ಫೆ.21 ರಂದು ಬಿ.ಎಂ. ರೋಹಿಣಿ ಅಭಿನಂದನೆ ಮತ್ತು ಗ್ರಂಥ ಗೌರವ ಸಮಾರಂಭ
ಮಂಗಳೂರು: ಬಿ.ಎಂ. ರೋಹಿಣಿ ಅಭಿನಂದನಾ ಸಮಿತಿ ಮಂಗಳೂರು ಹಾಗೂ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳಗಂಗೋತ್ರಿ ಸಹಯೋಗದಲ್ಲಿ ನಿವೃತ್ತ ಶಿಕ್ಷಕಿ, ಲೇಖಕಿ ಬಿ.ಎಂ. ರೋಹಿಣಿ ಅಭಿನಂದನೆ ಮತ್ತು ಗ್ರಂಥ ಗೌರವ ಸಮಾರಂಭ ಫೆ.21ರಂದು ಬೆಳಗ್ಗೆ 100.30ಕ್ಕೆ ನಗರದ ಹಂಪನಕಟ್ಟೆ ಮಂಗಳೂರು ವಿವಿ ಕಾಲೇಜು ರವೀಂದ್ರ ಭವನದಲ್ಲಿ ನಡೆಯಲಿದೆ.
ಈ ವೇಳೆ ಬಿ.ಎಂ. ರೋಹಿಣಿ ಅವರಿಗೆ ‘ಆರೋಹಿಣಿ’ ಗ್ರಂಥ ಗೌರವ ಸಲ್ಲಿಸಲಾಗುವುದು. ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ. ನಾಗಪ್ಪ ಗೌಡ ಆರ್. ಗ್ರಂಥ ಅನಾವರಣ ಮಾಡುವರು. ಹಿರಿಯ ಲೇಖಕಿ ಡಾ.ಎಚ್.ಎಸ್. ಅನುಪಮಾ ಗ್ರಂಥಾವಲೋಕನ ಮಾಡಲಿದ್ದಾರೆ. ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಲಿನೊ ಅಭಿನಂದನಾ ನುಡಿಗಳನ್ನಾಡುವರು.
ಪ್ರಜ್ಞಾ ರೋಹನ್ಕುಮಾರ್ ನೆಲ್ಲಿಂಗೇರಿ, ಮಂಗಳೂರಿನ ಜಿಲ್ಲಾ ಕೇಂದ್ರ ಗ್ರಂಥಾಲಯ ಗ್ರಂಥಪಾಲಕಿ ಪ್ರಣೀತಾ ಮೊಂತೆರೊ, ವಿವಿ ಕಾಲೇಜು ಪ್ರಾಂಶುಪಾಲ ಡಾ. ಗಣಪತಿ ಗೌಡ ಭಾಗವಹಿಸುವರು. ಅಭಿನಂದನಾ ಸಮಿತಿ ಹಾಗೂ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಆರೋಹಿಣಿ ಸಂಪಾದಕಿ ಸಬಿಹಾ ಭೂಮಿಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿ.ಎಂ. ರೋಹಿಣಿ ಅವರು ಕಥೆ, ಮಹಿಳಾ ಚಿಂತನೆ, ಸಂಶೋಧನೆ, ವೈಚಾರಿಕ ಲೇಖನ ಒಳಗೊಂಡ 23 ಕೃತಿಗಳನ್ನು ರಚಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ 1963ರಲ್ಲಿ ವೃತ್ತಿ ಆರಂಭಿಸಿ, ನಡೆನುಡಿಯ ಮೂಲಕ ವ್ಯಕ್ತಿತ್ವವನ್ನು ‘ಆರೋಹಿಣಿ’ಯಾಗಿಸಿದವರು. ಅಪಾರ ಅಭಿಮಾನಿ ಬಳಗ, ಓದುಗ ವರ್ಗವನ್ನು ಗಳಿಸಿದ್ದಾರೆ. ಅವರು ಮುಂದಿನ ಏಪ್ರಿಲ್ 6ಕ್ಕೆ 83ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಅವರ ಗೆಳತಿಯರು, ಅಭಿಮಾನಿಗಳು, ಕರಾವಳಿಯ ವಿದ್ವತ್ ವಲಯ, ಶಿಷ್ಯರು, ಸಹೋದ್ಯೋಗಿಗಳು, ಸಂಘ ಸಂಸ್ಥೆಗಳ ಸಹಿತ 12 ಸಂಘಟನೆಗಳು ಒಗ್ಗೂಡಿ ಪ್ರೀತಿ, ಅಭಿಮಾನ, ಗೌರವದ ಅಭಿವ್ಯಕ್ತಿಗಾಗಿ ‘ನಾಗರಿಕ ಸನ್ಮಾನ’ ಆಯೋಜಿಸಿದ್ದಾರೆ ಎಂದರು.
ಅಭಿನಂದನಾ ಸಮಿತಿ ಕಾರ್ಯದರ್ಶಿ ಜ್ಯೋತಿ ಚೇಳಾಯರು, ಡೀಡ್ಸ್ ಸಂಸ್ಥೆ ನಿರ್ದೇಶಕಿ ಮರ್ಲಿನ್ ಮಾರ್ಟಿಸ್, ಬಿಲ್ಲವ ಮಹಿಳಾ ವೇದಿಕೆಯ ಸುಮಲತಾ ಸುವರ್ಣ, ಪಡಿ ಸಂಸ್ಥೆಯ ರೆನ್ನಿ ಡಿಸೋಜ, ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ದೇವಿಕಾ ನಾಗೇಶ್ ಉಪಸ್ಥಿತರಿದ್ದರು.