ಶಾಲೆಯ ಶತಮಾನೋತ್ಸವ: ಶಿಕ್ಷಣ ಸಂಸ್ಥೆಗಳಿಂದ ಊರಿನ ಪ್ರಗತಿ
Friday, December 19, 2025
ಉಜಿರೆ: ವಿದ್ಯೆಯನ್ನು ಮನೆಬಾಗಿಲಿಗೆ ಒದಗಿಸುವ ಉದ್ದೇಶದಿಂದ ಉಜಿರೆಯಲ್ಲಿ ಅನೇಕ ರೀತಿಯ ವಿದ್ಯಾಸಂಸ್ಥೆಗಳನ್ನು ಆರಮಭಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಂದ ಊರಿನ ಸರ್ವತೋಮುಖ ಪ್ರಗತಿಯಾಗುತ್ತದೆ ಎಂದು ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಅವರು ಶುಕ್ರವಾರ ಉಜಿರೆಯಲ್ಲಿ ಎಸ್ಡಿಎಂ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಮಾಧ್ಯಮ ಶಾಲೆಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಧರ್ಮಸ್ಥಳದಿಂದ ನಡೆಸಲ್ಪಡುವ ಪುದುವೆಟ್ಟು, ಬೈಂದೂರು, ಪೆರಿಂಜೆ, ಬೆಳಾಲು ಮತ್ತು ಕಾಂಚನದಲ್ಲಿರುವ ಶಾಲೆಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಲಭ್ಯ ಒದಗಿಸಲಾಗಿದೆ. ಊರಿನವರ ಸಕ್ರಿಯ ಸಹಕಾರ ಹಾಗೂ ಶಿಕ್ಷಕವೃಂದದವರು ಪ್ರೀತಿ-ವಿಶ್ವಾಸ ಮತ್ತು ಅಭಿಮಾನದಿಂದ ಮಾಡುವ ಸೇವೆಯಿಂದಾಗಿ ಎಲ್ಲಾ ಶಾಲೆಗಳಲ್ಲಿಯೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಹನ್ನೊಂದು ಮಂದಿ ಶಿಕ್ಷಕರನ್ನು ಗೌರವಿಸಲಾಯಿತು.
ಶಾಲೆಯಲ್ಲಿ ನಿವೃತ್ತರಾದ ಪ್ರೇಮಲತ, ವಿಶಾಲಾಕ್ಷಿ, ಎಂ. ಸಂಜೀವ ಗೌಡ, ನಳಿನಿ, ಮೋಹನ ಎಸ್. ಜೈನ್, ರಮೇಶ್ ಆಚಾರ್, ಶಾಂತಾ, ಹರ್ಷಕುಮಾರ್, ಶಶಿಕಲಾ, ಜಯಭಾರತಿ ಮತ್ತು ಸೋಮಶೇಖರ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಷಾಕಿರಣ್ ಕಾರಂತ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಉಪಸ್ಥಿತರಿದ್ದರು. ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್. ಸತೀಶ್ಚಂದ್ರ ಶಾಲೆಯ ಹಿರಿಯ ವಿದ್ಯಾರ್ಥಿ ಬಾಗಲಕೋಟೆ ವಿ.ವಿ.ಯ ಕುಲಸಚಿವ ಡಾ. ಔದ್ರಾಮ ಶುಭಾಶಂಸನೆ ಮಾಡಿದರು.
ಶಾಲಾ ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ನಾಯ್ಕ ವಂದಿಸಿದರು.
