ಯುವತಿ ಪರಾರಿ ಹಿಂದೆ ಲವ್ ಜಿಹಾದ್ ಆರೋಪ: ಎಸ್ಡಿಪಿಐ ಕೈವಾಡ
ಮಂಗಳೂರು: ನನ್ನ ಮಗಳನ್ನು ಅನ್ಯಮತೀಯ ಯುವಕ ಕರೆದೊಯ್ದಿದ್ದು, ಇದು ಲವ್ ಜಿಹಾದ್ ಕೃತ್ಯವಾಗಿದೆ. ಈ ಪ್ರಕರಣದಲ್ಲಿ ಎಸ್ಡಿಪಿಐ ಕೈವಾಡವಿದ್ದು, ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಾಸರಗೋಡು ಕೂಡ್ಲು ಮೀಪುಗಿರಿ ನಿವಾಸಿ ವಿಶ್ವನಾಥ ಹೇಳಿದರು.
ಸುರತ್ಕಲ್ ಶ್ರೀನಿವಾಸ ಕಾಲೇಜಿನಲ್ಲಿ ವ್ಯಾಸಂಗ ಪೂರೈಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ 25 ವರ್ಷ ಪ್ರಾಯದ ನನ್ನ ಮಗಳನ್ನು ವಯನಾಡು ಮೂಲದ, ಸುರತ್ಕಲ್ನಲ್ಲಿ ಎಸ್ಡಿಪಿಐ ಮುಖಂಡನಿಗೆ ಸೇರಿದ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಅನ್ಯಮತೀಯ ಯುವಕ ಕರೆದೊಯ್ದಿದ್ದಾನೆ. ಕಾಲೇಜಿಗೆ ತೆರಳುತ್ತಿದ್ದ ವೇಳೆ ಆಕೆ ಸುರತ್ಕಲ್ನ ಪಿಜಿಯೊಂದರಲ್ಲಿ ವಾಸವಿದ್ದಳು. ಕಳೆದ ಜೂನ್ನಿಂದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಳು. ಆದರೆ, ಕಳೆದ ಶನಿವಾರ ಆಕೆ ಸುರತ್ಕಲ್ನ ಪಿಜಿಯಿಂದ ಯುವಕನೊಂದಿಗೆ ತೆರಳಿರುವುದು ಸಿಸಿ ಕ್ಯಾಮೆರಾ ಮೂಲಕ ತಿಳಿಯಿತು. ಆಕೆಯನ್ನು ವಯನಾಡ್ನಲ್ಲಿ ಯುವಕ ಇರಿಸಿಕೊಂಡಿದ್ದು, ಮಗಳನ್ನು ನಮ್ಮ ಮನೆಗೆ ಕರೆತರುವಲ್ಲಿ ಕರ್ನಾಟಕ ಸರಕಾರ ಹಾಗೂ ಪೊಲೀಸರು ಸಹಕಾರ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮನವಿ ಮಾಡಿದರು.
ವಯನಾಡ್ನ ಯುವಕನೊಂದಿಗೆ ಆಕೆ ರಿಜಿಸ್ಟರ್ ವಿವಾಹವಾಗಲು ಮುಂದಾಗಿರುವುದು ರಿಜಿಸ್ಟರ್ ಕಚೇರಿಯ ನೋಟಿಸ್ ಬೋರ್ಡ್ನ ಮೂಲಕ ಕಳೆದ ಶನಿವಾರ ನಮ್ಮ ಗಮನಕ್ಕೆ ಬಂದಿತ್ತು. ಈ ಬಗ್ಗೆ ಹುಡುಗಿಯ ತಾಯಿ ಆಕೆಗೆ ಕರೆ ಮಾಡಿ ಪ್ರಶ್ನಿಸಿದಾಗ ‘ಹಾಗೇನಿಲ್ಲ’ ಎಂದು ಉತ್ತರಿಸಿದ್ದಳು. ಆದರೆ, ಬಳಿಕ ಆಕೆಯ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ನಾನು ಸುರತ್ಕಲ್ಗೆ ಬಂದಿರುವುದಾಗಿ ಆಕೆ ತನ್ನ ಸಹೋದರಿಗೆ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಸುರತ್ಕಲ್ನ ಪಿಜಿಗೆ ತೆರಳಿ ಪರಿಶೀಲಿಸಿದಾಗ ಆಕೆ ಅಲ್ಲಿಂದ ತೆರಳಿರುವುದು ಕಂಡುಬಂತು. ಈ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು ಎಂದಿದ್ದಾರೆ.