ಮಾನವೀಯ ಮೌಲ್ಯ ರಕ್ಷಣೆಗೆ ಸಂಕಲ್ಪ ಅಗತ್ಯ: ಸ್ಟೆಲ್ಲಾ ವರ್ಗೀಸ್
ಸೋಮವಾರ ಪುತ್ತೂರು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ 77 ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜವಂದನೆ ನಡೆಸಿ ಪಥಸಂಚಲನದ ಗೌರವವಂದನೆ ಸ್ವೀಕರಿಸಿ ಅವರು ನಾಡಿಗೆ ಸಂದೇಶ ನೀಡಿದರು.
ಇಂದು ದೇಶದ ಸಂವಿಧನಾತ್ಮಕ ಮೌಲ್ಯ ಪ್ರಜಾಪ್ರಭುತ್ವದ ಶಕ್ತಿ ಹಾಗೂ ರಾಷ್ಟ್ರೀಯ ಏಕತೆಯನ್ನು ಸ್ಮರಿಸುವ ದಿನ. ಡಾ.ಅಂಬೇಡ್ಕರ್ ಕಲ್ಪಿಸಿದ ಸಮಾಜವು ಸಮಾನತೆ ಸಾಮಾಜಿಕ ನ್ಯಾಯ ಮತ್ತು ಆತ್ಮಗೌರವದ ಮೇಲೆ ನಿಂತ ಭಾರತ. ನಮ್ಮಲ್ಲಿ ಭಿನ್ನ ಅಭಿಪ್ರಾಯಗಳಿದ್ದರೂ ಮತ್ತೊಬ್ಬರಿಗೆ ಗೌರವ ನೀಡುವ ಮನೋಭಾವನೆಯೇ ದೇಶದ ಬಲವಾಗಿದೆ. ವಿದ್ಯಾರ್ಥಿಗಳ ಕೈಯಲ್ಲಿ ನಾಳಿನ ಭಾರತದ ರೂಪ ಇದೆ. ಸ್ವಚ್ಛತೆ ಸಾರ್ವಜನಿಕ ಆಸ್ತಿಗಳ ರಕ್ಷಣೆ ಹಾಗೂ ಮಾನವೀಯ ಮೌಲ್ಯಗಳನ್ನು ರಕ್ಷಿಸುವ ಮೂಲಕವೂ ನಾವು ದೇಶಸೇವೆ ಮಾಡಬಹುದು. ಹಾಗಾಗಿ ಸಂವಿಧಾನವನ್ನು ಗೌವಿಸುವ ಕರ್ತವ್ಯಗಳನ್ನು ನಿಷ್ಟೆಯಿಂದ ಪಾಲಿಸುವ ಭ್ರಷ್ಟಾಚಾರ ಮತ್ತು ಅಸಮಾನತೆಯನ್ನು ತಡೆಯುವ ಚಿಂತನೆಗಳನ್ನು ಬೆಳೆಸುವ ಮೂಲಕ ರಾಷ್ಟ್ರನಿರ್ಮಾಣಕ್ಕೆ ಸಮರ್ಥ ಬುನಾದಿ ಹಾಕಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ದೇಶದ ಸಂವಿಧಾನ ನಮ್ಮೆಲ್ಲರ ಬದುಕು ಮತ್ತು ಹಕ್ಕುಗಳನ್ನು ರಕ್ಷಿಸುತ್ತದೆ. ಯಾರಿಗೂ ತಮ್ಮ ಸ್ವಂತ ನಿರ್ಧಾರಗಳನ್ನಿ ಇತರರ ಮೇಲೆ ಹೇರುವ ಅವಕಾಶ ಇಲ್ಲಿಲ್ಲ. ಏನೇ ಇದ್ದರೂ ಅದು ಸಂವಿಧಾನದ ಚಿಂತನೆಯಡಿಯಲ್ಲಿಯೇ ನಡೆಯಬೇಕಾಗಿದೆ. ಹಾಗಾಗಿ ಸಂವಿಧಾನಕ್ಕೆ ಕೊಡುವ ಗೌರವದಲ್ಲಿ ಕಿಂಚಿತ್ತೂ ಕೊರತೆಯಾಗಬಾರದು. ಸ್ವಾತಂತ್ರ್ಯ ಪಡೆದು ಅಲ್ಪಕಾಲದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು, ಕುಡಿಯುವ ನೀರು, ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಸಾಕಷ್ಟು ಅನುದಾನ ಬಂದಿದೆ ಎಂದು ಹೇಳಿದ ಅವರು ಆಚರಣೆಗಳು ಸರ್ಕಾರಿ ಕಾರ್ಯಕ್ರಮ ಎಂಬಂತಾಗದೆ ಸಾರ್ವಜನಿಕರ ಒಗ್ಗೂಡುವಿಕೆ ಮೂಲಕ ಸಮಾಜಕ್ಕೆ ಸಂದೇಶ ನೀಡುವ ಹಾಗಿರಬೇಕು ಎಂದರು.
ರಾಷ್ಟ್ರೀಯ ಕ್ರೀಡಾಪಟು ಕೀರ್ತಿ ಬೆಟ್ಟಂಪಾಡಿ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ ಸಾಧಕರಾದ ಅವಂತಿ ಶರ್ಮ ಕೊಂಬೆಟ್ಟು, ರೋಶನ್ ಎಸ್.ಕೆ. ಕೊಂಬೆಟ್ಟು ಹಾಗೂ ಶ್ರೀಪೂಜಾ ಶಾಂತಿನಗರ ಅವರಿಗೆ ತಲಾ 50 ಸಾವಿರ ರೂ. ಬಹುಮಾನ ನೀಡಿ ಗೌರವಿಸಲಾಯಿತು. ಪೊಲೀಸ್ ಇಲಾಖೆ ಮತ್ತು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಡಿವೈಎಸ್ಪಿ ಪ್ರಮೋದ್ ಕುಮಾರ್, ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಪೌರಾಯುಕ್ತೆ ವಿದ್ಯಾ ಎಂ ಕಾಳೆ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಇದ್ದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ವಂದಿಸಿ, ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.