‘ಸಿತಾರ್ ರತ್ನ’ ಕೊಚ್ಚಿಕಾರ್ ದೇವದಾಸ್ ಪೈ ಅವರಿಂದ ಮನಮೋಹಕ ಸಿತಾರ್ ವಾದನ
Friday, February 20, 2026
ಧರ್ಮಸ್ಥಳ: ಮಹಾಶಿವರಾತ್ರಿಯ ಪವಿತ್ರ ಪರ್ವದಿನದಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿ ಹಾಗೂ ಸಂಗೀತದ ಅಪೂರ್ವ ಸಂಯೋಗ ಕಂಡುಬಂದಿತು. ಮಂಗಳೂರಿನ ಖ್ಯಾತ ಸಿತಾರ್ ವಾದಕ ‘ಸಿತಾರ್ ರತ್ನ’ ಕೊಚ್ಚಿಕಾರ್ ದೇವದಾಸ್ ಪೈ ಅವರು ಶ್ರೀ ಮಂಜುನಾಥ ದೇವಸ್ಥಾನ ಸನ್ನಿಧಿಯಲ್ಲಿ ಭಕ್ತಿಭಾವಪೂರ್ಣ ಸಿತಾರ್ ವಾದನವನ್ನು ನೀಡಿ ಭಕ್ತರ ಮನಸೂರೆಗೊಂಡರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ನೆರವೇರಿತು. ಪೈ ಅವರ ಸಿತಾರ್ ನಾದವು ಭಕ್ತಿಭಾವವನ್ನು ಮೂಡಿಸಿತು.
ಈ ಸಂದರ್ಭದಲ್ಲಿ ಹೆಗ್ಗಡೆ ದಂಪತಿಗಳು ಕೊಚ್ಚಿಕಾರ್ ದೇವದಾಸ್ ಪೈ ಅವರ ಸಂಗೀತಸೇವೆಯನ್ನು ಶ್ಲಾಘಿಸಿ, ಸಂಗೀತಕಲಾ ಕ್ಷೇತ್ರದಲ್ಲಿ ಅವರ ಅಪಾರ ಕೊಡುಗೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಬಳಿಕ ಶ್ರೀ ಮಂಜುನಾಥ ದೇವರ ಮೊಹರಿರುವ ಸುವರ್ಣಪದಕವನ್ನು ಪ್ರದಾನ ಮಾಡಿ, ಶಾಲು ಹೊದಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಅನೇಕ ಭಕ್ತರು ಹಾಗೂ ಸಂಗೀತಾಸಕ್ತರು ಉಪಸ್ಥಿತರಿದ್ದು, ಮಹಾಶಿವರಾತ್ರಿಯ ಆಚರಣೆಗೆ ವಿಶೇಷ ಮೆರುಗು ನೀಡಿತು.