ಯುವವಾಹಿನಿಯಿಂದ ಬಡ ಕುಟುಂಬಕ್ಕೆ ಸೂರು: ಮೂಡುಬಿದಿರೆ ಘಟಕದಿಂದ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ

ಯುವವಾಹಿನಿಯಿಂದ ಬಡ ಕುಟುಂಬಕ್ಕೆ ಸೂರು: ಮೂಡುಬಿದಿರೆ ಘಟಕದಿಂದ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ


ಮೂಡುಬಿದಿರೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಮೂಡುಬಿದಿರೆ ಘಟಕವು ಮೂಡುಮಾರ್ನಾಡು ಗ್ರಾಮದ ತಂಡ್ರಕೆರೆ ನಿವಾಸಿಗಳಾದ ಸುಮಿತ್ರಾ-ವಿಶ್ವನಾಥ್ ದಂಪತಿಯ ಶಿಥಿಲಗೊಂಡಿದ್ದ ಮನೆಯನ್ನು ಸುಮಾರು ರೂ.6 ಲಕ್ಷ ವೆಚ್ಚದಲ್ಲಿ ಮರುನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದು, ಬುಧವಾರ ಶಿಲಾನ್ಯಾಸ ನಡೆಯಿತು.

ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಮುರಳೀಧರ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್ ಪ್ರಾರ್ಥನೆ ಸಲ್ಲಿಸಿ ಶಿಲಾನ್ಯಾಸ ನೆರವೇರಿಸಿದರು. 


ಯೋಜನೆಯ ರೂವಾರಿಯಾದ ಯುವವಾಹಿನಿ ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕ ಶಂಕರ್ ಕೋಟ್ಯಾನ್ ಮಾತನಾಡಿ, ಸುಮಿತ್ರಾ ಅವರು ಯುವವಾಹಿನಿಯ ಸಕ್ರಿಯ ಸದಸ್ಯೆಯಾಗಿದ್ದು, ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲೂ ತೊಡಗಿಸಿಕೊಂಡಿದ್ದಾರೆ. ಅವರು ಶೋಚನೀಯ ಸ್ಥಿತಿಯ ಮನೆಯಲ್ಲಿ ವಾಸಿಸುತ್ತಿರುವುದು ನಮ್ಮ ಗಮನಕ್ಕೆ ಬಂದ ತಕ್ಷಣವೇ ಈ ಯೋಜನೆ ರೂಪಿಸಲಾಗಿದೆ. ಸುಮಾರು 600 ಚ.ಅಡಿ ವಿಸ್ತೀರ್ಣದ ಮನೆಯನ್ನು ಮರುನಿರ್ಮಾಣ ಮಾಡಿಕೊಡುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಡುಮಾರ್ನಾಡು ಗ್ರಾ.ಪಂ ಸದಸ್ಯ ರಮೇಶ್ ಶೆಟ್ಟಿ ರೂ.10,000, ಹಿರಿಯರಾದ ಮೋಹನ್ ಕೋಟ್ಯಾನ್ ರೂ.3,000 ದೇಣಿಗೆ ನೀಡಿ ಶುಭ ಹಾರೈಸಿದರು. ವಾಸುದೇವ ಭಟ್ ಅವರು ರೂ.5,000 ದೇಣಿಗೆಯನ್ನು ಘೋಷಿಸಿದರು. ಘಟಕದ ಗೌರವ ಸಲಹೆಗಾರ ಸುರೇಶ್ ಕೋಟ್ಯಾನ್ ಒಂದು ಲೋಡ್ ಜಲ್ಲಿ ನೀಡುವುದಾಗಿ ತಿಳಿಸಿದರು. ಸುಶಾಂತ್ ಕರ್ಕೇರ ಅವರು ಮನೆಗೆ ಸಂಪೂರ್ಣ ಟೈಲ್ಸ್ ಒದಗಿಸುವ ಭರವಸೆ ನೀಡಿದರು.

ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಶಾಂತ್ ಕರ್ಕೇರ, ಮೂಡುಬಿದಿರೆ ಘಟಕದ ಪ್ರಥಮ ಉಪಾಧ್ಯಕ್ಷ ವಿಧೇಶ್ ಎಂ., ದ್ವಿತೀಯ ಉಪಾಧ್ಯಕ್ಷ ಗಿರೀಶ್ ಕೋಟ್ಯಾನ್, ಮಹಿಳಾ ಸದಸ್ಯೆಯರಾದ ಜಯಶೀಲಾ ಪೂಜಾರಿ, ಶೋಭಾ ದಿನೇಶ್ ಹಾಗೂ ಮನೆಯ ಗುತ್ತಿಗೆದಾರ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.


ಬಾಲಪ್ರತಿಭೆಯ ಕುಟುಂಬಕ್ಕೆ ಬೆಂಬಲದ ಕರೆ

ಮೂಡುಬಿದಿರೆಯ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಪುಟ್ಟ ಪ್ರತಿಭೆಯ ಕುಟುಂಬದ ಸಂಕಷ್ಟವನ್ನು ಮನಗಂಡ ಯುವವಾಹಿನಿ, ಅವರ ಕುಟುಂಬಕ್ಕೆ ಹೊಸ ಮನೆ ನಿರ್ಮಿಸಿಕೊಡುವ ಸಂಕಲ್ಪ ಕೈಗೊಂಡಿದ್ದು, ಸಾರ್ವಜನಿಕರಿಂದ ಸಹಕಾರ ಕೋರಿದೆ.

ಸಂಘದ ಪದಾಧಿಕಾರಿಗಳು ಮಾತನಾಡಿ, ಒಂದು ಸಣ್ಣ ಧನಸಹಾಯವೂ ಈ ಕುಟುಂಬದ ಕನಸಿನ ಮನೆ ಸಾಕಾರಕ್ಕೆ ನೆರವಾಗಲಿದೆ. ಆಸಕ್ತರು ಸಹಾಯ ಹಸ್ತ ಚಾಚಬೇಕು ಎಂದು ಮನವಿ ಮಾಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article