ಚಿನ್ನಕ್ಕಾಗಿ ಪತ್ನಿಗೆ ಪತಿ, ಅತ್ತೆಯಿಂದ ಹಲ್ಲೆ: ಜೀವಬೆದರಿಕೆ
ಬಂಟ್ವಾಳ: ಗೃಹಿಣಿಯೋರ್ವರಿಗೆ ತನ್ನ ಪತಿ ಹಾಗೂ ಅತ್ತೆ ಸೇರಿ ಚಿನ್ನ ತರುವಂತೆ ಪೀಡಿಸಿ, ದೈಹಿಕ ಹಲ್ಲೆ ನಡೆಸಿದ್ದಲ್ಲದೆ ಕೊಲೆಬೆದರಿಯೊಡ್ಡಿದ ಘಟನೆ ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಗ್ರಾಮದ ಹೊಸಮನೆ ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಸಂದೇಶ ಪೂಜಾರಿ ಹಾಗೂ ಆತನ ತಾಯಿ ಬೇಬಿ ಅವರು ಚಿನ್ನಕ್ಕಾಗಿ ಒತ್ತಾಯಿಸಿ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾಗಿ ಸಂದೇಶ ಪೂಜಾರಿಯ ಪತ್ನಿ ಪ್ರತಿಮಾ ಅವರ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಬಂಟ್ವಾಳ ಎಸ್.ಸಿ.ಜೆ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ಆದೇಶದಂತೆ ಪ್ರತಿಮಾ ಅವರ ದೂರಿನನ್ವಯ ಪ್ರಕರಣ ದಾಖಲಿಸಿರುವ ಪುಂಜಾಲಕಟ್ಟೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಪ್ರತಿಮಾ ಅವರ ಗಂಡ ಬೆಂಗಳೂರಿನಲ್ಲಿ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿರುವುದಾಗಿದೆ, ಗಂಡ ಮನೆಗೆ ಬಂದಾಗ ಮಕ್ಕಳ ಹಾಗೂ ಚಿನ್ನದ ವಿಚಾರದಲ್ಲಿ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡುತ್ತಿದ್ದು, ಇದನ್ನು ನೀನು ತವರು ಮನೆಯವರಿಗೆ ಹೇಳಿದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಂಡನ ತಾಯಿ ಬೇಬಿ ಕೂಡ ಆತನಿಗೆ ಬೆಂಬಲ ಮಾಡುತ್ತಿದ್ದು, ಫೆ.22 ರಂದು ಬೆಳಗ್ಗೆ ಸುಮಾರು 8 ಗಂಟೆಗೆ ಪ್ರತಿಮಾ ಅವರು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಕ್ಷುಲಕ ಕಾರಣಕ್ಕೆ ಬೈದು ಕೈಯಿಂದ ಹಲ್ಲೆಗೈದಿದ್ದರೆನ್ನಲಾಗಿದೆ.
ಈ ವಿಚಾರವನ್ನು ತಿಳಿದ ಪ್ರತಿಮಾ ಅವರ ತಮ್ಮ ಪ್ರದೀಪ್ ಅವರು ಸಹೋದರಿಯನ್ನು ಕಾರ್ಕಳದಲ್ಲಿರುವ ತನ್ನ ತವರು ಮನೆಗೆ ಕರೆದುಕೊಂಡು ಹೋಗಿರುತ್ತಾರೆ.
ಈ ಸಂದರ್ಭ ಪ್ರತಿಮಾ ಅವರು ತನ್ನ ಹಾಗೂ ಮಕ್ಕಳ ಚಿನ್ನವನ್ನು ಗಂಡನ ಅನುಮತಿ ಪಡೆದು ತವರು ಮನೆಗೆ ತೆಗೆದುಕೊಂಡು ಹೋಗಿದ್ದರು. ಬಳಿಕ ಸಂದೇಶ ಪೂಜಾರಿ ಪತ್ನಿಯನ್ನು ವಾಪಾಸು ಮನೆಗೆ ಕರಕೊಂಡು ಹೋಗಿದ್ದು, ಚಿನ್ನದ ವಿಚಾರವು ಆತನಿಗೆ ತಿಳಿದಿದ್ದರೂ ಕೂಡಾ ಆತ ಪತ್ನಿಗೆ ಅದೇ ವಿಚಾರದಲ್ಲಿ ಅವಾಚ್ಯವಾಗಿ ನಿಂದಿಸಿ ಚಿನ್ನವನ್ನು ತಾಯಿ ಮನೆಯಿಂದ ವಾಪಾಸು ತೆಗೆದುಕೊಂಡು ಬರುವಂತೆ ಹಲ್ಲೆಗೈದಿದ್ದಲ್ಲದೆ ಈ ವಿಚಾರವನ್ನು ನಿನ್ನ ತಾಯಿ ಮನೆಯವರಿಗೆ ಹೇಳಿದರೆ ಸಾಯಿಸಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪ್ರತಿಮಾ ಅವರು ದೂರಿನಲ್ಲಿ ತಿಳಿಸಿದ್ದಾರೆ.