ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ
ಅಣುಕು ಪ್ರದರ್ಶನದಲ್ಲಿ ಅಗ್ನಿಶಾಮಕ ದಳದ ಕಾರ್ಯ, ಅವಘಡ ಸಂಭವಿಸಿದ ಸಂದರ್ಭದಲ್ಲಿ ವಾಹನದಟ್ಟಣೆ ಅಥವಾ ಜನದಟ್ಟಣೆ ನಿಯಂತ್ರಣ ಹಾಗೂ ಅವಘಡದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸುವ ವಿಧಾನಗಳನ್ನು ಮತ್ತು ತುರ್ತು ಆರೋಗ್ಯ ಸೇವೆಗಳು ಹೇಗಿರಬೇಕು ಎಂಬುದನ್ನು ಪ್ರದರ್ಶಿಸಲಾಯಿತು. ಆಫ್ ಸೈಟ್ ಅಣುಕು ಪ್ರದರ್ಶನದಲ್ಲಿ ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು, 11 ಆಂಬುಲೆನ್ಸ್ ವಾಹನಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಗಳು, ವೈದ್ಯರು ಸೇರಿದಂತೆ ವಿವಿಧ ಇಲಾಖೆಗಳಿಂದ 100 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ನೈಜ ಘಟನೆಯನ್ನು ಬಿಂಬಿಸುತ್ತಿದ್ದ ಈ ಅಣುಕು ಪ್ರದರ್ಶನದಲ್ಲಿ ಕೈಗಾರಿಕಾ ಘಟಕದಲ್ಲಿ ಕಾಲ್ಪನಿಕ ಅನಿಲ ಸೋರಿಕೆ ಪರಿಸ್ಥಿತಿಯನ್ನು ಸೃಷ್ಟಿಸಲಾಯಿತು. ಅವಘಡದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಣಾ ಪಡೆ ರಕ್ಷಿಸಿ, ತಕ್ಷಣ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ಹತ್ತಿರದ ಆಸ್ಪತ್ರೆಗೆ ಸ್ಟ್ರೆಚರ್ ಮೇಲೆ ತೆಗೆದುಕೊಂಡು ಹೋಗಿ ರಕ್ಷಿಸುವಂತೆ ಸಾಗಿಸುವ ಪ್ರದರ್ಶನ ನೀಡಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರಾಥಮಿಕ ಚಿಕಿತ್ಸಾ ವಿಧಾನಗಳನ್ನು ತೋರಿಸಿಕೊಟ್ಟರು.
ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಕಾರ್ಖಾನೆಗಳ ಉಪನಿರ್ದೇಶಕ ರಾಜೇಶ್ ಮಿಶ್ರಕೋಟಿ, ಎನ್.ಡಿ.ಆರ್.ಎಫ್. ಮುಖ್ಯಸ್ಥ ಅಜಯ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿಜಯ್ ಕುಮಾರ್ ಉಪಸ್ಥಿತರಿದ್ದರು.