ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಸಹಕಾರಿ
ಮಂಗಳೂರು: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025 ಮಂಡನೆ ಮಾಡಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು.
ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಧಾರ್ಮಿಕ ಮತ್ತು ರಾಜಕೀಯ ವಿಚಾರಗಳಲ್ಲಿ ಸಂಘರ್ಷ ಸೃಷ್ಟಿಸುವ ಮಾತುಗಳು ಹೆಚ್ಚಾಗುತ್ತಿವೆ. ಭಾಷಣ ಕೇಳಿ ಕೊಲೆ ಯತ್ನ ಮಾಡಿದ್ದಾರೆ. ಯುವಕರನ್ನು ಪ್ರಚೋದಿಸುವ ಕಾರ್ಯ ಹೆಚ್ಚಾಗುವ ಈ ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯ ಕಾಪಾಡುವುದು ಮತ್ತು ದ್ವೇಷ ಭಾಷಣದಿಂದ ಉಂಟಾಗುವ ಸಂಘರ್ಷಗಳನ್ನು ತಡೆಗಟ್ಟಲು ಈ ವಿಧೇಯಕ ತುಂಬಾ ಸಹಕಾರಿಯಾಗಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವ್ಯಕ್ತಿ, ವ್ಯಕ್ತಿಗಳ ಸಮೂಹ, ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ದ್ವೇಷವನ್ನುಂಟು ಮಾಡುವ ದ್ವೇಷ ಭಾಷಣದ ಪ್ರಸಾರ ಅಥವಾ ಪ್ರಚಾರ ಹಾಗೂ ಅಪರಾಧಗಳನ್ನು ತಡೆಗಟ್ಟಲು, ಅಂಥ ಅಪರಾಧಗಳಿಗೆ ದಂಡನೆಯನ್ನು ಉಪಬಂಧಿಸಲು ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರವನ್ನು ಒದಗಿಸಲು ಈ ವಿಧೇಯಕ ಅನುಕೂಲವಾಗಲಿದೆ.
ಕರಾವಳಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಧಾರ್ಮಿಕ ವಿಷಯ, ರಾಜಕೀಯ ಕಾರಣಗಳಿಂದಾಗಿ ದ್ವೇಷ ಭಾಷಣದಿಂದ ಅನೇಕ ಬಡ ಕುಟುಂಬದ ಯುವಕರು ಬಲಿಯಾಗುತ್ತಿದ್ದರು. ಇಂತಹ ಸಂದರ್ಭ ಈ ರೀತಿಯ ಮಸೂದೆಯ ಅನಿವಾರ್ಯವಾಯಿತೆ ಬಗ್ಗೆ ಹಿಂದಿನಿಂದಲೂ ಆಗ್ರಹಿಸುತ್ತಾ ಬಂದಿದ್ದೆ. ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಹಾಸ್ ಶೆಟ್ಟಿ ಹಾಗು ಅಬ್ದುಲ್ ರಹಿಮಾನ್ ಹತ್ಯೆಯಾದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ನೇಮಕವಾದ ಸತ್ಯಶೋಧನಾ ಸಮಿತಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಸಂದರ್ಭ ದ್ವೇಷ ಭಾಷಣ ವಿರುದ್ಧ ಕಠಿಣ ಕಾನೂನು ತರುವ ಬಗ್ಗೆ ಚಿಂತಿಸಲಾಗುವುದು ಎಂಬ ಆಶ್ವಾಸನೆ ನೀಡಲಾಗಿತ್ತು. ಆ ಪ್ರಕಾರ ಇದೀಗ ಮಸೂದೆಗೆ ರಾಜ್ಯ ಸರ್ಕಾರದಿಂದ ಅಂಗೀಕಾರ ದೊರೆತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಲು ಮತ್ತಷ್ಟು ಅನುಕೂಲವಾಗಲಿದೆ ಎಂದು ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.