ಸಂವಿಧಾನವನ್ನು ನೆನಪಿಸುವ ಮಹತ್ವದ ದಿನ ಗಣರಾಜ್ಯೋತ್ಸವ: ಸಂದೇಶ್ ಪಿ.ಜಿ.

ಸಂವಿಧಾನವನ್ನು ನೆನಪಿಸುವ ಮಹತ್ವದ ದಿನ ಗಣರಾಜ್ಯೋತ್ಸವ: ಸಂದೇಶ್ ಪಿ.ಜಿ.


ಮೂಡುಬಿದಿರೆ: ಭಾರತದ ಸಂವಿಧಾನವು ಜಾತಿ, ಧರ್ಮ, ಮತಭೇದವಿಲ್ಲದೆ ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಒದಗಿಸಿರುವ ಮಹತ್ವದ ಗ್ರಂಥವಾಗಿದೆ. ಗಣರಾಜ್ಯೋತ್ಸವವು ದೇಶದ ವಿವಿಧ ಜನಾಂಗ, ವರ್ಗ, ಭಾಷೆ ಮತ್ತು ಸಮುದಾಯಗಳನ್ನು ಒಂದಾಗಿ ಕಟ್ಟುವ ಸಂವಿಧಾನದ ಮಹತ್ವವನ್ನು ನೆನಪಿಸುವ ದಿನವಾಗಿದೆ ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಪಿ.ಜಿ. ಸಂದೇಶ್ ಹೇಳಿದರು.

ಅವರು ಸುವರ್ಣ ಕರ್ನಾಟಕ ರಾಜ್ಯ ಸಮಿತಿ, ಜೈ ಭೀಮ್ ಯುವ ಸೇನೆಯ ಸಹಯೋಗದಲ್ಲಿ ಸೋಮವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಆಚರಿಸಿದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ವಿಶ್ವದ ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತದ ಸಂಸ್ಕೃತಿ ಹಾಗೂ ಸಮಾಜ ವ್ಯವಸ್ಥೆಗೆ ಅನುಗುಣವಾದ ಅತ್ಯುತ್ತಮ ಸಂವಿಧಾನವನ್ನು ರೂಪಿಸಿದ್ದಾರೆ.   ಬಾಬಾಸಾಹೇಬ್ ಅವರ ಸೇವೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ; ಅವರು ಎಲ್ಲಾ ವರ್ಗಗಳಿಗೂ ಪ್ರೇರಣೆಯಾಗಿದ್ದಾರೆ. ಅವರ ಸಂವಿಧಾನಾತ್ಮಕ ಆಶಯಗಳು ಮುಂದಿನ ಪೀಳಿಗೆಯವರೆಗೆ ತಲುಪಬೇಕೆಂಬುದು ನಮ್ಮೆಲ್ಲರ ಕರ್ತವ್ಯ ಎಂದರು.

ಜೈ ಭೀಮ್ ಯುವ ಸೇನೆಯ ಸಂಸ್ಥಾಪಕರೂ ಸುವರ್ಣ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ವರ್ತೂರು ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ  ಸಮಾಜ ಸೇವೆ ಹಾಗೂ ನ್ಯಾಯದ ಆಶಯದೊಂದಿಗೆ ಸಂಘಟನೆಯನ್ನು ಸ್ಥಾಪನೆಯಾಗಿದೆ. 

ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ಸಲ್ಲಿಸುವುದು ಅವರ ವಿಚಾರಧಾರೆಯನ್ನು ಕಾರ್ಯರೂಪಕ್ಕೆ ತರುವುದರಿಂದ ಮಾತ್ರ ಸಾಧ್ಯ. ಮುಂದಿನ ದಿನಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲೂ ಅಂಬೇಡ್ಕರ್ ಅವರ ಚಿತ್ರ ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ಆದ್ಯತೆ ನೀಡಬೇಕು ಎಂದರು.

ಕಲಾವಿದ ಸಂತೋಷ್ ಬೆದ್ರ, ಸಮಾಜ ಸೇವಕ ಕುಮಾರ್ ಹಾಗೂ ಸಂತೋಷ್ ಕೆ. ಅವರನ್ನು ಸನ್ಮಾನಿಸಲಾಯಿತು.

ಕನ್ನಡ ಜಾಗೃತ ಸಮಿತಿ ಜಿಲ್ಲಾ ಸದಸ್ಯ ರಾಜೇಶ್ ಕಡಲಕೆರೆ, ಜವನೆರ್ ಬೆದ್ರ ಸಂಘಟನೆ ಸ್ಥಾಪಕ ಅಮರ್ ಕೋಟೆ, ಉದ್ಯಮಿ ಎರಿಕ್ ಲೋಬೊ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸುವರ್ಣ ಕರ್ನಾಟಕ ರಾಜ್ಯ ಸಮಿತಿ–ಜೈ ಭೀಮ್ ಯುವ ಸೇನೆಯ ರಾಜ್ಯ ಕಾರ್ಯದರ್ಶಿ ಕೃಷ್ಣಪ್ಪ, ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಪ್ರವೀಣ್, ಮಹಿಳಾ ಘಟಕದ ಉಪಾಧ್ಯಕ್ಷೆ ಲೀಲಾ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪೂರ್ಣಿಮಾ ಬಂಟ್ವಾಳ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article