ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರ ಕಾರ್ಯಾಚರಣೆ : 106 ಕಿಲೋ ಗಾಂಜಾ ಸಹಿತ ಇಬ್ಬರು ವಶ
ಬೆಳ್ತಂಗಡಿ, ಚಾರ್ಮಾಡಿ ಗ್ರಾಮದ ನಿವಾಸಿ ರಫೀಕ್ ಪಿ(37), ಬೆಳ್ತಂಗಡಿ, ಚಾರ್ಮಾಡಿ ಗ್ರಾಮದ ನಿವಾಸಿ ಅಬ್ದುಲ್ ಸಾದಿಕ್ (37) ಬಂಧಿತರು.
ಜ.19ರಂದು ಸಂಜೆ ಕಾರು ಮತ್ತು ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ, ಕಾರು ಹಾಗೂ ಗೂಡ್ಸ್ ವಾಹನವನ್ನು ತಪಾಸಣೆಗಾಗಿ ನಿಲ್ಲಿಸಿದ್ದು, ಕಾರಿನ ಚಾಲಕನಲ್ಲಿ ವಿಚಾರಿಸಿದಾಗ ಆತ ಬೆಳ್ತಂಗಡಿ, ಚಾರ್ಮಾಡಿ ಗ್ರಾಮದ ನಿವಾಸಿ ರಫೀಕ್ ಪಿ(37) ಎಂಬುದಾಗಿ ತಿಳಿಸಿದ್ದುಮ್ ಆತನ ವರ್ತನೆಯಿಂದ ಸಂಶಯಗೊಂಡು ಕಾರನ್ನು ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಕವರ್ ನಲ್ಲಿ ಸುಮಾರು 100 ಗ್ರಾಂ ತೂಕವಿರುವ ಗಾಂಜಾ ಗಿಡದ ಎಲೆಗಳಂತೆ ಇದ್ದ ಸೊಪ್ಪು, ಹೂ, ಕಾಯಿ ತುಂಬಿಸಿ ಇದ್ದ ಕಟ್ಟು ಪತ್ತೆಯಾಗಿರುತ್ತದೆ.
ಆ ಬಳಿಕ ಗೂಡ್ಸ್ ವಾಹನದ ಚಾಲಕನ ಬಳಿ ವಿಚಾರಿಸಿದಾಗ ಆತನು ಬೆಳ್ತಂಗಡಿ, ಚಾರ್ಮಾಡಿ ಗ್ರಾಮದ ನಿವಾಸಿ ಅಬ್ದುಲ್ ಸಾದಿಕ್ (37) ಎಂಬುದಾಗಿ ತಿಳಿಸಿದ್ದು, ಆತನ ವಾಹನ ಪರಿಶೀಲಿಸಿದಾಗ ವಾಹನದಲ್ಲಿ 106 ಕಿಲೋ ಗ್ರಾಂ ಮತ್ತು 60 ಗ್ರಾಂ ತೂಕದ ಒಟ್ಟು 73 ಕಟ್ಟು ಗಾಂಜಾ ಪತ್ತೆಯಾಗಿರುತ್ತದೆ. ಇದರ ಮೌಲ್ಯ ರೂ.53,03,000 ಆಗಬಹುದು. ಈ ಬಗ್ಗೆ ಚಾಲಕನಲ್ಲಿ ವಿಚಾರಿಸಿದಾಗ ಸದ್ರಿ ಗಾಂಜಾ ಸೊಪ್ಪುಗಳನ್ನು ಕೇರಳ ಹಾಗೂ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು, ಸದ್ರಿ ಗಾಂಜಾವನ್ನು, ಸಾಗಾಣಿಕೆಗೆ ಬಳಸಿದ ವಾಹನಗಳನ್ನು ಹಾಗೂ ಆರೋಪಿಗಳ ಬಳಿಯಿದ್ದ ಎರಡು ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ. ಕ್ರ :09/2026,ಕಲಂ 8(c), 20(b)(ii)C NDPS Act-1985. ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಗುಣಪಾಲ ಜೆ ರವರು ಹಾಗೂ ಸಿಬ್ಬಂದಿಗಳಾದ ಹರೀಶ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಭವಿತ್ ರೈ, ನಾಗರಾಜ್, ಸತೀಶ್, ರಮೇಶ್,ಸುಬ್ರಮಣಿ,ವಿನೋದ್ ರವರುಗಳನ್ನು ಒಳಗೊಂಡ ತಂಡ ಪಾಲ್ಗೊಂಡಿದೆ.