ಕುದ್ಮುಲ್ ರಂಗರಾವ್ ಸಮಾಧಿ ಸ್ಥಳ ಅಭಿವೃದ್ಧಿ: ದಿನೇಶ್ ಗುಂಡೂರಾವ್

ಕುದ್ಮುಲ್ ರಂಗರಾವ್ ಸಮಾಧಿ ಸ್ಥಳ ಅಭಿವೃದ್ಧಿ: ದಿನೇಶ್ ಗುಂಡೂರಾವ್


ಮಂಗಳೂರು: ನಗರದ ಅತ್ತಾವರ  ಬಾಬುಗುಡ್ಡೆಯಲ್ಲಿರುವ  ಕುದ್ಮುಲ್ ರಂಗರಾವ್ ಅವರ ಸಮಾಧಿ ಸ್ಥಳದ ಪರಿಸರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ  ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅವರು ಶನಿವಾರ ಕುದ್ಮುಲ್ ರಂಗರಾವ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದರು. ಅಂದಿನ ಕಾಲದಲ್ಲಿ ಸಮಾಜದ ಅತ್ಯಂತ ತಳಸ್ತರದಲ್ಲಿದ್ದ ಸಮಾಜದ ಏಳಿಗೆಗಾಗಿ ನಿಷ್ಕಳಂಕವಾಗಿ ಸೇವೆ ಸಲ್ಲಿಸಿದ ಕುದ್ಮುಲ್ ರಂಗರಾವ್ ರಾಜ್ಯದ ಅದಮ್ಯ ಚೇತನ. ಯಾರ ವಿರೋಧವನ್ನು ಲೆಕ್ಕಿಸದೆ ಅವರು  ದಲಿತರ ಶಿಕ್ಷಣ ಮತ್ತು ಸಾಮಾಜಿಕ  ಏಳಿಗೆಗಾಗಿ ಹಗಲು ರಾತ್ರಿ ಶ್ರಮಿಸಿದರು ಎಂದು ಸಚಿವರು ಹೇಳಿದರು.

ಅತ್ತಾವರದಲ್ಲಿರುವ  ಕುದ್ಮುಲ್ ರಂಗರಾವ್  ಸಮಾಧಿ ಸ್ಥಳದ  ಅಭಿವೃದ್ಧಿಗೆ  ಅನುದಾನ ಈ ಹಿಂದೆಯೇ ಬಿಡುಗಡೆಯಾಗಿ, ಅರಣ್ಯ ಇಲಾಖೆ  ತಕರಾರಿನಿಂದಾಗಿ ಅಭಿವೃದ್ಧಿಗೆ ತೊಡಕಾಗಿತ್ತು ಎಂದು ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಶೀಘ್ರವೇ ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಚಿವರನ್ನು ಭೇಟಿಯಾದ ವಿವಿಧ ದಲಿತ ಸಂಘಟನೆಗಳು, ಕುದ್ಮುಲ್  ಸಮಾಧಿ ಸ್ಥಳದ ಅಭಿವೃದ್ಧಿಗೆ ಮನವಿ ಸಲ್ಲಿಸಿದರು.

ವಿಧಾನ ಪರಿಷತ್  ಸದಸ್ಯ ಐವನ್ ಡಿಸೋಜಾ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಮುಖಂಡರಾದ  ಶಶಿಧರ ಹೆಗ್ಡೆ, ಪದ್ಮರಾಜ ಪೂಜಾರಿ, ಟಿ. ಕೆ. ಸುಧೀರ್ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article