ಕಣಿಯೂರು ಶ್ರೀಧರನ ಕೊಲೆ ಶಂಕೆ: ಸಹೋದರನಿಂದ ತನಿಖೆಗೆ ಆಗ್ರಹ
ಶ್ರೀಧರನ ಮೃತದೇಹದ ಹಣೆ ಭಾಗದಲ್ಲಿ ಏಟು ಬಿದ್ದ ಗಾಯವಿತ್ತು. ಕೈಕಾಲುಗಳು ಒರಟಾಗಿ ದೇಹದಿಂದ ಮೇಲೆತ್ತಿದ ರೀತಿಯಲ್ಲಿ ಮರಗಟ್ಟಿದ ಸ್ಥಿತಿಯಲ್ಲಿತ್ತು. ಕೆರೆಯಲ್ಲಿ ಶವವಾಗಿ ಪತ್ತೆಯಾದ ಶ್ರೀಧರನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಶಂಕಿಸಿ ದ.ಕ. ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ನಾಲ್ಕು ತಿಂಗಳಿನಿಂದ ಪೊಲೀಸರ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ಇದೀಗ ಮಾನವಹಕ್ಕುಗಳ ಆಯೋಗಕ್ಕೆ ದೂರು ನೀಡಿರುವುದಾಗಿ ಮೃತ ಶ್ರೀಧರನ ಸಹೋದರ ಶಿವಪ್ರಸಾದ್ ಪತ್ರಿಕಾ ಗೋಷ್ಠಿಯಲ್ಲಿ ಸಾವಿನ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ಬೆಳ್ತಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳ ಮಹಜರು ನಡೆಸಿ ಇಲಾಖಾ ಪ್ರಕ್ರಿಯೆ ನಡೆಸಿದ್ದರು ಎಂದು ಪ್ರತಿಕ್ರಿಯೆ ನೀಡಿದ ಮೃತನ ಒಡಹುಟ್ಟಿದ ಸಹೋದರ ಶಿವಪ್ರಸಾದ್ ತಮ್ಮ ಶ್ರೀಧರನ ಸಾವು ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಕೊಲೆಯಾಗಿದೆ ಎಂಬುದಾಗಿ ಅನುಮಾನದಿಂದ ದ.ಕ. ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ತನಿಖೆ ಒತ್ತಾಯಿಸಿದ್ದೆವು. ಆದರೆ ಎಸ್ಪಿಗೆ ದೂರು ನೀಡಿ ನಾಲ್ಕು ತಿಂಗಳುಗಳಾದರೂ ಪೊಲೀಸ್ ಇಲಾಖೆ ಪ್ರಕರಣದ ತನಿಖೆಗೆ ಸಂಬಂಧಿಸಿ ಯಾವ ಕ್ರಮಕೈಗೊಂಡಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಪ್ರಕರಣದ ಎಫ್ಐಆರ್ ಪ್ರತಿ ಕೇಳಲು ಹೋದರೆ ಕನಿಷ್ಠ ಎಫ್ಐಆರ್ ಪ್ರತಿಯನ್ನೂ ಕೊಡಲು ಬೆಳ್ತಂಗಡಿ ಪೊಲೀಸರು ನಿರಾಕರಿಸಿದ್ದಾರೆ.
ಶ್ರೀಧರನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಲೆ ಭಾಗದ ಗಾಯವನ್ನು ಉಲ್ಲೇಖಿಸಲಾಗಿಲ್ಲ. ಶ್ರೀಧರನ ಅನುಮಾನಾಸ್ಪದ ಸಾವಿನ ಬಗ್ಗೆ ಎಸ್ಪಿಗೆ ನೀಡಿರುವ ದೂರಿನಲ್ಲಿ ವಿವರಿಸಿರುವ ಸಂಶಯಗಳಿಗೆ ಪುಷ್ಠಿ ನೀಡಬಲ್ಲ ಕೆಲವು ಸಂಗತಿಗಳನ್ನು ಉಲ್ಲೇಖಿಸಿದ್ದೇವೆ ಎಂದರು.
ಶ್ರೀಧರನ ಶವ ಪತ್ತೆಯಾದ ಹಿಂದಿನ ದಿನ ಆ.25 ರಂದು ರಾತ್ರಿ ಸುಮಾರು 11.30 ರ ಸುಮಾರಿಗೆ ಮುತ್ತ ಯಾನೆ ಮುತ್ತರಾಜ್ ಎಂಬವರು ಶ್ರೀಧರನ ಮನೆಯವರಿಗೆ ಫೋನ್ ಮಾಡಿ ಶ್ರೀಧರ ಮನೆಗೆ ಬಂದಿದ್ದಾನೆಯೇ ಎಂದು ವಿಚಾರಿಸಿದ್ದಾರೆ. ಮರುದಿನ ಬೆಳಗ್ಗೆ ಮತ್ತೆ ಕರೆಮಾಡಿ ಮನೆಗೆ ಕರೆದಿದ್ದು ಅಲ್ಲಿಗೆ ಹೋದಾಗ ಶ್ರೀಧರನನ್ನು ಹುಡುಕೋಣ ಎಂದು ಹೇಳಿ ಹುಡುಕುವ ನೆಪದಲ್ಲಿ ಕಾಡು ಪ್ರದೇಶವನ್ನು ದಾಟಿ ಕೆರೆಯ ಬದಿಗೆ ಕರೆದುಕೊಂಡು ಬಂದು ಶ್ರೀಧರನ ಒಂದು ಜೊತೆ ಚಪ್ಪಲನ್ನು ತೋರಿಸಿ ಅವನ ಚಪ್ಪಲಿಗಳು ಹಾಗೂ ಮೀನು ಹಿಡಿಯಲು ಕಟ್ಟಿರುವ ಗಾಳ ಮತ್ತು ಶ್ರೀಧರನ ಮೃತದೇಹವನ್ನು ತೋರಿಸಿದ್ದಾನೆ, ಅವನ ಕೆಲವು ವರ್ತನೆಯನ್ನು ಗಮನಿಸಿದಾಗ ಶ್ರೀಧರನನ್ನು ಕೊಂದು ಆಕಸ್ಮಿಕ ಘಟನೆ ಎಂದು ಬಿಂಬಿಸಿರಬಹುದು ಎಂಬ ಅನುಮಾನ ಉಂಟಾಗಿದೆ ಎಂದರು.
ಶ್ರೀಧರನ ಶವವನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸ್ ದೂರು ನೀಡಬೇಕೆಂದು ನಾನು ಹೇಳಿದಾಗ ಶ್ರೀಧರನ ಒಂದು ಜೊತೆ ಬಟ್ಟೆಯನ್ನು ಕೊಟ್ಟು ಶ್ರೀಧರನು ಗಾಳ ಹಾಕಲು ರಾತ್ರಿ ಮನೆಯಿಂದ ತೆರಳಿರುತ್ತಾನೆ ಎಂದು ಪೊಲೀಸರಿಗೆ ಹೇಳಬೇಕು, ಬೇರೆ ಯಾವ ವಿಷಯವನ್ನೂ ಹೇಳಬಾರದು ಎಂದು ತಾಕೀತು ಮಾಡಿದ್ದಾನೆ. 25/08/2025 ರ ಮಧ್ಯರಾತ್ರಿ ವೇಳೆಗೆ ಮುತ್ತ ಯಾನೆ ಮುತ್ತರಾಜ್ ಮನೆಯಲ್ಲಿ ಜೋರಾದ ಗಲಾಟೆ ನಡೆದ ಬಗ್ಗೆ ಸ್ಥಳೀಯ ಮಹಿಳೆಯೊಬ್ಬರು ಕೇಳಿಸಿಕೊಂಡಿದ್ದು ಗಲಾಟೆಯಲ್ಲಿ ಮೃತ ಶ್ರೀಧರನ ದನಿ ಕೇಳಿರುತ್ತಾರೆ. ಈ ಕಾರಣದಿಂದ ಶ್ರೀಧರನ ಮರಣ ಆಕಸ್ಮಿಕವಾಗಿ ನಡೆದಿಲ್ಲ, ಅದೊಂದು ಕೊಲೆಯಾಗಿದೆ, ಕೃತ್ಯದಲ್ಲಿ ಮುತ್ತುರಾಜ್ ಮಾತ್ರವಲ್ಲದೆ ಇತರ 6 ಮಂದಿ ಭಾಗಿಯಾಗಿದ್ದಾರೆ ಎಂಬ ಅನುಮಾನವಿದೆ ಎಂದು ಅವರು ಆರೋಪಿಸಿದ್ದಾರೆ.
ದ.ಕ. ಎಸ್ಪಿ, ಮಾನವ ಹಕ್ಕುಗಳ ಆಯೋಗಕ್ಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳು ನಮ್ಮ ಪರಿಚಯದ ಕೆಲವರಲ್ಲಿ ‘ಶ್ರೀಧರನನ್ನು ನಾವೇ ಕೊಂದಿದ್ದು ನಾವೇ ಕೆರೆಗೆ ಹಿಡ್ಕೊಂಡು ಹೋಗಿ ಹಾಕಿದ್ದು’ ಎಂದು ಹೇಳಿಕೊಂಡು ಬಂದಿದ್ದಾರೆ. ಆದುದರಿಂದ ಪೊಲೀಸರು ಪ್ರಕರಣವನ್ನು ಕೂಡಲೇ ತನಿಖೆ ಮಾಡಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಆತನ ಸಾವಿನಿಂದ ನೊಂದ ನಮ್ಮ ಕುಟುಂಬಕ್ಕೆ ಪೊಲೀಸ್ ಇಲಾಖೆ ಕೂಡಲೇ ಸ್ಪಂದಿಸಿ ನ್ಯಾಯ ಮತ್ತು ರಕ್ಷಣೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.