ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ಆದೇಶ
ಮಂಗಳೂರು: ಸೌಜನ್ಯಾ ಪರ ನ್ಯಾಯ ಹೋರಾಟಗಾರ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಗಡಿಪಾರು ಮಾಡಿ ಎರಡನೇ ಬಾರಿ ಪುತ್ತೂರು ಸಹಾಯಕ್ತ ಆಯುಕ್ತೆ ಆದೇಶ ಹೊರಡಿಸಿದ್ದಾರೆ.
ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಡಿ.17 ರಂದು ಈ ಆದೇಶ ಹೊರಡಿಸಿದ್ದಾರೆ.
ಮಹೇಶ್ ಶೆಟ್ಟಿಯನ್ನು ಈ ಹಿಂದೆ ಗಡಿಪಾರು ಮಾಡಿ ಪುತ್ತೂರು ಎ.ಸಿ. ಆದೇಶ ಹೊರಡಿಸಿದ್ದರು ಇದನ್ನು ಮರು ಪರಿಶೀಲಿಸಲು ಹೈಕೋರ್ಟ್ ಸೂಚಿಸಿತ್ತು. ಹೈಕೋರ್ಟ್ ಆದೇಶದಂತೆ ಮರು ಪರಿಶೀಲನೆ ಮಾಡಿ ಒಂದು ವರ್ಷಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಗಡಿಪಾರು ಆದೇಶದ ಪ್ರತಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದ ಮೇರಗೆ ಡಿ.18ರಂದು ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಗೆ ಬೆಳ್ತಂಗಡಿ ಪೊಲೀಸರು ತೆರಳಿ ನೋಟಿಸ್ ಜಾರಿ ಮಾಡಲು ಮುಂದಾಗಿದ್ದಾರೆ ಆದರೆ ತಿಮರೋಡಿ ಈ ಸಂದರ್ಭ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.
ಚಿನ್ನಯ್ಯ ಬಿಡುಗಡೆ..
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದ ಚಿನ್ನಯ್ಯ ಜಾಮೀನ ಮಂಜೂರಾಗಿ 24 ದಿನಗಳ ಬಳಿಕ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಗುರುವಾರ ಬಿಡುಗಡೆಗೊಂಡಿದ್ದಾನೆ.
ಗುರುವಾರ ಬೆಳಗ್ಗೆ ಆತನ ಪತ್ನಿ, ಸಹೋದರಿ ಮತ್ತು ವಕೀಲರು ಚಿನ್ನಯ್ಯನನ್ನು ಜೈಲಿನಿಂದ ಕರೆದೊಯ್ದರು.
ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಬಳಿಕ ಆರೋಪಿಯಾಗಿ ಜೈಲು ಸೇರಿದ್ದ ಚಿನ್ನಯ್ಯ ನಾಲ್ಕು ತಿಂಗಳಿನಿಂದ ಜೈಲಿನಲ್ಲಿದ್ದ. ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು ನ.24ರಂದು 12 ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಬಾಂಡ್ ಮತ್ತು ಶೂರಿಟಿ ನೀಡಲು ಯಾರೂ ಮುಂದೆ ಬಾರದ ಕಾರಣ ಬಿಡುಗಡೆ ಸಾಧ್ಯವಾಗಿರಲಿಲ್ಲ. ಬುಧವಾರ ಆತನ ಪತ್ನಿ ಮಲ್ಲಿಕಾ ಒಂದು ಲಕ್ಷ ರೂ. ಬಾಂಡ್ ಮತ್ತು ಇಬ್ಬರು ಜಾಮೀನುದಾರರೊಂದಿಗೆ ಬೆಳ್ತಂಗಡಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯಕ್ಕೆ ಶೂರಿಟಿ ಕೊಡಿಸಿ ಕಾನೂನು ಪ್ರಕ್ರಿಯೆ ಪೂರೈಸಿದ್ದಾರೆ.