ರಾಮಾನುಜನ್ ಸಾಧನೆ ನಮಗೆ ಪ್ರೇರಣೆಯಾಗಬೇಕು: ಡಾ. ರಮಾನಂದ ಎಚ್.ಎಸ್.
Monday, December 22, 2025
ರಾಷ್ಟ್ರೀಯ ಗಣಿತ ದಿನಾಚರಣೆ
ಮಂಗಳೂರು: ಕಡುಬಡತನದಲ್ಲಿ ಬೆಳೆದ ರಾಮಾನುಜನ್ ಗಣಿತವನ್ನು ಉಸಿರಾಡಿ, ಸೃಷ್ಟಿಸಿದ ಕೃತಿಗಳು ಇಂದಿಗೂ ಅಧ್ಯಯನ ಮಾಡುವಂತಿದೆ. ವಿದ್ಯಾರ್ಥಿಗಳಿಗೆ ಅವರ ಬದುಕು, ಸಾಧನೆ ಮಾದರಿ. ಅವರ ನೆನಪು ಸ್ಪೂರ್ತಿಯಾಗಬೇಕು ಎಂದು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥ ಡಾ. ರಮಾನಂದ ಎಚ್.ಎಸ್. ಹೇಳಿದರು.
ಅವರು ಇಂದು ಗಣಿತದ ಮೇರು ಸಾಧಕ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಬಿಎಸ್ಸಿ ಮತ್ತು ಬಿಎಡ್ ವಿದ್ಯಾರ್ಥಿಗಳಿಗೆ ಗಣಿತ ವಿಷಯದ ಬಗ್ಗೆ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್ ಮಾತನಾಡಿ, ವಿಶ್ವದಾದ್ಯಂತ ಗಣಿತ ವಿಷಯವನ್ನು ಸುಲಭವಾಗಿ ಅರ್ಥೈಸುವಂತೆ ಮಾಡಲು ಎಲ್ಲಾ ಹಂತಗಳಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಭಾರತ ಪ್ರಾಚೀನ ಕಾಲದಿಂದಲೂ ಈ ಕ್ಷೇತ್ರದಲ್ಲಿ ತನ್ನ ಪ್ರತಿಭೆಯನ್ನು ಮೆರೆದಿದೆ. ಈ ಪರಂಪರೆ ಮುಂದುವರಿಯುವಂತೆ ಆಧುನಿಕ ತಂತ್ರಜ್ಞಾನದ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಅಧ್ಯಾಪಕರು ಪ್ರಯತ್ನಪಟ್ಟಲ್ಲಿ ನಿರೀಕ್ಷಿತ ಫಲ ದೊರೆಯುವುದರಲ್ಲಿ ಸಂಶಯವಿಲ್ಲ ಎಂದ ಅವರು ಪ್ರಾದೇಶಿಕ ವಿಜ್ಞಾನ ಕೇಂದ್ರ ಆಸಕ್ತ ಸಂಪನ್ಮೂಲ ವ್ಯಕ್ತಿಗಳ ಹಾಗೂ ಸಂಸ್ಥೆಗಳ ಸಹಕಾರದೊಂದಿಗೆ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ ಎಂದರು.
ನಂತರ ನಡೆದ ಕೃತಕ ಬುದ್ದಿಮತ್ತೆ ಕಾರ್ಯಾಗಾರದಲ್ಲಿ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಎಂ.ಸಿ.ಎ ವಿಭಾಗದ ಮುಖ್ಯಸ್ಥ ಡಾ. ಹರೀಶ ಬಿ. ಮತ್ತು ಅಸಿಸ್ಟೆಂಟ್ ಫೊಪೆಸರ್ ಸುನೀತ್ ಕುಮಾರ್ ಟಿ. ಸಂಪನ್ಮೂಲ ವ್ಯಕ್ತಿಗಳಾಗಿ ಕೃತಕ ಬುದ್ದಿಮತ್ತೆ ಕ್ಷೇತ್ರದ ವಿವಿಧ ಹಂತಗಳನ್ನು ವಿವರಿಸಿ ಪ್ರಾತ್ಯಕ್ಷಿಕೆಗಳನ್ನು ನೀಡಿದರು.
ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತ ವಿಭಾಗ ಮುಖ್ಯಸ್ಥ ಡಾ. ಮೋಹನ್ದಾಸ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕಾರ್ಯಕ್ರಮದ ಅಂಶಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕೇಂದ್ರದ ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್ ಸ್ವಾಗತಿಸಿದರು. ಇನ್ನೊವೇಶನ್ ಹಬ್ನ ಮೆಂಟರ್ ಅಂಬಿಕಾ ಸ್ವಾಗತಿಸಿ, ರಶ್ಮಿ ಕಾರ್ಯಕ್ರಮ ನಿರೂಪಿಸಿದರು.


