರ ತಜ್ಞರಾಗಿ ಸೇವೆ ಸಲ್ಲಿಸಿದ್ದರು. ಇಬ್ಬರೂ ಕ್ರಿಕೆಟ್ ಆಟದ ಕುರಿತು ಅತಿಯಾದ ಆಸಕ್ತಿ ಹೊಂದಿದ್ದು, ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಇವರ ಸ್ಮರಣಾರ್ಥ ಹಾಗೂ ಸವಿನೆನಪಿಗಾಗಿ ದಿ. ಡಾ. ಎಂ.ವಿ. ಶೆಟ್ಟಿ ಅವರ ಪುತ್ರ ದಿ. ರಾಮ್‌ಗೋಪಾಲ್ ಶೆಟ್ಟಿ ಅವರು ಈ ಕ್ರಿಕೆಟ್ ಪಂದ್ಯಾಟವನ್ನು ಆರಂಭಿಸಿದ್ದರು. ಮನರಂಜನಾ ಕಾರ್ಯಕ್ರಮದ ಅಂಗವಾಗಿ ಸಂಗೀತ, ಗಾಯನ ಮತ್ತು ಹುಲಿವೇಶ ಕುಣಿತವನ್ನು ಆಯೋಜಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article