ನವೆಂಬರ್ನಲ್ಲಿ ದುಬಾಯಿಯಲ್ಲಿ ಕನ್ನಡ ಸಮ್ಮೇಳನ
ಮಂಗಳೂರು: ನಾವು ವಿಶ್ವ ಕನ್ನಡಿಗರು(ನಾವಿಕ)ದಿಂದ ಈ ಬಾರಿ ನವೆಂಬರ್ ತಿಂಗಳಲ್ಲಿ ದುಬಾಯಿಯಲ್ಲಿ ಕನ್ನಡ ಸಮ್ಮೇಳನವನ್ನು ಆಯೋಜಿಸಲು ತೀರ್ಮಾನ ಮಾಡಲಾಗಿದ್ದು, ಈಗಾಗಲೇ ದುಬಾಯಿ ಕನ್ನಡ ಸಂಘದ ಜತೆಗೆ ಮಾತುಕತೆ ನಡೆದಿದೆ ಎಂದು ನಾವಿಕದ ಅಧ್ಯಕ್ಷ ಡಾ. ಅನ್ನಪೂರ್ನ ಭಟ್ ಹೇಳಿದರು.
ಅವರು ಗುರುವಾರ ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ದುಬಾಯಿ ಕನ್ನಡ ಸಂಘ ಕನ್ನಡ ರಾಜ್ಯೋತ್ಸವವನ್ನು ಬಹಳ ಅದ್ದೂರಿಯಾಗಿ ಮಾಡುತ್ತದೆ. ಈ ಬಾರಿ ನಾವಿಕದಿಂದ ಕನ್ನಡ ಸಮ್ಮೇಳನ ಆಯೋಜಿಸಲಾಗಿದೆ. ಇದರ ಜತೆಗೆ 2027ರಲ್ಲಿ ಸೆಪ್ಟೆಂಬರ್ ತಿಂಗಳ 3ರಿಂದ 5ರ ವರೆಗೆ ಅಮೆರಿಕದ ಅಟ್ಲಾಂಟಾ ರಾಜ್ಯದ ಸೌತ್ ಕನ್ವೆಶನ್ ಸೆಂಟರ್ನಲ್ಲಿ ನಾವಿಕ-ವಿಶ್ವ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ವಿಶ್ವದ ಬೇರೆ ಬೇರೆ ಭಾಗಗಳಿಂದ ಕನ್ನಡ ನಾಡು, ನುಡಿ, ಸಂಸ್ಕೃತಿ, ಆರ್ಥಿಕತೆ, ಸಾಮಾಜಿಕ ಸುಧಾರಣೆ, ಉದ್ಯಮಶೀಲತೆ, ಪರಿಸರ, ಶಿಕ್ಷಣ ಮುಂತಾದ ಕ್ಷೇತ್ರದಲ್ಲಿ ದುಡಿದ ಅನುಭವ ಮತ್ತು ಆಲೋಚನೆ ಇರುವ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸುವ ಜತೆಗೆ ಕನ್ನಡ ಮತ್ತು ಕನ್ನಡಿಗರ ಭವಿಷ್ಯದ ಕರ್ಯಸೂಚಿಯನ್ನು ಸಿದ್ಧಪಡಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.
ಇದರ ಜತೆಗೆ ಮಹಿಳಾ ಸಶಕ್ತೀಕರಣ ಕುರಿತಾದ ಕರ್ಯಕ್ರಮಗಳು, ಅನಿವಾಸಿ ಭಾರತೀಯ ಸಮಸ್ಯೆಗಳಿಗೆ ಪರಿಹಾರ, ಸಮಾಜಮುಖಿ ಕಲ್ಯಾಣ ಕರ್ಯಕ್ರಮ, ಕಿರಿಯರಿಗೆ ಮಾರ್ಗದರ್ಶನ ಕರ್ಯಕ್ರಮ, ಸಾಹಿತ್ಯ ಚಟುವಟಿಕೆಗಳಿಗೆ ಉತ್ತೇಜನ ಹಾಗೂ ಕನ್ನಡನಾಡಿನ ಇತರ ಭಾಷೆಗಳ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಅರಿವು ಮೂಡಿಸುವ ಕೆಲಸಗಳು ಸಾಗಲಿದೆ ಎಂದರು.
ಡಾ. ಸುಬ್ರಹ್ಮಣ್ಯ ಭಟ್, ಡಾ.ಜಿ.ಕೆ. ಭಟ್ ಮತ್ತು ಡಾ. ರಾಜಲಕ್ಷ್ಮೀ ಎನ್.ಕೆ. ಉಪಸ್ಥಿತರಿದ್ದರು.