ಬೀದೀಬದಿ ವ್ಯಾಪಾರಿಗಳ ಮೇಲೆ ಬುಲ್ದೊಜರ್ ಕಾರ್ಯಾಚರಣೆ ನಿಲ್ಲಿಸಲು ಸಿಐಟಿಯು ಮನವಿ, ಸಂತ್ರಸ್ತ ಬೀದಿಬದಿ ವ್ಯಾಪಾರಿಗಳನ್ನು ಭೇಟಿ ಮಾಡಿದ ನಿಯೋಗ, ಹೋರಾಟಕ್ಕೆ ಸಿದ್ಧತೆ
Tuesday, February 10, 2026
ಮಂಗಳೂರು: ಲೋಕೋಪಯೋಗಿ ಇಲಾಖೆ ಅವರು ತೊಕ್ಕೊಟ್ಟು ನಿಂದ ಅಸೈಗೋಳಿ ವರೆಗೆ ವ್ಯಾಪಾರ ಮಾಡುತ್ತಿದ್ದ ಬಡ ಬೀದಿಬದಿ ವ್ಯಾಪಾರಿಗಳನ್ನು ಬುಲ್ದೊಜರ್ ಬಳಸಿ ಕಾನೂನುಬಾಹಿರ ತೆರವು ಕಾರ್ಯಾಚರಣೆ ಮಾಡಿರುವ ಪ್ರದೇಶಕ್ಕೆ ಇಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (CITU) ನ ಜಿಲ್ಲಾ ಮಟ್ಟದ ನಿಯೋಗ ಭೇಟಿ ನೀಡಿ ಸಂತ್ರಸ್ತ ಬೀದಿಬದಿ ವ್ಯಾಪಾರಿಗಳನ್ನು ಭೇಟಿ ಮಾಡಿ, ಲೋಕೋಪಯೋಗಿ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರ ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳ ವಿವರ ಪಡೆಯಿತು ಮತ್ತು ಬೀದಿ ವ್ಯಾಪಾರ ಮುಂದುವರಿಸಲು ಧೈರ್ಯ ತುಂಬಿದ ನಿಯೋಗವು ಮುಂದಿನ ಹೋರಾಟದ ಬಗ್ಗೆ ಬೀದಿ ವ್ಯಾಪಾರಿಗಳ ಜೊತೆ ಸಮಾಲೋಚನೆ ನಡೆಸಿತು. ದಾಳಿ ಮುಂದುವರಿದಲ್ಲಿ ಹೋರಾಟದ ಎಚ್ಚರಿಕೆ ನೀಡಿತು.
ನಿಯೋಗದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮತ್ತು ಕಾರ್ಯಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಅಧ್ಯಕ್ಷ ಮುಜಾಫರ್ ಅಹ್ಮದ್, ಉಳ್ಳಾಲ ತಾಲೂಕು ಸಿಐಟಿಯು ಅಧ್ಯಕ್ಷ ಸುಂದರ ಕುಂಪಲ ಡಿವೈಎಫ್ಐ ತಾಲೂಕು ಕಾರ್ಯದರ್ಶಿ ರಿಜ್ವಾನ್ ಖಂಡಿಗ, ಮುಖಂಡರಾದ ಸಲೀಮ್ ಬೀರಿ, ನೌಶಾದ್, ಸದಾಶಿವ ವಿಶ್ವ, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನಿಯೋಗವು ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಭೇಟಿ ಮಾಡಿ ಕಾರ್ಯಾಚರಣೆ ನಿಲ್ಲಿಸುವಂತೆ ಮನವಿ ಮಾಡಿತು.
