ಅಕ್ಷರ ದಾಸೋಹ ನೌಕರರ ಹಕ್ಕುಗಳನ್ನು ರಕ್ಷಿಸಿರಿ: ವಸಂತ ಆಚಾರಿ
Thursday, February 12, 2026
ಮಂಗಳೂರು: ಅಕ್ಷರದಾಸೋಹ ನೌಕರರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸಬೇಕೆಂದು ಸಿಐಟಿಯುನ ದ.ಕ. ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಹೇಳಿದರು.
ಅವರು ಫೆ.12 ರಂದು ಮಂಗಳೂರು ಮಿನಿ ವಿಧಾನ ಸೌಧದ ಮುಂದುಗಡೆ ನಡೆದ ಅಕ್ಷರ ದಾಸೋಹ ನೌಕರರ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದರು.
ಇಂದು ರಾಜ್ಯದಾದ್ಯಂತ ಅಕ್ಷರ ದಾಸೋಹ ನೌಕರರು ಮುಷ್ಕರದಲ್ಲಿ ಭಾಗವಹಿಸಿ ಕೇಂದ್ರ ಸರಕಾರದ 4 ಕಾರ್ಮಿಕ ಸಂಹಿತೆಯನ್ನು ವಾಪಾಸು ಪಡೆಯಬೇಕೆಂದು ಧ್ವನಿಗೂಡಿಸಿದ್ದಾರೆ. ಕೇಂದ್ರ ಸರಕಾರ ಕಳೆದ 13 ವರುಷಗಳಿಂದ ಬಿಸಿಯೂಟ ಯೋಜನೆಗೆ ಅನುದಾನವನ್ನೇ ಏರಿಸಲಿಲ್ಲ. ಬದಲಿಗೆ ಅನುದಾನವನ್ನು ಕಡಿತ ಮಾಡಿದೆ. ಈ ಬಾರಿಯ ಬಜೆಟ್ನಲ್ಲಿ ಕೂಡಾ ನಗಣ್ಯ ಮಾಡಲಾಗಿದೆ. ಕಾರ್ಮಿಕ ಸಂಘಟನೆ ಕಟ್ಟುವುದು, ಚೌಕಾಸಿ ಮಾಡುವುದು ಮುಷ್ಕರ ಮಾಡುವುದು ಇನ್ನು ಮುಂದೆ ಅಪರಾಧ ವಾಗಲಿದೆ. ಬಲಪಂಥೀಯ ಸರಕಾರ ಎಲ್ಲಾ ಕಾನೂನುಗಳನ್ನು ನಾಶ ಮಾಡುತ್ತಿದೆ. ಬಿಸಿಯೂಟ ಕಾರ್ಮಿಕರಿಗೆ ಕನಿಷ್ಟ ಕೂಲಿನಿಗದಿ ಪಡಿಸಬೇಕು, ಕೆಲಸದ ಭದ್ರತೆ ನೀಡ ಬೇಕು, ಪಿಂಚಣಿ ತಿಂಗಳಿಗೆ 10,000 ರೂ. ನೀಡಬೇಕು ಎಂದ ಅವರು ಯಾವುದೇ ಕಾರಣಕ್ಕೂ ಶಾಲೆಗಳಿಗೆ ಇಸ್ಕಾನ್ ಸಂಸ್ಥೆ ಆಹಾರ ಪೂರೈಸಲು ಅವಕಾಶ ನೀಡಬಾರದು, ರಾಜ್ಯ ಸರಕಾರ ಬಜೆಟ್ನಲ್ಲಿ ಬಿಸಿಯೂಟ ಕಾರ್ಮಿಕರ ವೇತನವನ್ನು ಏರಿಸಬೇಕೆಂದು ಒತ್ತಾಯಿಸಿದರು.
ಪ್ರಾಸ್ತವಿಕವಾಗಿ ಸಂಘದ ಜಿಲ್ಲಾಧ್ಯಕ್ಷೆ ಭವ್ಯ ಮಾತನಾಡಿ, ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ ಮುಷ್ಕರ ಮಾಡಿದ ಎಲ್ಲಾ ಕಾರ್ಮಿಕರನ್ನು ಅಭಿನಂದಿಸಿದರು.
ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ಮುಂದಾಳುಗಳಾದ ಉಮಾವತಿ, ಶಭಾನಾಬಾನು, ರೇಖಾಲತಾ, ಆಸ್ಮಾ, ಶಾಲಿನಿ ಮತ್ತಿತರರು ವಹಿಸಿದ್ದರು.


