ಗಾಂಜಾ ಮಾರಾಟ ದಾಸ್ತಾನು: ಇಬ್ಬರ ಬಂಧನ
ಮಂಗಳೂರು: ಹೊಸ ವರ್ಷದ ಆಚರಣೆಯ ಸಲುವಾಗಿ ಮಾರಾಟ ಮಾಡಲು ತಂದಿದ್ದ ಸುಮಾರು 21 ಕೆ.ಜಿ. 450 ಗ್ರಾಂ ತೂಕದ ಗಾಂಜಾವನ್ನು ದಾಸ್ತಾನು ಮಾಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರಿನ ಗುರುಪುರದ ಉಳಾಯಿಬೆಟ್ಟು ನಿವಾಸಿ ಪ್ರದೀಪ್ ಪೂಜಾರಿ (32), ಮಂಗಳೂರಿನ ಚಿತ್ರಾಪುರ ನಿವಾಸಿ ವಸಂತ (42) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಸುಮಾರು 21 ಕೆ.ಜಿ. 450 ಗ್ರಾಂ. ಗಾಂಜಾ (ಅಂದಾಜು ಮೌಲ್ಯ 10,72,500 ರೂ.) ಮತ್ತು 3 ಮೊಬೈಲ್ ಪೋನ್ (ಅಂದಾಜು ಮೌಲ್ಯ 7,000 ರೂ. ಹಾಗೂ ಗಾಂಜಾ ಸಾಗಿಸಲು ಬಳಸಿದ ಕೆ.ಎ. 04 ಎಂ.ಡಿ. 2532 ನಂಬರ್ನ ಸ್ವೀಫ್ಟ್ ಕಾರನ್ನು (ಅಂದಾಜು ಮೌಲ್ಯ 3,00,000 ರೂ.) ಹಾಗೂ ಗಾಂಜಾ ಸಂಗ್ರಹಿಸಿದ್ದ 3 ಲಗೇಜ್ ಬ್ಯಾಗ್ (ಅಂದಾಜು ಮೌಲ್ಯ 3,000 ರೂ.), ಗಾಂಜಾ ಸೇವಿಸಲು ಬಳಸುವ ಸ್ಟ್ರೀಫ್ಸ್-2, ಹಾಗೂ ನಗದು ಹಣ 1,000 ರೂ.ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಟ್ಟು ಅಂದಾಜು 14 ಲಕ್ಷದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ:
ಜ.೩ ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ ನಗರದ, 2ನೇ ಕ್ರಾಸ್ನ ಬೆನಕ ಎಂಬ ಹೆಸರಿನ ಮನೆಯ ಬಳಿ ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಗಾಂಜಾವನ್ನು ಹೊಸ ವರ್ಷಾಚರಣೆಯ ಸಂಬಂಧ ಮಂಗಳೂರು ನಗರದಲ್ಲಿ ಮಾರಾಟ ಮಾಡಲು ಡಿ.28 ರಂದು ರಂದು ಓರಿಸ್ಸಾದಿಂದ ತಂದಿರುವುದಾಗಿ ತಿಳಿಸಿದ್ದು, ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇದ್ದುದರಿಂದ ಮಾರಾಟ ಮಾಡಲು ಸಾಧ್ಯವಾಗದೇ ಇದ್ದು, ಅದನ್ನು ಕಾರಿನಲ್ಲಿಯೇ ಇಟ್ಟಿರುವುದಾಗಿ ಆರೋಪಿಗಳು ತಿಳಿಸಿರುತ್ತಾರೆ.
ಆರೋಪಿಗಳ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ. 01/2026 ಕಲಂ: 8(ಅ), 20(b)(ii),(C) NDPS Act ನಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ. ಈ ಹಿಂದೆ ಆರೋಪಿ ಪ್ರದೀಪ್ ಪೂಜಾರಿ ವಿರುದ್ಧ ೮ ಪ್ರಕರಣಗಳು ದಾಖಲಾಗಿವೆ.
ಕಾರ್ಯಚರಣೆಯಲ್ಲಿ ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ ಕೆ. ಅವರು ಮತ್ತು ಅವರ ತಂಡದ ಸಿಬ್ಬಂದಿಗಳಾದ ಎಎಸ್ಐ ಚಂದ್ರಶೇಖರ್, ಹೆಚ್.ಸಿ.ಗಳಾದ ರೆಜಿ ಎಂ., ದಾಮೋದರ್, ಹಾಲೇಶ್ ನಾಯ್ಕ್, ಸುನೀಲ್ ಪಡನಾಡ, ಸಂಪತ್ ಹಾಗೂ ಸುರತ್ಕಲ್ ಠಾಣಾ ಪಿ.ಐ. ಪ್ರಮೋದ್ ಕುಮಾರ್, ಪಿಎಸ್ಐ ರಘುನಾಯ್ಕ್ ಮತ್ತು ಸಿಬ್ಬಂದಿಗಳಾದ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ಅಂಜಿನಪ್ಪ ಅವರು ಭಾಗವಹಿಸಿದ್ದರು.