ಹಿಂದುತ್ವ ಒಂದು ಜೀವವ  ಪದ್ಧತಿ-ಹಿಂದೂ ಸಂಗಮದಲ್ಲಿ ಪಂಪ್‌ವೆಲ್

ಹಿಂದುತ್ವ ಒಂದು ಜೀವವ ಪದ್ಧತಿ-ಹಿಂದೂ ಸಂಗಮದಲ್ಲಿ ಪಂಪ್‌ವೆಲ್


ಮಂಗಳೂರು: ’ಹಿಂದುತ್ವ ಎಂದರೆ ಮುಸಲ್ಮಾನರ ವಿರುದ್ಧ ಎಂದೆಲ್ಲ ಬೇರೆ ಬೇರೆ ರೀತಿ ಅಪಪ್ರಚಾರ ಮಾಡಲಾಗುತ್ತಿದೆ. ಹಿಂದುತ್ವ ಒಂದು ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹೇಗೆ ಬದುಕಬೇಕು ಎಂದು ಜಗತ್ತಿಗೆ ತೋರಿಸಿ ಕೊಟ್ಟಿರುವುದೇ ಹಿಂದುತ್ವ. ಹಿಂದುತ್ವಕ್ಕಿಂತ ಮಿಗಿಲಾದ ಜಾತ್ಯತೀತತೆ ಯಾವುದಾದರೂ ಇದೆಯೇ’ ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಪ್ರಶ್ನಿಸಿದರು. 

ನಗರದ ಕದ್ರಿಯಲ್ಲಿ ಭಾನುವಾರ ನಡೆದ  ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ‘ಶಿಕ್ಷಣ, ನ್ಯಾಯ, ಕೃಷಿಗಳನ್ನು ಜಗತ್ತಿಗೆ ಹೇಳಿಕೊಟ್ಟಿದ್ದೇ ಹಿಂದೂಗಳು. ಜಗತ್ತಿನ ಶ್ರೇಷ್ಠ ಸಂಸ್ಕೃತಿ ನಮ್ಮದು. ದೇವರು ಒಬ್ಬನೇ ನಾಮ ಹಲವು ಎನ್ನುವ ನಾವು ಗಣಪತಿಯನ್ನು ಆರಾಧನೆ ಮಾಡುತ್ತೇವೆ, ಮಹಮ್ಮದ್ ಪೈಗಂಬರ್ ಅನ್ನು, ಯೇಸು ಕ್ರಿಸ್ತರನ್ನು ಬೇಕಾದರೂ ಆರಾಧನೆ ಮಾಡುತ್ತೇವೆ’ ಎಂದರು. 

‘ಜಗತ್ತೇ ಒಂದು  ಕುಟುಂಬ; ಜಗತ್ತಿಗೇ ಒಳಿತಾಗಬೇಕು ಎಂದು ಬಯಸುವ ಧರ್ಮ ಇದ್ದರೆ, ಅದು ಸನಾತನ ಧರ್ಮ ಮಾತ್ರ. ಮನುಷ್ಯ ಮಾತ್ರ ಅಲ್ಲ, ಪ್ರಾಣಿ ಪಕ್ಷಿ, ಮರ? ಗಿಡಗಳಿಗೂ ಇದು ಒಳಿತನ್ನು ಹಾರೈಸುತ್ತದೆ. ಹಿಂದೂ ಧರ್ಮದ ಉದಾತ್ತ ಚಿಂತನೆಯಿಂದಾಗಿಯೇ ಜಗತ್ತಿನ ವಿವಿಧ ದೇಶಗಳ ಜನರು ಈ ಧರ್ಮದತ್ತ ಆಕರ್ಷಿತರಾಗಿ ಇದರ ಸಾರ ತಿಳಿಯಲು ಉತ್ಸುಕರಾಗಿದ್ದಾರೆ’ ಎಂದರು. 

‘ಇಸ್ಲಾಂ ಹುಟ್ಟಿದ್ದು 1400 ವರ್ಷಗಳ ಹಿಂದೆ. ಕ್ರೈಸ್ತ ಧರ್ಮ ಹುಟ್ಟಿದ್ದು ಸುಮಾರು 2 ಸಾವಿರ ವರ್ಷಗಳ ಹಿಂದೆ. ಹಿಂದೂ ಧರ್ಮ ಹುಟ್ಟಿದ್ದು ಯಾವಾಗ, ಇದನ್ನು ಪ್ರಾರಂಭಿಸಿದ್ದು ಯಾರು ಎಂಬುದೇ ತಿಳಿದಿಲ್ಲ. ಯಾವ ಧರ್ಮಕ್ಕೆ ಹುಟ್ಟಿದ ದಿನ ಇಲ್ಲವೊ, ಅದಕ್ಕೆ ಸಾವೂ ಕೂಡಾ ಇಲ್ಲ. ನಮ್ಮದು ಮೃತ್ಯಂಜಯ ಸಮಾಜ. ಯಾವ ಶಕ್ತಿಗೂ ಇದನ್ನು ನಾಶ ಮಾಡಲು ಸಾಧ್ಯವಿಲ್ಲ’ ಎಂದರು.  

‘ಹೊರಗಿನಿಂದ ಬಂದವರಿಗೆ ವ್ಯಾಪಾರಕ್ಕೆ, ಪ್ರಾರ್ಥನಾ ಮಂದಿರ ಕಟ್ಟಲು ನಮ್ಮ ಪೂರ್ವಜರೇ ಜಾಗ ಕೊಟ್ಟರು. ಇಂದಿಗೂ ಶುಕ್ರವಾರ ಲಕ್ಷಾಂತರ ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆಗಳು ನಡೆಯುತ್ತವೆ.  ಚರ್ಚ್ಗಳಿಗೆ ಭಾನುವಾರ ಹೋಗುತ್ತಾರೆ. ಅವರಿಗೆ ನಾವು ಯಾವತ್ತಾದರೂ ತೊಂದರೆ ಕೊಟ್ಟಿದ್ದೇವೆಯೇ? ಚರ್ಚ್, ಮಸೀದಿಗಳ ಮೇಲೆ ದಾಳಿ ಮಾಡಿದ್ದೇವೆಯೇ?, ನಾವೂ ನೀವೂ ಒಟ್ಟಿಗೆ ಬದುಕೋಣ ಎಂದು ಹೇಳಿಕೊಟ್ಟವರೇ ನಾವು. ಆದರೂ ಇಂದು ಹಿಂದುತ್ವವನ್ನು ಟೀಕಿಸಲಾಗುತ್ತಿದೆ. ತಮಿಳುನಾಡಿನ ರಾಜಕಾರಣಿಯೊಬ್ಬರು ಹಿಂದುತ್ವವನ್ನು ಡೆಂಗೆ, ಕ್ಯಾನ್ಸರ್‌ಗೆ  ಹೋಲಿಸಿದ್ದಾರೆ’ ಎಂದರು.  

‘ಜಾತಿ ಹೆಸರಿನಲ್ಲಿ ನಡೆಯುವ ತಾರತಮ್ಯ ನಿವಾರಣೆ ಆಗಬೇಕು. ಕುಟುಂಬದವರು ವರ್ಷವಿಡೀ ಒಟ್ಟಿಗೆ ಕೂಡಿ ಬಾಳಲು ಸಾಧ್ಯವಾಗದಿದ್ದರೂ, ಆಗಾಗ ಒಂದುಗೂಡುವಂತಾಗಬೇಕು. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮರ್ಯಾದೆಗೇಡು ಹತ್ಯಗಳನ್ನು, ವಿವಾಹ ವಿಚ್ಛೇದನಗಳನ್ನು ತಡೆಯಬೇಕು. ಸ್ವದೇಶಿ ವಸ್ತುಗಳನ್ನೇ ಬಳಸಬೇಕು. ಮಕ್ಕಳು ಶಾಲೆಯಲ್ಲಿ ಇಂಗ್ಲಿಷ್ ಕಲಿತರೆ ಸಾಕು; ಮನೆಯಲ್ಲಿ ಮಾತೃಭಾಷೆಯಲ್ಲೇ ವ್ಯವಹರಿಸಬೇಕು’ ಎಂದು ಸಲಹೆ ನೀಡಿದರು.

‘ಶರಣ್ ಭಾಷಣದಿಂದ  ಸಂಘರ್ಷ ಯಾವತ್ತೂ ಆಗಿಲ್ಲ. ನನ್ನ ಭಾಷಣ ಕೇಳಿ ಯುವಕರು ಪೊಲೀಸ್ ಜೀಪಿಗೆ ಬೆಂಕಿ ಹಚ್ಚುವುದಿಲ್ಲ. ನನ್ನ ಭಾಷಣ ಕೇಳಿ ಸಮಾಜವನ್ನು ಒಗ್ಗೂಡಿಸುವ ಯುವಕರ ತಂಡ ಸಿಗಬಹುದೇ ಹೊರತು, ಸಮಾಜವನ್ನು ವಿಭಜನೆ ಮಾಡುವ ತಂಡ ಸಿಗಲ್ಲ. ಆದರೂ ರಾಜ್ಯದ ಅನೇಕ ಕಡೆ ನನ್ನ ಭಾಷಣಕ್ಕೆ ನಿರ್ಬಂಧ ಹೇರಲಾಗಿದೆ. ನನ್ನ ಧರ್ಮ ನನ್ನ ಸಂಸ್ಕೃತಿ ಬಗ್ಗೆ ಮಾತನಾಡಲು ಇನ್ನೊಬ್ಬರ ಅನುಮತಿ ಬೇಕಾ’ ಎಂದು ಪ್ರಶ್ನಿಸಿದರು.  

ಅಧ್ಯಕ್ಷತೆ ವಹಿಸಿದ್ದ ಡಾ. ಹಂಸರಾಜ ಆಳ್ವ, ‘ಸಹಿಷ್ಣುತೆ ಹಿಂದೂ ಧರ್ಮದ ಸಾರ. ನಾವು  ಇತರ ಧರ್ಮದವರ ಜೊತೆ ಸಹಬಾಳ್ವೆಯಿಂದ ಇರೋಣ’ ಎಂದರು.

‘ಹಿಂದೂಗಳು ಈ ಸ್ಥಿತಿಗೆ ಕಾರಣ ಒಗ್ಗಟ್ಟು ಇಲ್ಲದಿರುವುದು. ಜಾತಿ ವ್ಯವಸ್ಥೆ ನಮ್ಮನ್ನು ಶಿಥಿಲಗೊಳಿಸುತ್ತಿದೆ. ನಾವೆಲ್ಲರೂ ಹಿಂದೂಗಳು ಎಂಬ ಭಾವನೆ ಮೂಡದ ಹೊರತು ನಮ್ಮ ಏಳಿಗೆಯಾಗದು’ ಎಂದರು.

ಕಾರ್ಯಕ್ರಮ ಆಯೋಜನೆ ಸಮಿತಿ ಅಧ್ಯಕ್ಷೆ ಭಾರತಿ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎಸ್.ಎಸ್. ಮುಖಂಡ ಸುನಿಲ್ ಆಚಾರ್, ವಿಠಲದಾಸ ತಂತ್ರಿ, ಡಾ.ಕಿಶೋರ್ ಶೆಟ್ಟಿ, ಯೋಗಗುರು ರಾಧಾಕೃಷ್ಣ ಶೆಟ್ಟಿ, ಲಕ್ಷ್ಮೀಶ ಭಂಡಾರಿ, ಗೋಕುಲ್ ಕದ್ರಿ,  ದಿನೇಶರಾಜ್ ಅಂಚನ್, ಮನೋಹರ ಸುವರ್ಣ, ಪುರುಷೊತ್ತಮ ಪೂಜಾರಿ, ಶಶಿಕಾಂತ ತಿವಾರಿ, ಬಾಲಕೃಷ್ಞ ಕದ್ರಿ ಭಾಗವಹಿಸಿದ್ದರು.

ಕದ್ರಿ ದೇವಸ್ಥಾನದಿಂದ ಮೈದಾನದವರೆಗೆ ಶೋಭಾಯಾತ್ರೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

ಕರಾವಳಿ ಪ್ರತ್ಯೇಕ ರಾಜ್ಯವಾಗಲಿ’ 

‘ನಮ್ಮ ತೆರಿಗೆ ದುಡ್ಡು ಉಚಿತ ಯೋಜನೆಗಳಿಗೆ ದುರ್ವಿನಿಯೋಗ ಆಗುತ್ತಿರುವುದನ್ನು ನೋಡಿ ಬೇಸರವಾಗುತ್ತದೆ. ಉತ್ತರ ಕನ್ನಡ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ಕರಾವಳಿ ರಾಜ್ಯವನ್ನು ನಿರ್ಮಿಸಬೇಕು’ ಎಂದು ಡಾ.ಹಂಸರಾಜ್ ಆಳ್ವ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article