ಬೆಳ್ಳಾರೆ ಹೋಲಿ ಕ್ರಾಸ್ ಚಾಪೆಲ್ ಪ್ಯಾರಿಷ್ ಆಗಿ ಸ್ಥಾಪನೆ ಚರ್ಚ್‌ನಲ್ಲಿ ಪವಿತ್ರ ಯೂಕರಿಸ್ಟ್ ಆಚರಣೆ

ಬೆಳ್ಳಾರೆ ಹೋಲಿ ಕ್ರಾಸ್ ಚಾಪೆಲ್ ಪ್ಯಾರಿಷ್ ಆಗಿ ಸ್ಥಾಪನೆ ಚರ್ಚ್‌ನಲ್ಲಿ ಪವಿತ್ರ ಯೂಕರಿಸ್ಟ್ ಆಚರಣೆ


ಬೆಳ್ಳಾರೆ: ಬೆಳ್ಳಾರೆಯ ಹೋಲಿ ಕ್ರಾಸ್ ಚಾಪೆಲ್ ನೂತನ ಪ್ಯಾರಿಷ್ ಆಗಿ ಸ್ಥಾಪನೆಯಾಗುತ್ತಿರುವ ಪ್ರಯುಕ್ತ ಜ.1 ರಂದು ಚರ್ಚ್‌ನಲ್ಲಿ ಪವಿತ್ರ ಯೂಕರಿಸ್ಟ್ ಆಚರಣೆ ನಡೆಯಿತು. 

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ಶಾಸ್ತ್ರೋಕ್ತವಾಗಿ ಪವಿತ್ರ ಯೂಕರಿಸ್ಟ್ ನೆರವೇರಿಸಿ ನೂತನ ಪ್ಯಾರಿಷ್ನ್ನು ಘೋಷಣೆ ಮಾಡಿದರು. 


ಬಲಿಪೂಜೆ ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂ. ಡಾ. ಪೀಟರ್ ಪೌಲ್ ಸಲ್ಡಾನ್ಹಾರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೆಳ್ಳಾರೆಯಲ್ಲಿ ವಾಸಿಸುತ್ತಿದ್ದ ಕ್ಯಾಥೋಲಿಕ್ ಸಮುದಾಯ ತಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಲು ಪ್ರಸಾದ ಸ್ವೀಕರಿಸಲು 15 ಕಿ.ಮೀ. ಕ್ರಮಿಸಿ ಪಂಜ ಚರ್ಚ್‌ಗೆ ಹೋಗಬೇಕಿತ್ತು. ಈ ವಿದ್ಯಮಾನ ಬೆಳ್ಳಾರೆಯಲ್ಲಿ ಪ್ರಾರ್ಥನಾ ಮಂದಿರದ ಸ್ಥಾಪನೆಗೆ ಅನುವು ಮಾಡಿಕೊಟ್ಟಿತು. ಮುಂದೆ ಬೆಳ್ಳಾರೆ ಚಾಪೆಲ್ ಪಂಜ ಧರ್ಮ ಪ್ರಾಂತ್ಯದ ಅಧೀನದಲ್ಲಿರುವ ಒಂದು ಅಧಿಕೃತ ಪ್ರಾರ್ಥನಾ ಮಂದಿರವಾಗಿ ಗುರುತಿಸಿಕೊಂಡಿತು ಎಂದು ಹೇಳಿ ಚಾಪೆಲ್ ಪ್ಯಾರಿಷ್ ಆಗಿ ಬದಲಾವಣೆಯಾದ ಬಗ್ಗೆ ತಿಳಿಸಿದರು. 

ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ನ ಧರ್ಮಗುರು ವಂ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಬೆಳ್ಳಾರೆಯಲ್ಲಿ 54 ವರ್ಷಗಳ ಹಿಂದೆ ಒಂದು ಪ್ರಾರ್ಥನಾ ಮಂದಿರ ಸ್ಥಾಪಿಸಿದರು. ಈಗ ಸಮಯ ಕೂಡಿ ಬಂದಿದೆ. ನಮ್ಮ ಧರ್ಮಪ್ರಾಂತ್ಯದ 125ನೇ ವಿಚಾರಣೆಯ ಚರ್ಚ್ ಆಗಿ ಧರ್ಮಾಧ್ಯಕ್ಷರು ಘೋಷಿಸಿದ್ದಾರೆ. ಅಶಕ್ತರನ್ನು ಶಕ್ತರನ್ನಾಗಿ ಮಾಡಲು ಚರ್ಚ್ ಅನ್ನು ಸ್ವತಂತ್ರವಾಗಿ ಘೋಷಿಸಿದ್ದಾರೆ. ಇದರಲ್ಲಿ ಪಂಜ ಚರ್ಚ್‌ನ ಧರ್ಮಗುರು ವಂ. ಮೆಲ್ವಿನ್ ಡಿಸೋಜ ಅವರ ಮುತುವರ್ಜಿ ಹಾಗೂ ಹೊಸ ಚರ್ಚ್‌ನ ಹೊಸ ಗುರುಗಳಾದ ವಂ. ಆಂಟನಿ ಪ್ರಕಾಶ್ ಮೊಂತೆರೊ ಅವರು ಕೂಡ ಪ್ರೀತಿಯಿಂದ ಸೇವೆ ನೀಡಿ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. 

ಚರ್ಚ್‌ನ ನೂತನ ಧರ್ಮಗುರು ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಸ್ವಾಗತಿಸಿದರು. ಪಂಜ ಸಂತ ರೀಟಾ ಚರ್ಚ್‌ನ ಪಾಲನಾ ಪರಿಷತ್ ಉಪಾಧ್ಯಕ್ಷ ಲ್ಯಾನ್ಸಿ ಡಿಸೋಜ, ಬೆಳ್ಳಾರೆ ಚರ್ಚ್‌ನ ಪಾಲ ಪರಿಷತ್ ಉಪಾಧ್ಯಕ್ಷ ಸುನಿಲ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಪಂಜ ಸಂತ ರೀಟಾ ಚರ್ಚ್ ಧರ್ಮಗುರು ಮೆಲ್ವಿನ್ ಡಿಸೋಜ ವಂದಿಸಿದರು. ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು. ವಲಯದ ಗುರುಗಳಾದ ವಂ. ಜೆರಾಲ್ಡ್ ಡಿಸೋಜ, ವಂ. ಸಂತೋಷ್ ಮಿನೇಜಸ್, ವಂ. ಅಲ್ವಿನ್ ಡಿಕುನ್ಹಾ, ವಂ. ಮರ್ವಿನ್ ಲೋಬೋ, ವಂ. ಬಲ್ತಜಾರ್ ಪಿಂಟೊ, ವಂ. ಜೆ.ಬಿ. ಮೋರಾಸ್, ವಂ. ಅಬೆಲ್ ಲೋಬೋ, ವಂ. ಅಮಿತ್ ರೋಡ್ರಿಗಸ್, ವಂ. ಪೌಲ್ ಸೆಬಾಸ್ಟಿಯನ್ ಡಿಸೋಜ, ವಂ. ವಿಜಯ ಲೋಬೋ, ವಂ. ಫಾದರ್ ರಿತೇಶ್ ರೊಡ್ರಿಗಸ್ ಸೇರಿದಂತೆ ಧರ್ಮಭಗಿನಿಯರು, ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.

ಕಾರ್ಯಕ್ರಮವು ವಂದನೀಯ ಬಿಷಪ್ ಅವರ ಪ್ರಾರ್ಥನೆಯೊಂದಿಗೆ ಮುಕ್ತಾಯಗೊಂಡಿತು. ಬೆಳ್ಳಾರೆಯ ಶರಿತಾ ಡಿಸೋಜ ಅವರು ನಿರೂಪಿಸಿದರು.


ಧರ್ಮಪ್ರಾಂತ್ಯದ 125ನೇ ವಿಚಾರಣೆಯಾಗಿ ಬೆಳ್ಳಾರೆ ಹೋಲಿ ಕ್ರಾಸ್ ಚರ್ಚ್ ಉದಯ:


ಇಂದು ಮಂಗಳೂರು ಧರ್ಮಪ್ರಾಂತ್ಯದ 125ನೇ ವಿಚಾರಣೆಯಾಗಿ ಬೆಳ್ಳಾರೆ ಹೋಲಿ ಕ್ರಾಸ್ ಚರ್ಚ್ ಉದಯಿಸಿದ ದಿನ. ಬೆಳ್ಳಾರೆ ಹೋಲಿ ಕ್ರಾಸ್ ಚರ್ಚ್‌ನ ಐತಿಹಾಸಿಕ ಬೆಳವಣಿಗೆಯು ಪಂಜ ಮಿಷನ್‌ನಿಂದ ಪ್ರಾರಂಭವಾಗಿ ಮಿಷನರಿಯ ವಿಸ್ತರಣೆ, ಸಾಂಸ್ಥಿಕ ಬಲವರ್ಧನೆ, ಮುಂತಾದ ವಿವಿಧ ಆಯಾಮಗಳಲ್ಲಿ ಆದಂತಹ ಅಭಿವೃದ್ಧಿಯು ಚರ್ಚ್‌ನ ಪ್ರಗತಿಪರ ಪಯಣವನ್ನು ಪ್ರತಿಬಿಂಬಿಸುತ್ತದೆ. ಆರಂಭದಲ್ಲಿ ಮಿಷನರಿ ಹಾಗೂ ಪ್ರಾರ್ಥನಾ ಕೇಂದ್ರದಿಂದ ಪ್ರಾರಂಭವಾಗಿ ಶಾಶ್ವತ ಚರ್ಚ್, ಧರ್ಮಗುರುಗಳಿಗೆ ವಾಸಸ್ಥಾನ, ಆಡಳಿತದಲ್ಲಿ ಸ್ವಾಯತ್ತತೆ, ಸ್ವತಂತ್ರ ಧರ್ಮಪ್ರಾಂತ್ಯದ ಚಳುವಳಿಯವರೆಗೆ, ಬೆಳ್ಳಾರೆ ಚರ್ಚ್‌ನ ಪ್ರಗತಿಪರ ಇತಿಹಾಸ ಸಾಕ್ಷ್ಯ ನಮ್ಮ ಕಣ್ಣ ಮುಂದಿದೆ. -ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೊ, ಧರ್ಮಗುರುಗಳು, ಬೆಳ್ಳಾರೆ ಹೋಲಿ ಕ್ರಾಸ್ ಚರ್ಚ್.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article