ನಿಟ್ಟೆ ವಿನಯ್ ಹೆಗ್ಡೆಗೆ ಲೆಮಿನಾ ಸಂಸ್ಥೆಯಲ್ಲಿ ಶ್ರದ್ಧಾಂಜಲಿ

ನಿಟ್ಟೆ ವಿನಯ್ ಹೆಗ್ಡೆಗೆ ಲೆಮಿನಾ ಸಂಸ್ಥೆಯಲ್ಲಿ ಶ್ರದ್ಧಾಂಜಲಿ


ಮಂಗಳೂರು: ಲೆಮಿನಾ ಸಮೂಹ ಸಂಸ್ಥೆಗಳ ಸಂಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರು, ನಿಟ್ಟೆ ಎಜುಕೇಶನ್ ಟ್ರಸ್ಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಮಂಗಳೂರು ಬೈಕಂಪಾಡಿ ಕೈಗಾರಿಕಾ ವಸಾಹತಿನಲ್ಲಿರುವ ಲೆಮಿನಾ ಕಂಪೆನಿಯಲ್ಲಿ ಜ.3 ರಂದು ನಡೆಯಿತು.


ಲೆಮಿನಾ ಸಮೂಹ ಸಂಸ್ಥೆಗಳ ನಿರ್ದೇಶಕ ಎಂ. ರಾಜೇಂದ್ರ ಅವರು ನುಡಿನಮನ ಸಲ್ಲಿಸಿ ಮಾತನಾಡಿ, ವಿನಯ ಹೆಗ್ಡೆಯವರು ಐವತ್ತು ಜನ ಕಾರ್ಮಿಕ ಸಿಬ್ಬಂದಿಯಿಂದ 1975-76ರಲ್ಲಿ ಪ್ರಾರಂಭಿಸಿದ ಕೈಗಾರಿಕಾ ಕ್ಷೇತ್ರದ ಆಟೋಮೊಬೈಲ್ ಬಿಡಿ ಭಾಗಗಳ ತಯಾರಿಕಾ ಲೆಮಿನಾ ಕಂಪೆನಿ ಇಂದಿಗೆ ಸರಿಯಾಗಿ ೫೦ ವರ್ಷಗಳನ್ನು ಪೂರೈಸಿ ಈಗ ಲೆಮಿನಾ ಸಮೂಹ ಸಂಸ್ಥೆ ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಿದೆ. ಶಿಕ್ಷಣ ಕ್ಷೇತ್ರದ ನಿಟ್ಟೆ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆ ಹಾಗೂ ಕಾರ್ಮಿಕ ಸಿಬ್ಬಂದಿಗಳನ್ನು ತನ್ನ ಕುಟುಂಬದಂತೆ ನೋಡಿಕೊಂಡು ಅವರ ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡಿ, ಸಹಾಯ ಹಸ್ತ ನೀಡಿ, ಆರೋಗ್ಯ ರಕ್ಷಣೆ ಕೂಡ ಒದಗಿಸಿದ ಮೇರು ವ್ಯಕ್ತಿತ್ವ ವಿನಯ ಹೆಗ್ಡೆ ಅವರದು ಎಂದು ನುಡಿನಮನ ಸಲ್ಲಿಸಿದರು.

ಲೆಮಿನಾ ಸಂಸ್ಥೆಯ ನಿರ್ದೇಶಕ ಬಿ.ಎಸ್. ಬಾಳಿಗಾ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದ್ದ ತನ್ನನ್ನು ವಿನಯ ಹೆಗ್ಡೆ ಅವರು ಲೆಮಿನಾ ಸಂಸ್ಥೆಗೆ ಬರಮಾಡಿಸಿ ಇಂದು ಸುಮಾರು ನಲವತ್ತೇಳು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ತನಗೆ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಮಾರ್ಗದರ್ಶನ ನೀಡಿದ ವಿನಯ ಹೆಗ್ಡೆಯವರು ಕಾರ್ಮಿಕ ಸಿಬ್ಬಂದಿಗಳ ಕುಟುಂಬದ ಏಳಿಗೆಗೆ ಅಪಾರವಾಗಿ ಶ್ರಮಿಸಿದ ಧೀಮಂತ, ಶ್ರೇಷ್ಠ ವ್ಯಕ್ತಿತ್ವ ಅವರದು ಎಂದರು.

ಲೆಮಿನಾ ಸಂಸ್ಥೆಯ ಕಾರ್ಮಿಕ ಸಿಬ್ಬಂದಿಗಳ ಪ್ರತಿನಿಧಿ ರವೀಂದ್ರ ಟಿ. ಅವರು ನುಡಿನಮನ ಸಲ್ಲಿಸಿ, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅಪಾರವಾದ ಕಳಕಳಿ ತೋರಿಸಿ, ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ, ಸಲಹೆ ಮಾರ್ಗದರ್ಶನ ನೀಡುತ್ತಾ ಕಾರ್ಮಿಕ ಸಿಬ್ಬಂದಿ ಬಂಧುಗಳನ್ನು ತನ್ನ ಕುಟುಂಬ ಎಂದು ನಂಬಿದ ಮಹಾನ್ ಚೇತನ ವಿನಯ ಹೆಗ್ಡೆಯವರು ಎಂದು ಹೇಳಿದರು.

ವಿನಯ ಹೆಗ್ಡೆಯವರ ಪುತ್ರ ಹಾಗೂ ನಿರ್ದೇಶಕ ವಿಶಾಲ್ ಹೆಗ್ಡೆ, ಮೊಮ್ಮಗ ವಿರೇನ್ ಹೆಗ್ಡೆ, ಕುಟುಂಬ ಸದಸ್ಯರು, ನಿರ್ದೇಶಕ ಅವಿನಾಶ್ ಶೆಣೈ, ಸಿಇಒ ರೋಶನ್ ಪಿಂಟೋ, ಲೆಮಿನಾ ಸಂಸ್ಥೆಯ ಅಧಿಕಾರಿಗಳಾದ ಅಜಿತ್ ಆಳ್ವ, ಚಂದ್ರಶೇಖರ ಸಾಲಿಯಾನ್, ಸುಧಾಕರ ಶೆಟ್ಟಿ, ಶ್ರೀಧರ ಮೆಲಾಂಟ, ಸಪ್ನಾ ಕೆ, ಬಿ.ಆರ್. ಬಾಳಿಗಾ, ಎ.ಆರ್. ಭಾಂಡಗೆ, ಸದಾನಂದ ಸಾಲಿಯಾನ್, ಮೋಹನ್ ಹೆಗ್ಡೆ, ಎಲೋಶಿಯಸ್ ಸಿಕ್ವೆರ, ವಿಟ್ಠಲ್ ಭಟ್, ರವಿ ಶೆಟ್ಟಿ, ಶಾಂತೇರಿ ಬಾಳಿಗಾ, ರಮೇಶ್ ಶೆಟ್ಟಿ, ವಿಶುಕುಮಾರ್, ಪ್ರಕಾಶ್ ಕುಡ್ವ, ಕೃಷ್ಣ ಅಂಚನ್, ಪುನೀತ್ ಭಟ್ ಹಾಗೂ ನೂರಾರು ಕಾರ್ಮಿಕರು ಮತ್ತು ಸಿಬ್ಬಂದಿಗಳು ವಿನಯ ಹೆಗ್ಡೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article