ಇಬ್ಬರು ವಿಧಾನ ಪರಿಷತ್ ಸದಸ್ಯರನ್ನು ಅಮಾನತುಗೊಳಿಸಬೇಕು: ಪ್ರತಾಪ್ಸಿಂಹ ನಾಯಕ್ ಆಗ್ರಹ
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸದನಕ್ಕೆ ಆಗಮಿಸಿ ತೆರಳುವ ವರೆಗೆ ಅವರಿಗೆ ಸಾಂವಿಧಾ ನಿಕ ಗೌರವ ನೀಡಬೇಕಾದ್ದು ಶಾಸಕರ ಆದ್ಯ ಕರ್ತವ್ಯ. ಅದರ ಬದಲು ಹಿರಿಯ ಅನುಭವಿ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಮತ್ತು ರವಿ ಅವರು ರಾಜ್ಯಪಾಲರನ್ನೇ ತಡೆಯಲು ಮುಂದಾಗಿ ಹೈಡ್ರಾಮಾ ಸೃಷ್ಟಿಸಿರುವುದು ಸರಿಯಲ್ಲ. ಅವರಾಗಿಯೇ ಅವರ ಅಂಗಿ ಹರಿದುಕೊಂಡು ಬಳಿಕ ವಿಪಕ್ಷ ಸದಸ್ಯರ ಮೇಲೆ ಆರೋಪಿಸಿದ್ದಾರೆ. ಈ ಬಗ್ಗೆಯೂ ಸ್ಪೀಕರ್ ತನಿಖೆ ನಡೆಸಬೇಕಾಗಿದೆ ಎಂದು ಆಗ್ರಹಿಸಿದರು.
ಮರು ಪರಿಶೀಲನೆ ತಿರಸ್ಕರಿಸಿ:
ಬಿ.ಕೆ.ಹರಿಪ್ರಸಾದ್ ಮತ್ತು ರವಿ ಅವರ ವರ್ತನೆ ವಿರುದ್ಧ ಸ್ಪೀಕರ್ಗೆ ವಿಪಕ್ಷ ಬಿಜೆಪಿ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ಸದನದ ನೀತಿ ನಿರೂಪಣೆ ಸಮಿತಿಗೆ ದೂರನ್ನು ಸ್ಪೀಕರ್ ವರ್ಗಾಯಿಸಿದ್ದಾರೆ. ಈಗ ಆಡಳಿತ ಪಕ್ಷದ ಸಚೇತಕರು ಈ ಬಗ್ಗೆ ಮರು ಪರಿಶೀಲಿಸುವಂತೆ ಸ್ಪೀಕರ್ ಅವರನ್ನು ಕೋರಿದ್ದು, ಮಂಗಳವಾರ ತೀರ್ಮಾನವನ್ನು ತಿಳಿಸುವುದಾಗಿ ಸ್ಪೀಕರ್ ಹೇಳಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನೀತಿ ನಿರೂಪಣೆ ಸಮಿತಿಗೆ ನೀಡಿರುವುದನ್ನು ಮರು ಪರಿಶೀಲಿಸಿ ವಾಪಸ್ ಪಡೆಯಲು ಸ್ಪೀಕರ್ ಮುಂದಾಗಬಾರದು. ಸಚೇತಕರ ಕೋರಿಕೆಯನ್ನು ಸರಾಸಗಟ ತಿರಸ್ಕರಿಸಬೇಕು. ಮಾತ್ರವಲ್ಲ ಹರಿಪ್ರಸಾದ್ರ ಅಂಗಿ ಹರಿದ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರತಾಪ್ಸಿಂಹ ನಾಯಕ್ ಒತ್ತಾಯಿಸಿದರು.
ರಾಜಕೀಯ ಬಳಕೆ ಉದ್ದೇಶ:
ಪ್ರಸಕ್ತ ರಾಜ್ಯದಲ್ಲಿ ಮುಖ್ಯಮಂತ್ರಿ ಅಧಿಕಾರ ಹಸ್ತಾಂತರ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೆ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆಯೂ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿ ರಾಮ್ ಜೀ ಮಸೂದೆ ವಿಚಾರವನ್ನು ವಿವಾದಕ್ಕೆ ಬಳಸಿ ಜನತೆಯ ಗಮನ ಬೇರೆ ಕಡೆಗೆ ಸೆಳೆಯುವ ಉದ್ದೇಶವನ್ನು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೊಂದಿದೆ. ಈ ವಿಶೇಷ ಅಧಿವೇಶನದಲ್ಲಿ ಆಡಳಿತ ಶಾಸಕರು ಮಾತ್ರವಲ್ಲ ಸಚಿವರು ಕೂಡ ವಿಪಕ್ಷಗಳಿಗೆ ಮಾತನಾಡಲು ಸದನದಲ್ಲಿ ಅವಕಾಶ ನೀಡುತ್ತಿಲ್ಲ. ಇದೇ ರೀತಿ ಗದ್ದಲದಲ್ಲೇ ಅಧಿವೇಶನವನ್ನು ಮುಕ್ತಾಯಗೊಳಿಸುವ ಇರಾದೆಯನ್ನು ಆಡಳಿತ ಕಾಂಗ್ರೆಸ್ ಹೊಂದಿದಂತಿದೆ ಎಂದು ಪ್ರತಾಪ್ಸಿಂಹ ನಾಯಕ್ ಹೇಳಿದರು.
ರಾಜ್ಯಪಾಲರ ನಡೆ ಸರಿ:
ನರೇಗಾ ಬದಲು ಜಿ ರಾಮ್ ಜೀ ಹೆಸರಲ್ಲಿ ರಾಷ್ಟ್ರಪತಿಗಳಿಂದ ಅಂಕಿತಗೊಂಡು ಜಾರಿಯಾದ ಮಸೂದೆಯ ವಿರುದ್ಧ ಮಾತನಾಡಲು ರಾಜ್ಯಪಾಲರು ಅಸಮ್ಮತಿ ವ್ಯಕ್ತ ಪಡಿಸಿರುವುದರಲ್ಲಿ ತಪ್ಪೇನು ಇಲ್ಲ. ಯಾಕೆಂದರೆ ರಾಷ್ಟ್ರಪತಿಗಳ ಅಂಕಿತಗೊಂಡ ಮಸೂದೆಯನ್ನು ಒಪ್ಪಿಕೊಳ್ಳಬೇಕಾದ್ದು ರಾಜ್ಯಗಳ ಕರ್ತವ್ಯ. ಅದನ್ನೇ ರಾಷ್ಟ್ರಪತಿಗಳ ರಾಜ್ಯ ಪ್ರತಿನಿಧಿಯಾದ ರಾಜ್ಯಪಾಲರು ಮಾಡಿದ್ದಾರೆ. ಜಂಟಿ ಅಧಿವೇಶನಕ್ಕೆ ಗೈರಾಗುವ ಬದಲು ಹಾಜರಾಗಿ ತಮಗೆ ಬೇಕಾದ್ದನ್ನಷ್ಟೇ ಮಾತನಾಡಿ ಸಾಂವಿಧಾನಿಕ ಜವಾಬ್ದಾರಿ ನಿಭಾಯಿಸಿದ್ದಾರೆ. ಹಿಂದೆ ಹಂಸರಾಜ್ ಭಾರದ್ವಾಜ್ ಹಾಗೂ ಖುರ್ಷಿದ್ ಆಲಂ ಖಾನ್ ರಾಜ್ಯಪಾಲರಾಗಿದ್ದಾಗ ಭಾಷಣವನ್ನೇ ಓದದೆ ನಿರ್ಗಮಿಸಿದ್ದರು. ಅಂದು ಆಡಳಿತದಲಿ ದ್ದ ಬಿಜೆಪಿ ಈಗಿನಂತೆ ರಾಜ್ಯಪಾಲರಿಗೆ ಅಗೌರವ ತೋರುವ ಕೆಲಸ ಮಾಡಿಲ್ಲ. ಆಗಿನ ರಾಜ್ಯಪಾಲರುಗಳು ಕೇಂದ್ರದ ಮಸೂದೆಗಳ ವಿರುದ್ಧ ಮಾತನಾಡದೇ ಇದ್ದುದನ್ನು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಸಮರ್ಥಿಸಿ ಮಾತನಾಡಿದ್ದರು. ರಾಜ್ಯಪಾಲರಿಗೆ ಸರ್ಕಾರದ ಕಿವಿ ಹಿಂಡುವ ಅಧಿಕಾರ ಇದೆ ಎಂದಿದ್ದರು. ಈಗ ಅವರೇ ಸಿಎಂ ಆಗಿ ರಾಜ್ಯಪಾಲರ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮುಖಂಡರಾದ ರಾಜಗೋಪಾಲ ರೈ, ಸುಜಿತ್ ಪ್ರತಾಪ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಶೋಭೇಂದ್ರ ಸಸಿಹಿ ತ್ಲು, ವಸಂತ ಪೂಜಾರಿ ಇದ್ದರು.