ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯ ನೆರಳಾಗಿರಬೇಕು: ಸತೀಶ್ ಕುಂಪಲ
ಮಂಗಳೂರು: ಸಚಿವ ಪ್ರಿಯಂಕ್ ಖರ್ಗೆ ಆರ್ಎಸ್ಎಸ್ ‘ದೆವ್ವ’ ಬಿಜೆಪಿ ‘ಅದರ ನೆರಳು’ ಎಂಬುವುದಾಗಿ ಹೇಳಿದ್ದು, ಅವರು ತಪ್ಪಿ ಹೇಳಿರಬೇಕು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ‘ದೆವ್ವ’ ಮಲ್ಲಿಕಾರ್ಜುನ ಖರ್ಗೆ ‘ಅವರ ನೆರಳು’ ಎಂದಿರಬೇಕು ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಅವರು ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಚಿವ ಪ್ರಿಯಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಿಯಂಕ್ ಖರ್ಗೆ ಅವರು ತಮ್ಮ ತಂದೆಗೆ ಹೇಳುವ ಮಾತನ್ನು ತಪ್ಪಿ ಸಂಘಕ್ಕೆ ಹೇಳಿದ್ದಾರಾ..?, ಸಧ್ಯದಲ್ಲಿ ಸಚಿವ ಸಂಪುಟ ಬದಲಾಗಲಿದ್ದು, ಹೈಕಮಾಂಡ್ ಮೆಚ್ಚಿಸಲು ಈ ರೀತಿ ಮಾತನಾಡುತ್ತಿದ್ದಾರೆ. ಅದಕ್ಕಾಗಿದೇ ರಾಹುಲ್ ಗಾಂಧಿಯ ಅಕ್ಕನ ಹೆಸರನ್ನು ಇಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಆರ್ಎಸ್ಎಸ್, ಸಂಘ ಪರಿವಾರ ಅದರದ್ದೇ ಆದ ರೀತಿಯಲ್ಲಿ ನಡೆಯುತ್ತಿದೆ. ಇದು ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜಪರ ಕೆಲಸ ಮಾಡುತ್ತಿದ್ದು, ಇದು ಸ್ವಯಂ ಸೇವಕರಿಂದ ನಡೆಯುತ್ತಿದ್ದು, ಆರ್ಎಸ್ಎಸ್ನ್ನು ನೋಂದಣಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಇದಕ್ಕೆ ಫಂಡಿಂಗ್ ಬರುತ್ತದೆ ಎನ್ನುವ ಖರ್ಗೆ ಬಂದು ನೋಡಲಿ ಎಲ್ಲದಕ್ಕೂ ಲೆಕ್ಕ-ಪತ್ರ ಇದೆ. ಅಗತ್ಯ ಬಿದ್ದಾಗ ಸ್ವಯಂ ಸೇವಕರೇ ಹಣವನ್ನು ಕೃಡೀಕರಿಸುತ್ತಾರೆ. ಫಂಡಿಂಗ್ ಬರಲು ಇದು ನ್ಯಾಷನಲ್ ಹೆರಲ್ಡ್ ಅಲ್ಲ. ಭ್ರಷ್ಟಚಾರದಲ್ಲಿ ಮುಳುಗಿರುವವರಿಗೆ ಸಂಘ ಪರಿವಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.
ಪ್ರಿಯಂಕ್ ಖರ್ಗೆಯವರ ತಂದೆ ಎಐಸಿಸಿ ಅಧ್ಯಕ್ಷರಾದ ಮೇಲೆ ರಾಜ್ಯದಲ್ಲಿ ಪ್ರಿಯಂಕ್ ಖರ್ಗೆ ಅವರು ಮುಕ್ಯಮಂತ್ರಿಗಳನ್ನು ನಿರ್ವಹಿಸುತ್ತಿರುವಂತೆ ಕಾಣುತ್ತಿದೆ. ಎಲ್ಲಾ ಖಾತೆಗಳ ಸಚಿವರು ಇವರೊಬ್ಬರೇ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಐಟಿ-ಬಿಟಿ ಇಲಾಖೆಯಿಂದ ಜಿಲ್ಲೆಗೆ ಶೂನ್ಯ ಅಭಿವೃದ್ಧಿ:
ಕಳೆದ ಎರಡುವರೆ ವರ್ಷದಲ್ಲಿ ಪ್ರಿಯಂಕ್ ಖರ್ಗೆ ಅವರು ದ.ಕ. ಜಿಲ್ಲೆಗೆ ಏನು ಅಭಿವೃದ್ಧಿಯ ಕೆಲಸ ಮಾಡಿದ್ದಾರೆ, ಎಷ್ಟು ಐಟಿ-ಬಿಟಿ ಕಂಪೆನಿಗಳನ್ನು ಹೂಡಿಕೆಗೆ ತಂದಿದ್ದಾರೆ, ಜಿಲ್ಲೆಯ ಎಷ್ಟು ನಿರುದ್ಯೋಗ ಯುವಕರಿಗೆ ಉದ್ಯೋಗವನ್ನು ನೀಡಿದ್ದಾರೆ ಅವರು ಇಷ್ಟು ವರ್ಷದಲ್ಲಿ ಜಿಲ್ಲೆಗೆ ಶೂನ್ಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಕೋಮುಗಲಭೆ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಲ್ಲೆಯಲ್ಲಿ ಕೋಮುಗಲಭೆ ಪ್ರಾರಂಭವಾಗುತ್ತದೆ. ಕೋಮು ಭಾವನೆಗಳನ್ನು ಸೃಷ್ಟಿ ಮಾಡುವವರೇ ಕಾಂಗ್ರೆಸ್ನವರು, ಕಾಂಗ್ರೆಸ್ ಆಡಳಿತಕ್ಕೆ ಬಂದದ್ದೇ ಅಶಾಂತಿಯನ್ನುಂಟು ಮಾಡುತ್ತಾರೆ. ಜಿಲ್ಲೆಯ ಬಗ್ಗೆ ಮಾತನಾಡುವ ಖರ್ಗೆ ಅವರು ತಿಳಿಸುಕೊಳ್ಳಲಿ ನಮ್ಮ ಜಿಲ್ಲೆಯಲ್ಲಿ ಪ್ರಾರಂಭವಾದ ಬ್ಯಾಂಕ್ಗಳು ಇಂದು ರಾಷ್ಟ್ರೀಕೃತ ಬ್ಯಾಂಕ್ಗಳಾಗಿವೆ, ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜುಗಳಿವೆ, ನೀವು ಸಚಿವರು ನಿಮ್ಮ ತಂದೆ ಸಚಿವರು ಇಷ್ಟು ವರ್ಷದಲ್ಲಿ ಕಲಬುರ್ಗಿ ಎಷ್ಟು ಅಭಿವೃದ್ಧಿಯಾಗಿದೆ. ಎಷ್ಟು ಮೆಡಿಕಲ್ ಕಾಲೇಜುಗಳಿವೆ, ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವರ್, ದಿನೇಶ್ ಅಂಟೂರ್, ಸಂಜಯ್ ಪ್ರಭು, ವಸಂತ್ ಪೂಜಾರಿ ಉಪಸ್ಥಿತರಿದ್ದರು.
ಸುಸಂಸ್ಕೃತಿಯ ಹೇಳಿಕೆಯಲ್ಲ:
ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಜಿ ರಾಮ್ ಜಿ ಯೋಜನೆಯ ಪ್ರಚಾರದ ಸಂದರ್ಭದಲ್ಲಿ ಪುತ್ತೂರಿನ ಅಭಿವೃದ್ಧಿಯ ವಿಚಾರದಲ್ಲಿ ‘ಸುಳ್ಳಿನ ಕಂತೆಯನ್ನು ಬಟ್ಟೆ ಬಿಚ್ಚಿದಂತೆ ಬಿಚ್ಚುತ್ತೇನೆ’ ಎಂದು ಹೇಳಿದ್ದರು, ಅವರ ಈ ಮಾತಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ‘ನಾಯಿ’ ಎಂದು ಹೇಳಿದ್ದು, ಅದು ಸುಸಂಸ್ಕೃತಿಯಲ್ಲ. ನಮ್ಮ ಸಂಸ್ಕೃತಿಯನ್ನು ಅರಿತು ಮಾತನಾಡಬೇಕು. -ಸತೀಶ್ ಕುಂಪಲ, ದ.ಕ. ಬಿಜೆಪಿ ಜಿಲ್ಲಾಧ್ಯಕ್ಷರು,
ಪ್ರಿಯಂಕ್ ಖರ್ಗೆ ಅಸ್ವಸ್ಥರಾಗಿದ್ದಾರೆ:
ಪ್ರಿಯಂಕ್ ಖರ್ಗೆ ಅವರು ಆರ್ಎಸ್ಎಸ್, ಬಿಜೆಪಿಯ ಬಗ್ಗೆ ಮಾತನಾಡುತ್ತಿದ್ದು, ಅವರು ಮಾನಸಿಕವಾಗಿ ಅಥವಾ ಸೈಕಲಾಜಿಕಲ್ ಆಗಿ ಅಸ್ವಸ್ಥರಾಗಿದ್ದಾರೆ. ಪ್ರಿಯಂಕ್ ಖರ್ಗೆಯವರಿಗೆ ಆರ್ಎಸ್ಎಸ್ನ ಸಿದ್ದಾಂತಗಳ ಮೇಲೆ ಸಿಟ್ಟಿದೆ, ಅವರು ರಾಹುಲ್ ಗಾಂಧಿಗೆ ಬಕೆಟ್ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಶಾಂತಿಯ ನಗರವಾಗಿ ದೇಶದಲ್ಲಿಯೇ ಮಂಗಳೂರು ನಂ.1 ಇದೆ, ವಿಶ್ವದಲ್ಲಿಯೇ 15ನೇ ಸ್ಥಾನದಲ್ಲಿದೆ.
ಮಂಗಳೂರಿಗೆ ಐಟಿ ಪಾರ್ಕ್ ತರುವುದಾಗಿ ಹೇಳಿದ್ದ ಖರ್ಗೆ ಇಲ್ಲಿಯ ತನಕ ಟೆಂಡರ್ ಡಾಕ್ಯೂಮೆಂಟ್ ಮಾಡಲಾಗಿಲ್ಲ. ಅವರ ಇಲಾಖೆಯಲ್ಲಿಯೇ ದೊಡ್ಡ ಮಾಫಿಯಾ ನಡೆಯುತ್ತಿದೆ. -ಡಾ. ವೈ. ಭರತ್ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ ಕ್ಷೇತ್ರ.