ಯುವವಾಹಿನಿಯಿಂದ ಬಡ ಕುಟುಂಬಕ್ಕೆ ಸೂರು: ಮೂಡುಬಿದಿರೆ ಘಟಕದಿಂದ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಮುರಳೀಧರ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್ ಪ್ರಾರ್ಥನೆ ಸಲ್ಲಿಸಿ ಶಿಲಾನ್ಯಾಸ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪಡುಮಾರ್ನಾಡು ಗ್ರಾ.ಪಂ ಸದಸ್ಯ ರಮೇಶ್ ಶೆಟ್ಟಿ ರೂ.10,000, ಹಿರಿಯರಾದ ಮೋಹನ್ ಕೋಟ್ಯಾನ್ ರೂ.3,000 ದೇಣಿಗೆ ನೀಡಿ ಶುಭ ಹಾರೈಸಿದರು. ವಾಸುದೇವ ಭಟ್ ಅವರು ರೂ.5,000 ದೇಣಿಗೆಯನ್ನು ಘೋಷಿಸಿದರು. ಘಟಕದ ಗೌರವ ಸಲಹೆಗಾರ ಸುರೇಶ್ ಕೋಟ್ಯಾನ್ ಒಂದು ಲೋಡ್ ಜಲ್ಲಿ ನೀಡುವುದಾಗಿ ತಿಳಿಸಿದರು. ಸುಶಾಂತ್ ಕರ್ಕೇರ ಅವರು ಮನೆಗೆ ಸಂಪೂರ್ಣ ಟೈಲ್ಸ್ ಒದಗಿಸುವ ಭರವಸೆ ನೀಡಿದರು.
ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಶಾಂತ್ ಕರ್ಕೇರ, ಮೂಡುಬಿದಿರೆ ಘಟಕದ ಪ್ರಥಮ ಉಪಾಧ್ಯಕ್ಷ ವಿಧೇಶ್ ಎಂ., ದ್ವಿತೀಯ ಉಪಾಧ್ಯಕ್ಷ ಗಿರೀಶ್ ಕೋಟ್ಯಾನ್, ಮಹಿಳಾ ಸದಸ್ಯೆಯರಾದ ಜಯಶೀಲಾ ಪೂಜಾರಿ, ಶೋಭಾ ದಿನೇಶ್ ಹಾಗೂ ಮನೆಯ ಗುತ್ತಿಗೆದಾರ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಬಾಲಪ್ರತಿಭೆಯ ಕುಟುಂಬಕ್ಕೆ ಬೆಂಬಲದ ಕರೆ
ಮೂಡುಬಿದಿರೆಯ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಪುಟ್ಟ ಪ್ರತಿಭೆಯ ಕುಟುಂಬದ ಸಂಕಷ್ಟವನ್ನು ಮನಗಂಡ ಯುವವಾಹಿನಿ, ಅವರ ಕುಟುಂಬಕ್ಕೆ ಹೊಸ ಮನೆ ನಿರ್ಮಿಸಿಕೊಡುವ ಸಂಕಲ್ಪ ಕೈಗೊಂಡಿದ್ದು, ಸಾರ್ವಜನಿಕರಿಂದ ಸಹಕಾರ ಕೋರಿದೆ.
ಸಂಘದ ಪದಾಧಿಕಾರಿಗಳು ಮಾತನಾಡಿ, ಒಂದು ಸಣ್ಣ ಧನಸಹಾಯವೂ ಈ ಕುಟುಂಬದ ಕನಸಿನ ಮನೆ ಸಾಕಾರಕ್ಕೆ ನೆರವಾಗಲಿದೆ. ಆಸಕ್ತರು ಸಹಾಯ ಹಸ್ತ ಚಾಚಬೇಕು ಎಂದು ಮನವಿ ಮಾಡಿದ್ದಾರೆ.
