ಎದೆಯೊಳಗೆ ಹೊಕ್ಕ ಕಬ್ಬಿಣದ ರಾಡ್: 11 ವರ್ಷದ ಬಾಲಕಿಯ ಪ್ರಾಣ ರಕ್ಷಿಸಿದ ಕೆಎಂಸಿ ಆಸ್ಪತ್ರೆಯ ವೈದ್ಯರು

ಎದೆಯೊಳಗೆ ಹೊಕ್ಕ ಕಬ್ಬಿಣದ ರಾಡ್: 11 ವರ್ಷದ ಬಾಲಕಿಯ ಪ್ರಾಣ ರಕ್ಷಿಸಿದ ಕೆಎಂಸಿ ಆಸ್ಪತ್ರೆಯ ವೈದ್ಯರು


ಮಂಗಳೂರು: ಕಬ್ಬಿಣದ ರಾಡ್ ಎದೆಯೊಳಗೆ ಹೊಕ್ಕು ತೀರ ಗಂಭೀರ ಸ್ಥಿತಿಯಲ್ಲಿದ್ದ ಕಾಸರಗೋಡಿನ 11 ವರ್ಷದ ಬಾಲಕಿಯನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಜ.18 ರಂದು ಬಾಲಕಿ ಆಟವಾಡುವಾಗ ಕಬ್ಬಿಣದ ರಾಡ್ ಮೇಲೆ ಆಕಸ್ಮಿಕವಾಗಿ ಬಿದ್ದಿದ್ದು, ರಾಡ್ ಬಾಲಕಿಯ ಎದೆಯ ಬಲಭಾಗದಲ್ಲಿ ಮುಂದೆಯಿಂದ ಹೊಕ್ಕಿ ಹಿಂಬದಿಯಿಂದ ಹೊರಬಂದಿದ್ದು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಪೋಷಕರು ಬಾಲಕಿಯನ್ನು ಕರೆದೊಯ್ದಿದ್ದು, ವೈದ್ಯರು ಸೂಕ್ತವಾದ ಪ್ರಾಥಮಿಕ ಚಿಕಿತ್ಸೆ ನೀಡಿ ಸಕಾಲದಲ್ಲಿ ಹೆಚ್ಚಿನ ಚಿಕಿತ್ಸೆಗೆ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ತಜ್ಞೆ ಡಾ. ಅರ್ಪಿತಾ ಮತ್ತವರ ತಂಡ ತಕ್ಷಣ ಬಾಲಕಿಯ ಸ್ಥಿತಿಯನ್ನು ಅರಿತು ಶಸ್ತ್ರಚಿಕಿತ್ಸೆ ಕೊಠಡಿಗೆ ಕಳುಹಿಸಿಕೊಟ್ಟಿದ್ದಾರೆ.


ಬಾಲಕಿಗೆ ಥೊರಾಕೊಟೊಮಿ ಎಂಬ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದ್ದು ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ. ಸದಾಶಿವ್ ರಾವ್, ಅರವಳಿಕೆ ತಜ್ಞ ಡಾ. ಸುನೀಲ್ ಮತ್ತು ಡಾ. ಫ್ರೀಡಾ ಕುಟಿನ್ಹಾ ಅವರ ಜೊತೆ ಸೇರಿ ಬಾಲಕಿಯ ಎದೆಗೆ ಹೊಕ್ಕಿದ್ದ ಕಬ್ಬಿಣದ ರಾಡ್‌ನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಬಾಲಕಿಯನ್ನು ಪಿಡಿಯಾಟ್ರಿಕ್ ಇಂಟೆನ್ಸಿವ್ ಕೇರ್‌ಗೆ ವರ್ಗಾಯಿಸಿ ತೀವ್ರ ನಿಗಾದಲ್ಲಿ ಇರಿಸಿದ್ದು, ಡಾ. ಸ್ವಾತಿ ರಾವ್ ಕನ್ಸಲ್ಟೆಂಟ್-ಪಿಡಿಯಾಟ್ರಿಕ್ ಇನ್ಟೆನ್ಸಿವಿಸ್ಟ್ ಅವರ ಆರೈಕೆಯಲ್ಲಿ ಬಾಲಕಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಬೇಗ ಚೇತರಿಕೆ ಕಂಡುಕೊಂಡಿದ್ದಾಳೆ.

ಚಿಕಿತ್ಸೆ ಕುರಿತು ಡಾ. ಸದಾಶಿವ್ ರಾವ್ ಮಾತನಾಡಿ, ಮಕ್ಕಳಲ್ಲಿ ಎದೆಯೊಳಗೆ ಇಂತಹ ವಸ್ತುಗಳು ಹೊಕ್ಕುವಂತಹ ಘಟನೆಗಳು ಅಪರೂಪ ಆದರೆ ಇವು ಜೀವಕ್ಕೆ ಅಪಾಯಕಾರಿ. ಚಾಕು, ರಾಡ್‌ನಂತಹ ವಸ್ತುಗಳು ಎದೆಯೊಳಗೆ ಹೊಕ್ಕಿದಂತಹ ಸಂದರ್ಭದಲ್ಲಿ ಒಳಹೊಕ್ಕಿದ ವಸ್ತುಗಳನ್ನು ತಜ್ಞರ ಮತ್ತು ಸಂಪೂರ್ಣ ಸೌಕರ್ಯ ಹೊಂದಿರುವ ಆರೋಗ್ಯ ಕೇಂದ್ರದಲ್ಲಿ ಮಾತ್ರ ಹೊರತೆಗೆಯಬೇಕು ಎಂಬುದು ತಿಳಿದುಕೊಳ್ಳುವುದು ಮುಖ್ಯ. ಈ ಪ್ರಕರಣ ಕೂಡ ಸಂಕೀರ್ಣವಾಗಿದ್ದು ರಾಡ್‌ನ್ನು ಎದೆಯೊಳಗಿಂದ ತೆಗೆಯುವ ಮುನ್ನ ಹೆಚ್ಚುವರಿ ರಾಡ್‌ನ್ನು ತುಂಡರಿಸುವುದು ಅಗತ್ಯವಾಗಿತ್ತು ಎಂದು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article