ಯೋಗದ ಯಮ, ನಿಯಮ, ಸೂಚನೆ ಪಾಲಿಸಿ ನಿಯಮಿತವಾಗಿ ಯೋಗ ಅಭ್ಯಾಸ ಮಾಡಿ: ಸ್ವಾಮಿ ಜಿತಕಾಮನಂದ ಜೀ ಮಹಾರಾಜ್
Tuesday, February 10, 2026
ಮಂಗಳೂರು: ಯೋಗವು ಪ್ರಾಚೀನದಿಂದಲೂ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದ್ದು, ಜನರಿಗೆ ಶಾಂತತೆ, ಶಾಂತಿ, ಆತ್ಮವಿಶ್ವಾಸ ಮತ್ತು ಧೈರ್ಯವನ್ನು ನೀಡುತ್ತದೆ. ಯೋಗದ ಯಮ, ನಿಯಮ, ಸೂಚನೆ ಪಾಲಿಸಿ ನಿಯಮಿತವಾಗಿ ಯೋಗ ಅಭ್ಯಾಸ ಮಾಡಿ. ಯೋಗದ ಮೊದಲ ಮೆಟ್ಟಿಲು ‘ಯಮ’ವನ್ನು ಆಚರಿಸಿದರೆ ಮಾನಸಿಕ ಶುದ್ಧಿಯಾಗಿ ನೈತಿಕ ಸುಧಾರಣೆಯಾಗುವುದು. ಇದು ವ್ಯಕ್ತಿಗೆ ಮತ್ತು ಸಮಾಜಕ್ಕೆ ಅನ್ವಯವಾಗುತ್ತದೆ. ಯೋಗ ಸಾಧನೆಯ ಎರಡನೇ ಮೆಟ್ಟಿಲು ‘ನಿಯಮ’ ಶಾರೀರಿಕ ಹಾಗೂ ಮಾನಸಿಕ ನಡವಳಿಕೆಯ ಮೂಲಕ ದೈಹಿಕ ಮತ್ತು ಮಾನಸಿಕ ಏಳಿಗೆಯಾಗಿ ಆರೋಗ್ಯ ವರ್ಧನೆಯಾಗುವುದು ಎಂದು ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ತಿಳಿಸಿದರು.
ಅವರು ಇಂದು ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ಫೆಬ್ರವರಿ ತಿಂಗಳ ಸಂಜೆಯ ಶಿಬಿರವನ್ನು ಅವರು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಪ್ರಯೋಜನಗಳನ್ನು ತಿಳಿಸಿದರು.
ಶಿಬಿರದಲ್ಲಿ ಪ್ರಾರ್ಥನೆ, ಧ್ಯಾನ, ಅಷ್ಟಾಂಗ ಯೋಗದ ಮಾಹಿತಿ, ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಸರಳ ವ್ಯಾಯಾಮ, ಸೂರ್ಯನಮಸ್ಕಾರ, ಆಸನಗಳು, ಪ್ರಾಣಾಯಾಮ ಹಾಗೂ ಯಾವ ಕಾಯಿಲೆಗೆ ಯಾವ ಯೋಗ, ಮಂತ್ರ ಮುದ್ರೆಗಳು ತಿಳಿಸಿಕೊಡಲಾಗುವುದು. ಯೋಗಚಕ್ರದ ಮಾಹಿತಿ, ವರ್ಣಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ದೇಲಂಪಾಡಿಯವರು ಶಿಬಿರದ ಮಾಹಿತಿ ತಿಳಿಸಿದರು.
ದೇಲಂಪಾಡಿಯವರ ಶಿಷ್ಯರಾದ ಸುಮಾ, ಚಂದ್ರಹಾಸ ಬಾಳ, ಮತ್ತು ಪ್ರೇಮ ಉಪಸ್ಥಿತರಿದ್ದರು.
ಆಸಕ್ತರು ಯೋಗ ಶಿಬಿರದಲ್ಲಿ ನೋಂದಾಯಿಸಿಕೊಳ್ಳಲು ಆಶ್ರಮದ ಕಾರ್ಯಾಲವನ್ನು ದೂ.ಸಂ. 0824-2414412 ಸಂಪರ್ಕಿಸಬಹುದು.





